ಬೆಂಗಳೂರು: ಪುನೀತ್ ರಾಜ್ಕುಮಾರ್ ಸವಿ ನೆನಪಿನಲ್ಲಿ ಆಯೋಜಿಸಿರುವ ಅನ್ನಸಂತರ್ಪಣ ಕಾರ್ಯಕ್ರಮಕ್ಕೆ ದೂರದ ಊರುಗಳಿಂದ ಅಭಿಮಾನಿಗಳು ಆಗಮಿಸಿದ್ದಾರೆ. ಈ ಹಿನ್ನೆಲೆ ಅಭಿಮಾನಿಗಳ ಊರು ದೂರ ಇದೆ, ಆದರೆ ಮನಸ್ಸು ಹತ್ತಿರವಿದೆ ನಟ ರಾಘವೇಂದ್ರ ರಾಜ್ಕುಮಾರ್ ಹೇಳಿದ್ದಾರೆ.
ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಇಂದಿಗೆ 12 ದಿನ. ಈ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಇಂದು ಅಭಿಮಾನಿಗಳಿಗೆ ಹಾಗೂ ಗಣ್ಯರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಊಟದ ವ್ಯವಸ್ಥೆ ಮಾಡಿದ್ದಾರೆ. ಇದೇ ವೇಳೆ ಅಭಿಮಾನಿಗಳಿಗೆ ನಟ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಪುನೀತ್ ಪತ್ನಿ ಅಶ್ವಿನಿ ಅಭಿಮಾನಿಗಳಿಗೆ ಊಟ ಬಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದನ್ನೂ ಓದಿ: ಅನ್ನ ಸಂತರ್ಪಣೆ ವೇಳೆ ಪುನೀತ್ ನೆನೆದು ಕಣ್ಣೀರಿಟ್ಟ ಅಶ್ವಿನಿ
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್ ಅವರು, ಎಲ್ಲವನ್ನು ಅಭಿಮಾನಿಗಳೇ ಮಾಡುತ್ತಿದ್ದಾರೆ. ಅಭಿಮಾನಿಗಳು ಇಟ್ಟಿರುವ ಪ್ರೀತಿಗೆ ನಮ್ಮ ಸಾಷ್ಟಾಂಗ ನಮಸ್ಕಾರಗಳು. ಅಪ್ಪು ಅಭಿಮಾನಿಗಳ ಊರು ತುಂಬಾ ದೂರ ಇದ್ದರೂ, ಅವರ ಮನಸ್ಸು ತುಂಬಾ ಹತ್ತಿರ ಇದೆ. ಹಾಗಾಗಿ ದೂರದಲ್ಲಿದ್ದರು ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಎಲ್ಲರೂ ಚೆನ್ನಾಗಿ ಊಟ ಮಾಡಿ ನಿಮ್ಮ ಊರುಗಳಿಗೆ ಜೋಪಾನವಾಗಿ ಹೋಗಿ ಸೇರಿ ಎಂದು ನುಡಿದರು. ಇದನ್ನೂ ಓದಿ: ಖುದ್ದು ರಕ್ತದಾನ ಮಾಡಿ ಮಾದರಿಯಾದ ನಟ ಶಿವರಾಜ್ ಕುಮಾರ್
ಇಲ್ಲಿಯವರೆಗೂ ಎಲ್ಲ ಕಾರ್ಯವನ್ನು ನೀವೇ ನಡೆಸಿಕೊಟ್ಟಿದ್ದೀರಾ. ಇದನ್ನು ಸಹ ನೀವೇ ನಡೆಸಿಕೊಡಿ. ನನ್ನ ತಮ್ಮ ಹೋಗುವಾಗ ತನ್ನ ಎರಡು ಕಣ್ಣುಗಳನ್ನು ದಾನ ಮಾಡುವ ಮೂಲಕ ಒಳ್ಳೆಯ ವಿಚಾರವನ್ನು ಬಿಟ್ಟು ಹೋಗಿದ್ದಾನೆ. ಅಭಿಮಾನಿಗಳು ಅದನ್ನು ಪಾಲಿಸಬೇಕು. ಅವರ ಗುಣ ಹಾಗೂ ಸಂದೇಶದ ಹಿಂದೆ ಹೋಗಬೇಕೆ ಹೊರತು ಅವರ ಹಿಂದೆ ಅಲ್ಲ. ಅವರಿಲ್ಲ ಅಂದರೂ ನಾಲ್ಕು ಜನರ ಮೂಲಕ ಅವರ ಕಣ್ಣುಗಳು ಇದೆಲ್ಲವನ್ನು ನೋಡುತ್ತಿದೆ. ನೇತ್ರದಾನ ನಾವು ಮಾಡುತ್ತಿದ್ದೇವೆ. ನೀವು ಮಾಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಅಪ್ಪುನಂತ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ: ಶಿವಣ್ಣ ಭಾವುಕ