ಚಿಕ್ಕಬಳ್ಳಾಪುರ: ರಾಜ್ಯ ವಿಧಾಸಭೆ ಚುನಾವಣೆ ಪ್ರಚಾರ ನಡೆಸುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರು ಇಂದು ಒಂದೇ ಕಾರಿನ ಸೀಟಿನಲ್ಲಿ ಕುಳಿತು ಪ್ರಯಾಣ ನಡೆಸಿ ಅಚ್ಚರಿ ಮೂಡಿಸಿದ್ದಾರೆ.
ರಾಜ್ಯ ಚುನಾವಣಾ ಪ್ರಚಾರದ ಭಾಗವಾಗಿ ಇಂದು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ನಾಯಕರು ಪ್ರಚಾರ ನಡೆಸಿದರು. ಸಂಜೆ ವೇಳೆಗೆ ಕೋಲಾರದಲ್ಲಿ ಪ್ರಚಾರ ಸಭೆ ಮುಗಿಸಿ ಬಳಿಕ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದರು. ಈ ವೇಳೆ ನಗರದ ಆರ್ ಟಿಒ ಕಚೇರಿ ಬಳಿಯ ಹೆಲಿಪ್ಯಾಡ್ ಗೆ ಆಗಮಿಸಿದ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹೆಲಿಪ್ಯಾಡ್ ನಿಂದ ಕಾರಿನ ಒಂದೇ ಸೀಟಿನಲ್ಲಿ ಒಬ್ಬರ ಮೇಲೆ ಒಬ್ಬರು ಕುಳಿತು ಪ್ರಯಾಣ ನಡೆಸಿದರು. ಹೆಲಿಪ್ಯಾಡ್ ನಲ್ಲಿ ಪ್ರತ್ಯೇಕ ವಾಹನಗಳಿದ್ದರೂ ಒಂದೇ ಕಾರಿನ ಇಕ್ಕಟ್ಟಿನಲ್ಲೇ ಕೂತು ಪ್ರಯಾಣ ನಡೆಸಿದ್ದು ನೆರೆದಿದ್ದ ಜನರಲ್ಲಿ ಅಚ್ಚರಿಗೆ ಕಾರಣವಾಯಿತು.
ನಗರದ ಹೊರವಲಯದ ಆರ್ ಟಿಓ ಕಚೇರಿ ಬಳಿ ಹೆಲಿಪ್ಯಾಡ್ ನಿಂದ ಸುಮಾರು ಒಂದೂವರೆ ಕಿ.ಮೀ ದೂರದ ಸಮಾವೇಶದ ಸ್ಥಳ ಸರ್ ಎಂ ವಿ ಕ್ರೀಡಾಂಗಣಕ್ಕೆ ಪ್ರಯಾಣಿಸಿದರು. ಈ ವೇಳೆ ಶಿಡ್ಲಘಟ್ಟ ವೃತ್ತದಲ್ಲಿ ರಾಹುಲ್ ಗಾಂಧಿ ಅವರಿಗೆ ವಿಶೇಷ ಆರತಿ ಮೂಲಕ ಮಹಿಳೆಯರು ಸ್ವಾಗತ ಕೋರಿದರು.
ಇದಕ್ಕೂ ಮುನ್ನ ಕೋಲಾರ ಜಿಲ್ಲೆಯ ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಿದ್ದ ರಾಹುಲ್ ಹಾಗೂ ರಾಜ್ಯ ನಾಯಕರು ಮುಳಬಾಗಿಲಿನ ಕುರುಡುಮಲೆಯ ಗಣಪತಿ ದೇವಾಲಯ, ಆಂಜನೇಯ ದೇವಾಲಯ, ದರ್ಗಾಗಳಿಗೆ ಭೇಟಿ ನೀಡಿದರು. ಬಳಿಕ ರೋಡ್ ಶೋ ನಡೆಸಿ ಬಹುಕಾಲದ ನೀರಿನ ಸಮಸ್ಯೆಯನ್ನ ಶಾಶ್ವತವಾಗಿ ಬಗೆಹರಿದುತ್ತೇವೆ. ಈಗ ನಮ್ಮ ಸರ್ಕಾರ ಯೋಜನೆ ಆರಂಭಿಸಿದೆ. ಅದು ಪೂರ್ಣಗೊಳ್ಳಲು ಮತ್ತೊಮ್ಮೆ ನಮಗೆ ಆಶೀರ್ವಾದ ಮಾಡಿ ಅಂತ ಮನವಿ ಮಾಡಿದರು.