ಬೆಂಗಳೂರು: ಹಲವು ಗೊಂದಲಗಳ ನಡುವೆ ಮೈತ್ರಿ ಸಂಪುಟಕ್ಕೆ ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಹೆಚ್.ನಾಗೇಶ್ ಎಂಟ್ರಿ ಪಡೆದಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಆರ್.ಶಂಕರ್ ಮತ್ತು ಹೆಚ್.ನಾಗೇಶ್ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇಬ್ಬರು ಶಾಸಕರು ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಹಿಂದೆ ಮೈತ್ರಿ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ಆರ್.ಶಂಕರ್ ಇಂದು ಮತ್ತೊಮ್ಮೆ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ಪದ ಗ್ರಹಣ ಕಾರ್ಯಕ್ರಮದಲ್ಲಿ ಸಿಎಂ, ಮಾಜಿ ಸಿಎಂ ಸಿದ್ದರಾಮಯ್ಯ ಸಚಿವರಾದ ಜಮೀರ್ ಅಹ್ಮದ್, ಡಿ.ಕೆ.ಶಿವಕುಮಾರ್ ಬಂಡೆಪ್ಪ ಕಾಶೆಂಪುರ್ ಮತ್ತು ಎಂ.ಬಿ.ಪಾಟೀಲ್ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಪಕ್ಷೇತರರಿಗೆ ಸಂಪುಟದಲ್ಲಿ ಸ್ಥಾನ ಮಾನ ಕೊಟ್ರೇ ಏನ್ ತಪ್ಪಿದೆ. ಯಾವ ಅಸಮಾಧಾನವೂ ನಮ್ಮೊಳಗಿಲ್ಲ. ಎಲ್ಲರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತೇವೆ. ಪಕ್ಷ ಉಳಿಸಲು ಸ್ಥಿರತೆ ಕಾಪಾಡಲು ಎಲ್ಲರ ಒಮ್ಮತದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ಏಕಮುಖ ತೀರ್ಮಾನ ಅಲ್ಲ. ಹೊಸಬರಿಗೆ ಖಾತೆ ಹಂಚಿಕೆ ವಿಚಾರ ದ ಬಗ್ಗೆ ಮುಖಂಡರು ಚರ್ಚೆ ಮಾಡಿ ತೀರ್ಮಾನ ಮಾಡಲಿದ್ದೇವೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಹೇಳಿದಂತೆ ನಾವು ನಡೆಯುತ್ತೇವೆ ಎಂದು ಹೇಳುವ ಶಾಸಕ ಸುಧಾಕರ್ ಹೇಳಿಕೆಗೆ ಟಾಂಗ್ ನೀಡಿದರು.