ವಿಜಯಪುರ: ರೇಬಿಸ್ (Rabies) ರೋಗಕ್ಕೆ ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಗುಣಪಡಿಸಬಹುದಾಗಿದೆ. ಇಲ್ಲದಿದ್ದರೆ ಅದು ನೇರವಾಗಿ ನರಮಂಡಲದ ಮೇಲೆ ಪರಿಣಾಮ ಬೀರಿ ಮಾರಣಾಂತಿಕವಾಗಬಹುದು ಎಂದು ಶ್ರೀ ಬಿ. ಎಂ.ಪಾಟೀಲ ವೈದ್ಯಕೀಯ ಕಾಲೇಜಿನ (Shri B. M. Patil Medical College) ಶಸ್ತ್ರಚಿಕಿತ್ಸೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮಂಜುನಾಥ ಸಾವಂತ ಹೇಳಿದ್ದಾರೆ.
ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿಯ ಬಿ.ಎಲ್.ಡಿ.ಇ (BLDE) ಪಿಯು ಕಾಲೇಜಿನಲ್ಲಿ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಸಮುದಾಯ ವೈದ್ಯಕೀಯ ವಿಭಾಗ ಹಾಗೂ ಶಸ್ತ್ರ ಚಿಕಿತ್ಸೆ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ರೇಬಿಸ್ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.ಇದನ್ನೂ ಓದಿ: ವಿರೋಧದ ನಡ್ವೆ ಮೈಸೂರಲ್ಲಿ ಮಹಿಷ ದಸರಾ ಆಚರಣೆ – ಜಿಲ್ಲಾಡಳಿತ, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೇಬಿಸ್ ಸಸ್ತನಿಗಳಲ್ಲಿ ವೈರಾಣುವಿನಿಂದ ಹರಡುವ ಕಾಯಿಲೆಯಾಗಿದೆ. ಈ ರೋಗ ಹರಡಲು ಲಿಸ್ಸಾವೈರಸ್ ಮುಖ್ಯ ಕಾರಣವಾಗಿದೆ. ನಾಯಿ, ಬೆಕ್ಕುಗಳ ಕಡಿತ ಅಥವಾ ಲಾಲಾರಸದ ಸಂಪರ್ಕದಿಂದ ಹಾಗೂ ಸಸ್ತನಿಗಳು ಅದರಲ್ಲೂ ವಿಶೇಷವಾಗಿ ಕಾಡುಪ್ರಾಣಿಗಳ ಮೂಲಕ ಈ ಸೋಂಕು ಹರಡುತ್ತದೆ. ರೇಬಿಸ್ ಕಾಯಿಲೆಯ ಹರಡುವಿಕೆ, ಅದನ್ನು ತಡೆಗಟ್ಟುವ ವಿಧಾನ, ಪ್ರಾಣಿ ಹಾಗೂ ಮನುಷ್ಯರಿಗೆ ಲಭ್ಯವಿರುವ ರೇಬೀಸ್ ಲಸಿಕೆಯ ಬಗ್ಗೆ ಮಾಹಿತಿ ನೀಡಿದರು.
ಸಮುದಾಯ ವೈದ್ಯಕೀಯ ಕಾರ್ಯಕರ್ತ ಸಂಜೀವ ಖಾನಗೌಡ್ರ ಮಾತನಾಡಿ, ರೇಬಿಸ್ ರೋಗ ಬಂದ ನಂತರ ಪರದಾಡುವುದಕ್ಕಿಂತ, ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಅತೀ ಮುಖ್ಯವಾಗಿದೆ. ಇದರ ಭಾಗವಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಈ ವಿಶ್ವ ರೆಬಿಸ್ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಈ ರೋಗದ ಕುರಿತು ಸಮುದಾಯದ ಜನರಲ್ಲಿ ಜನಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿ.ಎಲ್. ಡಿ. ಇ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎ. ಎಸ್. ನಾವಿ, ಸಹಾಯಕ ಪ್ರಾಧ್ಯಾಪಕಿ ಡಾ. ಪೂಜಾ ತೊದಲಬಾಗಿ, ವೈದ್ಯಕೀಯ ಸ್ನಾತಕೋತರ ವಿದ್ಯಾರ್ಥಿಗಳಾದ ಡಾ. ಈಶ್ವರ, ಡಾ. ಸ್ಮಿತ್, ಡಾ. ಶಮಿನ್, ಜಿ. ಬಿ. ಮನಗೂಳಿ, ಡಿ. ಬಿ ಚೆಣೆಗಾಂವ, ಡಿ. ಐ. ಮಠಪತಿ ಮುಂತಾದವರು ಉಪಸ್ಥಿತರಿದ್ದರು.ಇದನ್ನೂ ಓದಿ: ವೈಯಾಲಿಕಾವಲ್ ಮಹಾಲಕ್ಷ್ಮಿ ಕೊಲೆ ಪ್ರಕರಣ – ಹತ್ಯೆ ಬಳಿಕ ಪಶ್ಚಾತ್ತಾಪ ಪಟ್ಟಿದ್ದ ಹಂತಕ