ನವದೆಹಲಿ: ಕೈಯಲ್ಲಿ ಸಂವಿಧಾನ ಪ್ರತಿ ಹಿಡಿದು, ಭಾರತ್ ಜೋಡೋ ಘೋಷಣೆ ಕೂಗಿ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಲೋಕಸಭಾ ಸದಸ್ಯರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಹುಲ್ ಗಾಂಧಿ ಅವರು ವಯನಾಡ್ ಮತ್ತು ರಾಯ್ಬರೇಲಿ ಎರಡು ಕ್ಷೇತ್ರಗಳಿಂದಲೂ ಆಯ್ಕೆಯಾಗಿದ್ದರು. ಈಗ ಅವರ ಸಹೋದರಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸಲು ವಯನಾಡ್ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಇದನ್ನೂ ಓದಿ: ಲೋಕಸಭೆಯಲ್ಲಿ ಜೈ ಪ್ಯಾಲೆಸ್ತೀನ್ ಎಂದು ಘೋಷಣೆ ಕೂಗಿದ ಓವೈಸಿ
ಇಂಡಿಯಾ ಒಕ್ಕೂಟದ ಸಂಸದರು ಸೋಮವಾರ ಸಂಸತ್ತಿನ ಅಧಿವೇಶದಲ್ಲಿ ಸಂವಿಧಾನದ ಕಿರುಪುಸ್ತಕ ಪ್ರದರ್ಶಿಸಿದರು. ಪಕ್ಷದ ಹಲವಾರು ಸಂಸದರು ಈ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಸಂವಿಧಾನ ಕೈಪಿಡಿ ಹಿಡಿದು ರಾಹುಲ್ ಗಾಂಧಿ, ಸಂವಿಧಾನದ ಮೇಲೆ ದಾಳಿ ಮಾಡಲು ಪ್ರತಿಪಕ್ಷಗಳು ಸರ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು.
ತುರ್ತು ಪರಿಸ್ಥಿತಿ ಘೋಷಿಸಿ ಇಂದಿಗೆ 50 ವರ್ಷ ತುಂಬಿದ್ದು, ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ‘ತುರ್ತು ಪರಿಸ್ಥಿತಿಯನ್ನು ಹೇರಲು ಕಾರಣವಾದ ಮನಸ್ಥಿತಿಯು, ಅದನ್ನು ಹೇರಿದ ಅದೇ ಪಕ್ಷದಲ್ಲಿ ಹೆಚ್ಚು ಜೀವಂತವಾಗಿದೆ’ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಸೋರಿದ ರಾಮಮಂದಿರ ಗರ್ಭಗುಡಿ; ನಿರ್ಮಾಣ ಕಾರ್ಯದಲ್ಲಿ ಲೋಪ – ಪ್ರಧಾನ ಅರ್ಚಕ ಆರೋಪ