ನವದೆಹಲಿ: ಸಂಸತ್ತಿನ ಭದ್ರತಾ ಲೋಪಕ್ಕೆ (Parliament Security Breach) ಪ್ರಧಾನಿ ನರೇಂದ್ರ ಮೋದಿಯವರ (Narendra Modi) ನೀತಿಗಳೇ ಕಾರಣ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದಾರೆ. ಪ್ರಧಾನಿ ಮೋದಿಯವರ ನೀತಿಗಳಿಂದ ದೇಶದ ನಾಗರಿಕರಿಗೆ ಉದ್ಯೋಗ ಸಿಗುತ್ತಿಲ್ಲ. ನಿರುದ್ಯೋಗವೇ ಭದ್ರತಾ ಲೋಪ ಸಂಭವಿಸಲು ಕಾರಣ ಎಂದು ದೂರಿದ್ದಾರೆ.
ಭಾರತೀಯರು ಪ್ರಸ್ತುತ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ನಿರುದ್ಯೋಗ. ಭದ್ರತಾ ಉಲ್ಲಂಘನೆಯು ನಿಜವಾಗಿಯೂ ಆಗಿದೆ. ಆದರೆ ಇದು ಏಕೆ ಆಯಿತು? ಅದಕ್ಕೆ ಮುಖ್ಯ ಕಾರಣ ನಿರುದ್ಯೋಗ. ಮೋದಿ ಅವರ ನೀತಿಗಳಿಂದಾಗಿ ಭಾರತದ ಜನರಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂಸತ್ ಮೇಲಿನ ದಾಳಿಯ ಪ್ರಮುಖ ರೂವಾರಿ ಲಲಿತ್ ಝಾ 7 ದಿನ ಪೊಲೀಸ್ ಕಸ್ಟಡಿಗೆ
ಪ್ರಧಾನಿಯವರ ನೀತಿಗಳಿಂದಾಗಿ ನಿರುದ್ಯೋಗ ಮತ್ತು ಹಣದುಬ್ಬರ ಸಮಸ್ಯೆ ತಲೆದೋರಿದೆ. ಸಂಸತ್ತಿನ ಭದ್ರತಾ ಉಲ್ಲಂಘನೆಗೆ ಇವೇ ಮುಖ್ಯ ಕಾರಣ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಭದ್ರತಾ ಲೋಪ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಅವರು ಮಾಧ್ಯಮಗಳೊಂದಿಗೆ ಮಾತ್ರ ಮಾತನಾಡುತ್ತಾರೆ. ಆದರೆ ಸದನದಲ್ಲಿ ಈ ವಿಷಯದ ಬಗ್ಗೆ ಹೇಳಿಕೆ ನೀಡುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಂಸತ್ತಿನ ಭದ್ರತಾ ಉಲ್ಲಂಘನೆಯನ್ನು ವಿರೋಧ ಪಕ್ಷಗಳು ರಾಜಕೀಯಗೊಳಿಸುತ್ತಿವೆ ಎಂಬ ಅಮಿತ್ ಶಾ ಅವರ ಹೇಳಿಕೆ ಕುರಿತು ಮಾತನಾಡಿ, ಅವರು ಕಾಂಗ್ರೆಸ್ನ ಹೆಸರನ್ನು ತೆಗೆದುಕೊಂಡು ಮತ ಕೇಳುತ್ತಾರೆ. ನೆಹರೂ ಮತ್ತು ಗಾಂಧೀಜಿಯನ್ನು ನಿಂದಿಸುವ ಮೂಲಕ ಮತಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಸಂಸತ್ ಸ್ಮೋಕ್ ಬಾಂಬ್ ಕೇಸ್ – ಟಿಎಂಸಿ ಶಾಸಕನ ಜೊತೆ ಆರೋಪಿ – ಫೋಟೋ ಹರಿಬಿಟ್ಟ ಬಿಜೆಪಿ
2001 ರ ಸಂಸತ್ ದಾಳಿಯ ಕರಾಳ ನೆನಪಿನ ದಿನದಂದೇ (ಡಿ.13) ಸಂಸತ್ತಿನ ಭದ್ರತಾ ಉಲ್ಲಂಘನೆ ಘಟನೆ ನಡೆಯಿತು. ಈ ವಿಚಾರವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷಗಳು ಜಗಳವಾಡುತ್ತಿವೆ. ಬಿಜೆಪಿ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಹೆಸರಿನಲ್ಲಿ ಆರು ಆರೋಪಿಗಳ ಪೈಕಿ ಇಬ್ಬರಿಗೆ ಸಂದರ್ಶಕರ ಪಾಸ್ಗಳನ್ನು ನೀಡಲಾಗಿದೆ ಎಂದು ವಿಪಕ್ಷಗಳು ಬಿಜೆಪಿಯನ್ನು ದೂರಿವೆ. ಸಂಸತ್ ದಾಳಿ ಪ್ರಕರಣದ ಆರೋಪಿಗಳು ವಿಪಕ್ಷಗಳ ಶಾಸಕ ಜೊತೆಗೆ ಗುರುತಿಸಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.