ಬಳ್ಳಾರಿ: ಕಾಂಗ್ರೆಸ್ನ ಯುವರಾಜ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕೊಲೆ ಮಾಡುವವರಿಗೆ ಹುಡುಕಿ ಅವಾರ್ಡ್ ಕೊಡಬೇಕು ಎಂದು ಚಕ್ರವರ್ತಿ ಸೂಲಿಬೆಲೆ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ನಡೆದ ‘ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು’ ಎನ್ನುವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಸೂಲಿಬೆಲೆ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸಲಾಗದವರು ರಾಹುಲ್ ಗಾಂಧಿ ಕೊಲೆ ಸುದ್ದಿ ಹಬ್ಬಿಸಿದ್ದಾರೆ. ಸ್ನೈಪರ್ ರೈಫಲ್ನಿಂದ ರಾಹುಲ್ ಗಾಂಧಿ ಅವರನ್ನು ಕೊಲೆ ಮಾಡಲು ಯತ್ನಿಸಿದ್ದಾರೆ ಅಂತ ಕಾಂಗ್ರೆಸ್ಸಿನವರು ಬೊಬ್ಬೆ ಹೊಡೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ತಜ್ಞರೊಬ್ಬರು, ಎಲ್ಲಿಂದ ಶೂಟ್ ಮಾಡಿದ ದೂರ ಹಾಗೂ ಜಾಗ ತಿಳಿಯಬಾರದು ಎನ್ನುವ ಉದ್ದೇಶಕ್ಕೆ ಸ್ನೈಪರ್ ರೈಫಲ್ ಬಳಸುತ್ತಾರೆ. ಆದರೆ ಲೇಸರ್ ಲೈಟ್ ಬಿಟ್ಟು ನಮ್ಮ ಗುರಿ ಇದು ಎನ್ನುವ ಮುಟ್ಟಾಳತನವನ್ನು ಹಂತಕರು ಮಾಡಲ್ಲ ಅಂತ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ರಾಹುಲ್ ತಲೆಯ ಮೇಲೆ ಬಿದ್ದಿದ್ದು ಛಾಯಾಗ್ರಾಹಕ ಬಳಕೆ ಮಾಡಿದ್ದ ಮೊಬೈಲ್ ಲೈಟ್!
ಕಾಂಗ್ರೆಸ್ನವರು ಆರೋಪ ಮಾಡಿದ ಬಳಿಕ ತನಿಖೆ ನಡೆಸಲಾಯಿತು. ಆಗ ಹಸಿರು ಬೆಳಕು ರಾಹುಲ್ ಗಾಂಧಿ ಅವರ ಸಮೀಪದಲ್ಲಿದ್ದ ವ್ಯಕ್ತಿ ಮೊಬೈಲ್ ಕ್ಯಾಮೆರಾದಿಂದ ಬಿದ್ದಿದೆ ಎಂದು ವರದಿಯಾಗಿತ್ತು. ರಾಹುಲ್ ಗಾಂಧಿ ಅವರನ್ನು ಕೊಲೆ ಮಾಡುವ ಪುಣ್ಯಾತ್ಮ ಯಾರಿದ್ದಾರೆ? ಎಲ್ಲಿಯವರೆಗೆ ರಾಹುಲ್ ಗಾಂಧಿ ಜೀವಂತವಾಗಿ ಇರುತ್ತಾರೋ ಅಲ್ಲಿಯವರೆಗೂ ಮೋದಿ ಪದೇ ಪದೇ ಪ್ರಧಾನಿಯಾಗುತ್ತಾರೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಬುಲೆಟ್ ಪ್ರೂಫ್ ಕ್ಯಾಬಿನ್ನಲ್ಲಿ ನಿಂತು ಮಾತನಾಡುತ್ತಿದ್ದರು. ಆದರೆ 56 ಇಂಚು ಎದೆಯುಳ್ಳ ಪ್ರಧಾನಿ ನರೇಂದ್ರ ಮೋದಿ ಅವರು ನಾನು ನಿಮ್ಮ ಮುಂದೆ ನಿಂತು ಮಾತನಾಡುತ್ತೇನೆ ಬನ್ನಿ ಎನ್ನುತ್ತಾರೆ. ಇದು ನರೇಂದ್ರ ಮೋದಿ ಅವರ ಸಾಧನೆ ಎಂದರು.
ಸರ್, ಈ ಬಾರಿ ನಮ್ಮ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ಇದೆ. ನಾವು ಗೆಲ್ಲಬೇಕು ಅಂದ್ರೆ ಏನು ಮಾಡಬೇಕು ಎಂದು ಲೋಕಸಭಾ ಚುನಾವಣೆಯ ಕೆಲವು ಅಭ್ಯರ್ಥಿಗಳು ನನ್ನಲ್ಲಿ ಕೇಳುತ್ತಾರೆ. ಅದಕ್ಕೆ ನಾನು, ರಾಹುಲ್ ಗಾಂಧಿ ಅವರನ್ನು ಕರೆಸಿದರೆ ನಿಮ್ಮ ಗೆಲುವು ಖಂಡಿತ ಆಗುತ್ತದೆ ಎಂದು ಸಲಹೆ ನೀಡುತ್ತೇನೆ ಎಂದರು.