-ಕೈ ಶಾಸಕರು ಒಣಗಿದ ಮರದ ಎಲೆಗಳು
ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮುಳುಗಿದ ಹಡಗಾಗಿದ್ದು, ಒಂದು ವರ್ಷದ ಹಿಂದೆ ಮೈತ್ರಿ ಹಡಗು ರಮೇಶ್ ಜಾರಕಿಹೊಳಿಯಿಂದ ತೂತು ಬಿದ್ದಿತ್ತು. ಇವಾಗ ಮೈತ್ರಿ ಹಡಗು ಪೂರ್ತಿ ಮುಳುಗಿದೆ ಎಂದು ಮಾಜಿ ಡಿಸಿಎಂ ಆರ್ ಅಶೋಕ್ ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ನೆರಳನ್ನು ಹುಡುಕಿಕೊಂಡು ಯಾರೂ ಹೋಗಲ್ಲ. ಕಾಂಗ್ರೆಸ್ ಶಾಸಕರು ಒಣಗಿದ ಮರದ ಎಲೆಗಳು ಉದುರಿದಂತೆ ಉದುರುತ್ತಿದ್ದಾರೆ. ಮೈತ್ರಿ ನಾಯಕರಾದ ಸಿದ್ದರಾಮಯ್ಯ ಮತ್ತು ಸಿಎಂ ಕೂಡಲೇ ಗೌರವ ಇದ್ದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ಮೈತ್ರಿ ನಾಯಕರ ಪುಟಗೋಸಿಯನ್ನ ರಾಜ್ಯದ ಜನರು ಹರಿದು ಹಾಕಿದ್ದಾರೆ ಎಂದು ಆರ್ ಆಶೋಕ್ ವ್ಯಂಗ್ಯ ಮಾಡಿದರು.
ಇದೇ ವೇಳೆ ಮೋದಿ ಅವರು ಮತ್ತೆ ಪ್ರಧಾನಿ ಆದರೆ ರಾಜಕೀಯ ಸನ್ಯಾಸ ಸ್ವೀಕರ ಮಾಡುತ್ತೇನೆ ಎಂದು ಹೇಳಿದ್ದ ರೇವಣ್ಣ ಅವರ ಬಗ್ಗೆ ವ್ಯಂಗ್ಯವಾಡಿದ ಅವರು, ನಿಂಬೆಹಣ್ಣು ಇಟ್ಟು ಸಮಯ ನೋಡಿ ರೇವಣ್ಣ ರಾಜೀನಾಮೆ ನೀಡಲಿ ಎಂದರು.
ಈ ಹಿಂದೆ ರಾಮಕೃಷ್ಣ ಹೆಗಡೆ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಾಗ ರಾಜೀನಾಮೆ ನೀಡಿದ್ದರು. ಸದ್ಯ ಸಿದ್ದರಾಮಯ್ಯ ಹಾಗೂ ಸಿಎಂ ಎಚ್ಡಿಕೆ ಅವರಿಗೆ ಗೌರವ ಇದ್ದರೆ ರಾಜೀನಾಮೆ ಕೊಡಲಿ. ಇಂದು ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆದರೆ 177 ಸೀಟು ಗೆಲ್ಲುತ್ತೇವೆ. ಕಾರಣ ಲೋಕಸಭೆ ಚುನಾವಣೆಯಲ್ಲಿ 177 ವಿಧಾನಸಭೆ ಕ್ಷೇತ್ರದಲ್ಲಿ ಲೀಡ್ ಬಂದಿದೆ. ಸದ್ಯ ಕಾಂಗ್ರೆಸ್, ಜೆಡಿಎಸ್ ಮುಳುಗಿದ ಹಡಗುಗಾಗಿದೆ. ಫಲಿತಾಂಶಕ್ಕೂ ಮುನ್ನ ಮೈತ್ರಿ ನಾಯಕರು ಏನೇನು ಹೇಳಿದ್ದರೋ ಅದರಂತೆ ನಡೆದುಕೊಳ್ಳಲಿ. ದೇವೇಗೌಡರು ಸೋತರೆ ರಾಜೀನಾಮೆ ನೀಡುವುದಾಗಿ ಸಚಿವ ಗುಬ್ಬಿ ಶ್ರೀನಿವಾಸ ಹೇಳಿದರು. ಈಗ ಶಾಸಕರು ಹೇಳಿದಂತೆ ನಡೆದುಕೊಳ್ತಾರಾ ಎಂದು ಪ್ರಶ್ನಿಸಿದರು.