ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಪ್ರಧಾನಿ ಆಗೋದರ ಬಗ್ಗೆ ನಮ್ಮ ಪಾರ್ಟಿ ತೀರ್ಮಾನ ಮಾಡುತ್ತದೆ. ದೇಶದ ಹಿತದೃಷ್ಟಿಯಿಂದ ಆ ಮನೆತನ ಯಾವಾಗಲೂ ತ್ಯಾಗ ಮಾಡುತ್ತಾ ಬಂದಿದೆ ಅಂತ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋನಿಯಾ ಗಾಂಧಿಯವರು ಯಾವತ್ತೋ ಪ್ರಧಾನಿ ಆಗಬಹುದಿತ್ತು. ರಾಹುಲ್ ಗಾಂಧಿಯವರೂ ಪ್ರಧಾನಿಯಾಗಬೇಕಿತ್ತು. ಆದ್ರೆ ವ್ಯಕ್ತಿಗಿಂತ ದೇಶ ಮುಖ್ಯ ಅನ್ನೋದನ್ನು ರಾಹುಲ್ ಪ್ರತಿಪಾದನೆ ಮಾಡುತ್ತಾ ಬಂದಿದ್ದಾರೆ ಅಂದ್ರು.
ರಾಷ್ಟ್ರಧ್ವಜ ನನ್ನ ಧರ್ಮ ಅಂತ ಹೇಳಿದವರು ರಾಹುಲ್ ಗಾಂಧಿಯವರು. ಈ ಹಿನ್ನೆಲೆಯಲ್ಲಿ ಅವರು ನಾನು ಪ್ರಧಾನಿಯಾಗಬೇಕೆಂದು ಎಲ್ಲೂ ಹೇಳಿಕೆ ನೀಡಿಲ್ಲ. ಯಾಕಂದ್ರೆ ಬೇರೆಯವರಿಗೂ ಅವಕಾಶ ಸಿಗಲಿ ಅಂತ ನಂಬಿದ್ದಾರೆ. ಒಟ್ಟಿನಲ್ಲಿ ರಾಹುಲ್ ಗಾಂಧಿಯೇ ನಮ್ಮ ನಾಯಕ ಅಂತ ಅವರು ಹೇಳಿದ್ರು. ಇದನ್ನೂ ಓದಿ: ವೈಯಕ್ತಿಕ ಕಾರಣದಿಂದ ಆತ್ಮಹತ್ಯೆಯೇ ಹೊರತು, ಸಾಲದಿಂದಲ್ಲ: ಆತ್ಮಹತ್ಯೆಗೆ ಡಿಕೆಶಿ ವ್ಯಾಖ್ಯಾನ
ಇದೇ ಸಂದರ್ಭದಲ್ಲಿ ಮಲಪ್ರಭೆಗೆ ಮಹದಾಯಿ ನೀರನ್ನು ತಿರುಗಿಸಿಕೊಂಡಿದೆ ಎಂಬ ಗೋವಾ ಸರ್ಕಾರದ ಕ್ಯಾತೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಕಾನೂನು ಚೌಕಟ್ಟಿನಲ್ಲೇ ಇದ್ದೇವೆ. ಲೀಕೇಜ್ ನೀರಿನ ಬಗ್ಗೆಯೂ ನ್ಯಾಯಧೀಕರಣ ಗಮನಕ್ಕೆ ತಂದಿದ್ದೇವೆ. ಫೋಟೋ ಸಮೇತ ಕೊಟ್ಟಿದ್ದೇವೆ. ನಾವು ಎಲ್ಲೂ ನೀರನ್ನು ಬಳಕೆ ಮಾಡ್ತಿಲ್ಲ. ಗೋವಾ ಸಣ್ಣ ರಾಜ್ಯ. ಹೀಗಾಗಿ ಅವರ ಜೊತೆ ಯುದ್ಧ, ಜಗಳ ಮಾಡೋದಕ್ಕೆ ಇಷ್ಟ ಇಲ್ಲ. ಆಗಸ್ಟ್ ಒಳಗೆ ನ್ಯಾಯಬದ್ಧವಾದ ತೀರ್ಪು ಬರುವ ನಂಬಿಕೆ ಇದೆ. ಗೋವಾದವರು ಕೂಡ ಆ ನೀರನ್ನ ಬಳಸಿಕೊಳ್ಳಲಿ ಅಂತ ಹೇಳಿದ್ರು.