ಹಾವೇರಿ: ನಾನು ಅರ್ಜುನನಾಗಿ ಯುದ್ಧಕ್ಕೆ ಬರಬೇಕಿತ್ತು. ಅದರೆ ಕೃಷ್ಣನಂತೆ ಸಾರಥಿಯಾಗಿ ಕ್ಷೇತ್ರಕ್ಕೆ ಬಂದಿದ್ದೇನೆ ಎಂದು ಅನರ್ಹ ಶಾಸಕ ಆರ್.ಶಂಕರ್ ಭಾವುಕರಾಗಿದ್ದಾರೆ.
ಜಿಲ್ಲೆಯ ರಾಣೆಬೆನ್ನೂರಿನ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಅರ್ಜುನನಾಗಿ ಯುದ್ಧಕ್ಕೆ ಬರಬೇಕಿತ್ತು. ಅದರೆ ಕೃಷ್ಣನಂತೆ ಸಾರಥಿಯಾಗಿ ಕ್ಷೇತ್ರಕ್ಕೆ ಬಂದಿದ್ದೇನೆ. ಆದರೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ಸುಪ್ರೀಂಕೋರ್ಟ್ ತೀರ್ಮಾನ ಏಕೆ ಹೀಗಾಯಿತು ಎಂಬ ಆತಂಕ ಅನರ್ಹ ಶಾಸಕರು ಹಾಗೂ ಸಿಎಂ ಮಧ್ಯೆ ಇದೆ. ಎಲ್ಲರೂ ತಮ್ಮ ಕ್ಷೇತ್ರಕ್ಕೆ ಚುನಾವಣೆ ಆಗುವುದಿಲ್ಲ ಎಂದಿದ್ದರು. ಆದರೆ ಸುಪ್ರೀಂಕೋರ್ಟ್ ತೀರ್ಪಿನಿಂದ ಆಘಾತವಾಗಿದೆ ಎಂದರು.
ನಾನು ಚುನಾವಣೆಗೆ ಹೆದರಿ ಹಿಂದೆ ಸರಿದಿಲ್ಲ. ಬದಲಿಗೆ ನನ್ನನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿ, ಸಚಿವನನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು. ಸಿಎಂ ಹಾಗೂ ಬಿಜೆಪಿ ಹೈಕಮಾಂದ್ ಹೇಳಿದ್ದರಿಂದ ಮೊಂಡುತನ ಮಾಡಬಾರದು ಎಂದು ಹಿಂದೆಕ್ಕೆ ಸರಿದಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕೋಳಿವಾಡ ಅವರನ್ನು ಸೋಲಿಸುವುದು ನನಗೆ ಹೊಸದಲ್ಲ. ಪ್ರಾರಂಭದಲ್ಲಿಯೇ ಮಣ್ಣು ಮುಕ್ಕಿಸಿದ್ದೆ, ಅವರನ್ನು ಸೋಲಿಸೋದು ದೊಡ್ಡ ಕೆಲಸವಲ್ಲ. ಬಿಜೆಪಿ ಪಕ್ಷದ ತತ್ವ ಸಿದ್ಧಾಂತದ ಅಡಿಯಲ್ಲಿ ಕೆಲಸ ಮಾಡಬೇಕಿದೆ. ಒಂದು ತಪ್ಪಾಗಿರುವುದಕ್ಕೆ ನಾನು ತಾಲೂಕಿನ ಜನತೆಯ ಕ್ಷಮೆ ಕೇಳುತ್ತೆನೆ. ಹಿತ ಶತೃಗಳು ಪಾಪದ ಫಲ ಉಣ್ಣುತ್ತಾರೆ. ಸರ್ಕಾರ ಬರಲು ನಾವು ಕಾರಣೀಕರ್ತರಾಗಿದ್ದೇವೆ. ಮುಖ್ಯಮಂತ್ರಿಗಳು ಹೆಚ್ಚಿನ ಅನುದಾನ ಕೊಡುತ್ತಾರೆ. ಪಕ್ಷ ಅರುಣ್ ಕುಮಾರ್ ಪೂಜಾರ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ, ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸುತ್ತೇನೆ ಎಂದರು.