ಬೆಂಗಳೂರು: `ದೇಶದ ರಕ್ಷಣಾ ವ್ಯವಸ್ಥೆಗೆ ಎಚ್ಎಎಲ್ ಕೊಡುಗೆ’ ಎಂಬ ಶೀರ್ಷಿಕೆಯಡಿ ಶನಿವಾರ ಹಮ್ಮಿಕೊಂಡಿರುವ ಸಂವಾದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ
ಕಬ್ಬನ್ ಪಾರ್ಕ್ ನ ಮಿನ್ಕ್ಸ್ ಸ್ಕ್ವೇರ್ ಬಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹೆಚ್ಎಎಲ್ ನ ನಿವೃತ್ತ ಹಾಗೂ ಹಾಲಿ ಸಿಬ್ಬಂದಿ ಸೇರಿದಂತೆ ಸುಮಾರು ನೂರು ಜನರೊಂದಿಗೆ ರಾಹುಲ್ ಗಾಂಧಿ ಒಂದರಿಂದ ಎರಡು ಗಂಟೆಗಳ ಕಾಲ ಸಂವಾದ ನಡೆಸಲಿದ್ದಾರೆ.
ಮಧ್ಯಾಹ್ನ 1.55ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ರಾಹುಲ್ ಗಾಂಧಿ ನೇರವಾಗಿ ಕುಮಾರಕೃಪಾ ಅತಿಥಿಗೃಹಕ್ಕೆ ಅಗಮಿಸುತ್ತಾರೆ. 2.30ಕ್ಕೆ ಅಗಮಿಸುವ ಅವರು ಪಕ್ಷದ ಆಯ್ದ ಕೆಲವು ನಾಯಕರ ಜೊತೆ ಸಭೆ ನಡೆಸುತ್ತಾರೆ. ಸಂಜೆ 3.30ಕ್ಕೆ ಕಬ್ಬನ್ ಪಾರ್ಕ್ ನ ಮಿನ್ಕ್ಸ್ ಸ್ಕ್ವೇರ್ ಬಳಿ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಸಂಜೆ 5 ರವರೆಗೆ ಇಲ್ಲಿದ್ದು, 6 ಗಂಟೆಗೆ ಮರಳಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಈಗಾಗಲೇ ರಾಹುಲ್ ಗಾಂಧಿ ಪಕ್ಷದ ನಾಯಕರಿಗೆ ಎಚ್ಎಎಲ್ ಕುರಿತು ಸಮಗ್ರ ಮಾಹಿತಿ ಕಲೆ ಹಾಕಿ ತಮಗೆ ನೀಡುವಂತೆ ಸೂಚಿಸಿದ್ದಾರೆ. ಅದರಂತೆ ಎಲ್ಲ ಮಾಹಿತಿಗಳನ್ನು ರಾಹುಲ್ ಗಾಂಧಿಗೆ ಒದಗಿಸಲಾಗಿದೆ. ಅದನ್ನು ಆಧರಿಸಿ ಅವರು ಸಂವಾದ ನಡೆಸುವ ಸಾಧ್ಯತೆ ಇದೆ.
ಸಂವಾದ ಯಾಕೆ?
ಕೇಂದ್ರ ಸರ್ಕಾರದ ರಫೇಲ್ ಯುದ್ಧ ವಿಮಾನ ಖರೀದಿ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ನಡೆಸುತ್ತಿದೆ. ಎಚ್ಎಎಲ್ಗೆ ಧಕ್ಕಬೇಕಿದ್ದ ಈ ಖರೀದಿ ಟೆಂಡರ್, ದೇಶದ ಖಾಸಗಿ ಕಂಪನಿ ಪಾಲಾಗಿದೆ. ರಿಲಯನ್ಸ್ ಸಂಸ್ಥೆ ಇದರ ಪಾಲುದಾರನಾಗಿದ್ದು, ಯುದ್ಧ ವಿಮಾನ ಸಿದ್ಧಪಡಿಸುವ ಅನುಭವ ಇಲ್ಲದ ಕಂಪನಿಗೆ ಡೀಲ್ ನೀಡಲಾಗಿದೆ. ಅಲ್ಲದೇ ಇದರ ಮೊತ್ತವನ್ನು ಕೂಡ ತಿಳಿಸುತ್ತಿಲ್ಲ. ಎಲ್ಲವನ್ನೂ ಗುಪ್ತವಾಗಿಡಲಾಗಿದೆ. ಇಲ್ಲೊಂದು ದೊಡ್ಡ ವಂಚನೆಯಾಗಿದೆ ಎಂದು ರಾಹುಲ್ ಗಾಂಧಿ ನಿರಂತರ ಆರೋಪ ಮಾಡುತ್ತ ಬಂದಿದ್ದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಇದನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಳ್ಳುವ ಉದ್ದೇಶದ ಹಿನ್ನೆಲೆಯಲ್ಲಿ ಈ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
Congress President Shri. Rahul Gandhi will have an interaction tomorrow (13-Oct-2018) at 3-30pm. regarding the injustice done to HAL in the #RafaleDeal at Minsk Square, Bangalore.#RahulGandhiWithHAL pic.twitter.com/eHgm3K2N3Y
— Karnataka Congress (@INCKarnataka) October 12, 2018