ಉಡುಪಿ: ಹಿಂದೂ (Hindu) ಎಂದರೆ ಅದೊಂದು ಜೀವನ ಪದ್ಧತಿ. ಆ ಪದ್ಧತಿಯಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು ಎಲ್ಲರೂ ಬರುತ್ತಾರೆ. ಹಿಂದೂ ಎಂದರೆ ಭಾರತವನ್ನು ಪ್ರೀತಿಸುವ ಮತ್ತು ಭಾರತವನ್ನು ಮಾತೃಭೂಮಿ ಎಂದು ಒಪ್ಪಿದ ಎಲ್ಲರೂ ಒಳಗೊಳ್ಳುತ್ತಾರೆ ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ (Raghupati Bhat) ಹೇಳಿದ್ದಾರೆ.
ಉಡುಪಿಯಲ್ಲಿ (Udupi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ ಎಂಬ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯನವರ ಹೇಳಿಕೆ ಅಜ್ಞಾನ ಪ್ರದರ್ಶಿಸುತ್ತದೆ. ಭಾರತವೇ ಶ್ರೇಷ್ಠ ಎಂದು ಭಾವಿಸುವವರೆಲ್ಲ ಹಿಂದೂಗಳು. ಯಾರು ಕೂಡ ಹಿಂದೂ ರಾಷ್ಟ್ರ ಮಾಡಲು ಬಿಡಲ್ಲ ಎಂದು ಹೇಳುವ ಪ್ರಶ್ನೆ ಬರುವುದಿಲ್ಲ. ಭಾರತವನ್ನು ಯಾವಾಗಲೂ ಹಿಂದುಸ್ಥಾನ ಎಂದು ಕರೆಯಲಾಗುತ್ತದೆ. ಇದು ಹಿಂದೂ ರಾಷ್ಟ್ರ, ಆ ಶಬ್ದವನ್ನು ಸಿದ್ದರಾಮಯ್ಯನವರು ಸರಿಯಾಗಿ ಅರ್ಥೈಸಿಕೊಂಡಿಲ್ಲ ಎಂದು ಅವರು ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ಮಾಸ್ಕ್ ಕಡ್ಡಾಯ ಇಲ್ಲ: ಸಿದ್ದರಾಮಯ್ಯ
ಸಿದ್ದರಾಮಯ್ಯನವರ ಹೇಳಿಕೆ ರಾಜಕೀಯ ತಂತ್ರ ಅಷ್ಟೇ. ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಹಿಂದೂಗಳನ್ನು ದೂಷಿಸುತ್ತಾರೆ. ಹಿಂದೂ ಜೀವನ ಪದ್ಧತಿ ಎಂದು ನಮಗೆ ಸಂಘಟನೆಗಳು ಹೇಳಿಕೊಟ್ಟಿವೆ. ಧರ್ಮ ಧರ್ಮಗಳ ಬಗ್ಗೆ ಭೇದ ಭಾವ ಮಾಡುವುದು ಸಿದ್ದರಾಮಯ್ಯನವರ ರಾಜಕಾರಣ ಎಂದು ಅವರು ಕಿಡಿಕಾರಿದ್ದಾರೆ.
ಹಿಂದೂ ಮುಸ್ಲಿಮರನ್ನು ಬೇರೆ ಮಾಡುವುದೇ ಅವರ ತಂತ್ರಗಾರಿಕೆ. ಬೇರೆ ದೇವರನ್ನು ಪೂಜಿಸಿದರು ಎಲ್ಲರೂ ಹಿಂದುಗಳೇ. ವೋಟ್ ಬ್ಯಾಂಕಿಗೋಸ್ಕರ ಸಿದ್ದರಾಮಯ್ಯ ಪ್ರತ್ಯೇಕತೆಯ ಮಾತನಾಡಬಹುದು ಎಂದು ಅವರು ದೂರಿದ್ದಾರೆ. ಇದನ್ನೂ ಓದಿ: ಅಜಿತ್ ಪವಾರ್, ಶಿಂಧೆಯ ಪೈಕಿ ಯಾರು ಮೊದಲು ಬರುತ್ತಾರೋ ಕಾದುನೋಡಿ – ಕರ್ನಾಟಕ ಕಾಂಗ್ರೆಸ್ ಬಗ್ಗೆ ಹೆಚ್ಡಿಕೆ ಬಾಂಬ್