ಉಡುಪಿ: ಕರಾವಳಿಯಲ್ಲಿ ಮತದಾರರಿಗೆ ಜೆಡಿಎಸ್ ಗೊತ್ತಿಲ್ಲ. ಅಲ್ಲಿ ಚಿಕ್ಕಮಗಳೂರಲ್ಲಿ ಪ್ರಮೋದ್ ಮಧ್ವರಾಜ್ ಅಂದರೆ ಯಾರಂತ ಗೊತ್ತಿಲ್ಲ ಎಂದು ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಲೇವಡಿ ಮಾಡಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಘುಪತಿ ಭಟ್, ಪ್ರಮೋದ್ ಮಧ್ವರಾಜ್ ಜನ್ಮದಲ್ಲೇ ಜೆಡಿಎಸ್ಗೆ ಪ್ರಥಮ ಬಾರಿಗೆ ವೋಟ್ ಹಾಕಲಿದ್ದಾರೆ. ಅವರೆ ಚುನಾವಣೆಗೆ ಸ್ಪರ್ಧಿಸಿರುವುದರಿಂದ ಜೆಡಿಎಸ್ಗೆ ವೋಟ್ ಮಾಡುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.
ಈ ಹಿಂದೆ ಅವರು, ಅವರ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ವೋಟು ಹಾಕಿದ ಉದಾಹರಣೆಗಳಿವೆ. ಅದು ಗುಪ್ತ ಮತದಾನವಾಗಿರುವುದರಿಂದ ನಮಗೆ ಗೊತ್ತಾಗಲ್ಲ. ಹೀಗಾಗಿ ಅವರ ಮನಸಾಕ್ಷಿಯನ್ನು ಕೇಳಿಕೊಂಡರೆ ಗೊತ್ತಾಗುತ್ತದೆ. ಹಲವು ಬಾರಿ ಅವರು ಬಿಜೆಪಿಗೆ ಮತ ಹಾಕಿದ್ದಾರೆ. ಈ ಬಾರಿ ಜೆಡಿಎಸ್ಗೆ ಮೊದಲ ಬಾರಿಗೆ ಮತ ಹಾಕಲಿದ್ದಾರೆ ಎಂದರು.
ಉಡುಪಿ ಚಿಕ್ಕಮಗಳೂರಲ್ಲಿ ಈ ಬಾರಿ ಜೆಡಿಎಸ್ ದಾಖಲೆ ಬರೆಯಲಿದೆ. ಇತಿಹಾಸದಲ್ಲೇ ಅತೀ ಹೆಚ್ಚು ವೋಟು ಜೆಡಿಎಸ್ಗೆ ಬೀಳಲಿದೆ. ಇಲ್ಲದಿದ್ದರೆ ಈ ಜಿಲ್ಲೆಯಲ್ಲಿ ಜೆಡಿಎಸ್ಗೆ ನೆಲೆಯೇ ಇಲ್ಲ. ಇದರ ಜೊತೆ ಪ್ರಮೋದ್ ಮಧ್ವರಾಜ್ ಈ ಕ್ಷೇತ್ರವನ್ನು ಕಾಂಗ್ರೆಸ್ ಮುಕ್ತ ಮಾಡಿದ್ದಾರೆ. ನೈಜ ಕಾಂಗ್ರೆಸ್ಸಿಗರು ಕೈ ಗುರುತು ಇಲ್ಲದ ಕಾರಣ ಈ ಬಾರಿ ಬಿಜೆಪಿಗೆ ಮತ ಹಾಕುತ್ತಾರೆ. ಉಡುಪಿಯ ಜನಕ್ಕೆ ಜೆಡಿಎಸ್ ಅಂದರೆ ಗೊತ್ತಿಲ್ಲ, ಇನ್ನೂ ಚಿಕ್ಕಮಗಳೂರಲ್ಲಿ ಪ್ರಮೋದ್ ಅಂದರೆ ಯಾರು ಎಂದು ಶಾಸಕ ಭಟ್ ಲೇವಡಿ ಮಾಡಿದರು.
ಈ ಬಾರಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆ ವನ್ ಸೈಡ್ ಆಗಿದೆ. ಬಿಜೆಪಿ ಪರವಾದ ಚುನಾವಣೆ ನಡೆದಿದೆ. ಕಾಂಗ್ರೆಸ್ ಜೆಡಿಎಸ್ ಆತ್ಮವಿಶ್ವಾಸ ಕಳೆದುಕೊಂಡಿದೆ ಎಂದು ಹೇಳಿದರು.