ನವದೆಹಲಿ: ರಾಹುಲ್ ಗಾಂಧಿಯವರು (Rahul Gandhi) ಪ್ರಧಾನಿಯಾದ ದಿನವೇ ಪಿಒಕೆ ಭಾರತದ ಭಾಗವಾಗಲಿದೆ ಎಂದು ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಹೇಳಿದ್ದಾರೆ. ಈ ಮೂಲಕ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರ ಹೇಳಿಕೆಯನ್ನು ಅವರು ಬೆಂಬಲಿಸಿದ್ದಾರೆ.
ರಾಹುಲ್ ಗಾಂಧಿಯವರು ಧೈರ್ಯಶಾಲಿ, ದೃಢ ನಿಶ್ಚಯದ ನಾಯಕ, ಆ ನಂಬಿಕೆ ನನ್ನಲ್ಲಿ ಇದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ‘ಭಾರತ್ ಜೋಡೋ ಯಾತ್ರೆ’ಯ ಮೂಲಕ ಅವರು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದ್ದಾರೆ. ರಾಷ್ಟ್ರದ ಬಗ್ಗೆ ಅವರ ಬದ್ಧತೆ ಗಮನಾರ್ಹವಾದದ್ದು ಎಂದು ಬಣ್ಣಿಸಿದ್ದಾರೆ.
ರಾಹುಲ್ ಅವರು ಈ ದೇಶವನ್ನು ಮುನ್ನಡೆಸುವ ದಿನ ಪಿಒಕೆ ವಿಮೋಚನೆಗೊಂಡು ಭಾರತದ ಭಾಗವಾಗುತ್ತದೆ. ಇದು ಸಂಭವಿಸುತ್ತದೆ ಎಂದು ನಾನು ಸಂಪೂರ್ಣವಾಗಿ ನಂಬುತ್ತೇನೆ ಎಂದು ಅವರು ಒತ್ತಿ ಹೇಳಿದ್ದಾರೆ.
ಹೈದರಾಬಾದಿನ ನಿಜಾಮ್ಪೇಟೆಯಲ್ಲಿ ನಡೆದ ಕಾಂಗ್ರೆಸ್ನ ‘ಜೈ ಹಿಂದ್ ಯಾತ್ರೆ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ಪಾಕಿಸ್ತಾನದ ವಿರುದ್ಧದ ಮಿಲಿಟರಿ ಕಾರ್ಯಾಚರಣೆ ಸಮಯದಲ್ಲಿ ಮೋದಿ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದರು. ಕದನ ವಿರಾಮ ಘೋಷಿಸುವ ಮೊದಲು ಸರ್ವಪಕ್ಷ ಸಭೆಯನ್ನು ಏಕೆ ಕರೆಯಲಿಲ್ಲ? ದಾಳಿಗೆ ಮೊದಲು ಒಂದು ಸಭೆ ನಡೆಸಲಾಗಿತ್ತು. ಅವುಗಳನ್ನು ಕೊನೆಗೊಳಿಸುವ ಮೊದಲು ಏಕೆ ಕರೆಯಲಿಲ್ಲ? ಎಂದು ರೆಡ್ಡಿ ಪ್ರಶ್ನಿಸಿದ್ದರು. ಅಲ್ಲದೇ ರಾಹುಲ್ ಗಾಂಧಿ ಪ್ರಧಾನಿಯಾದರೆ ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗ ಆಗಲಿದೆ ಎಂದಿದ್ದರು. ಇದರ ಬೆನ್ನಲ್ಲೇ ತಿವಾರಿಯವರು ಹೇಳಿಕೆ ನೀಡಿದ್ದಾರೆ.