ಬೆಂಗಳೂರು: ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿ ತೈಲಗೆರೆ ಗ್ರಾಮದಲ್ಲಿ ಶಿವಕುಮಾರ್ ಬಿನ್ನ ಸೊಣ್ಣಪ್ಪ ಅವರು ಗೋಮಾಳ ಜಮೀನು ಒತ್ತುವರಿ ಮತ್ತು ಫಿಲ್ಟರ್ ಮರಳು ದಂಧೆ ನಡೆಸುತ್ತಿರುವ ಪ್ರಕರಣ ಕುರಿತು ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಘೋಷಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ನಿಯಮ 330ರ ಅಡಿ ಹೆಚ್.ಎಂ. ರಮೇಶ್ ಗೌಡ, ರವಿಕುಮಾರ್, ಮರಿತಿಬ್ಬೇಗೌಡ ಸೇರಿ ಇತರ ಸದಸ್ಯರು ಗೋಮಾಳ ಸ್ವತ್ತನ್ನು ಸುಳ್ಳು ದಾಖಲೆ ಸೃಷ್ಟಿಸಿ ಕಬಳಿಸಲಾಗಿದೆ. ಫಿಲ್ಟರ್ ಮರಳು ದಂಧೆ ನಡೆಸಿ ಸರ್ಕಾರಕ್ಕೆ ನಷ್ಟವುಂಟು ಮಾಡಲಾಗಿದ್ದು ಈ ಪ್ರಕರಣವನ್ನು ಎಸಿಬಿಯಿಂದ ತನಿಖೆ ನಡೆಸಬೇಕು ಎಂದು ಪ್ರಸ್ತಾಪಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ರಾಜ್ಯ ಕಾಂಗ್ರೆಸ್ನ ಪವರ್ ಪಾಯಿಂಟ್ಗಳಲ್ಲ: ಎಂ.ಬಿ.ಪಾಟೀಲ್
ಇದಕ್ಕೆ ಉತ್ತರಿಸಿದ ಅಶೋಕ್ ಅವರು, ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿ ತೈಲಗೆರೆ ಗ್ರಾಮದಲ್ಲಿ 211 ಎಕರೆ ಗೋಮಾಳ ಇದೆ. ಇದರಲ್ಲಿ ಕೆಲವರಿಗೆ ಜಮೀನು ಮಂಜೂರು ಮಾಡಲಾಗಿದೆ. ಆದರೆ ಇದು ಅನುಮಾನಾಸ್ಪದವಾಗಿದೆ. ಇಲ್ಲಿ ಅಕ್ರಮ ನಡೆದಿರುವ ಸಾಧ್ಯತೆ ಇದೆ. ಇದರ ಜೊತೆ ಫಿಲ್ಟರ್ ಮರಳು ದಂಧೆ ನಡೆಯುತ್ತಿದೆ. ಬಹಳ ವರ್ಷದಿಂದ ಇವರನ್ನು ಹಾಗೆಯೇ ಬಿಟ್ಟಿದ್ದಾರೆ. ಹಾಗಾಗಿ ಅಕ್ರಮ ಫಿಲ್ಡರ್ ಮರಳು ದಂಧೆಯಿಂದ ಹಲವಾರು ಕಟ್ಟಡ ಕುಸಿತವಾಗಿದೆ. ಇದನ್ನು ಮಟ್ಟಹಾಕಬೇಕು. ಈಗ ನಮ್ಮ ಸರ್ಕಾರದಿಂದ ಫಿಲ್ಟರ್ ಮರಳು ದಂಧೆಗೆ ಕಡಿವಾಣ ಹಾಕಲಾಗಿದೆ ಎಂದರು.
ಶಿವಕುಮಾರ್ ಬಿನ್ ಸೊಣ್ಣಪ್ಪ ಎನ್ನುವವರು ಸರ್ಕಾರಕ್ಕೆ ಫಿಲ್ಟರ್ ಮರಳಿನಿಂದ ಹಾನಿ ಮಾಡಿದ ಆರೋಪ ಎದುರಿಸುತ್ತಿದ್ದು, ಸರ್ಕಾರಿ ಭೂಮಿ ಒತ್ತುವರಿ ಮಾಡಿರುವ ಆರೋಪವನ್ನು ಹೊಂದಿದ್ದಾರೆ. ಇದರ ತನಿಖೆ ನಡೆಸುತ್ತೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೂ ಒತ್ತುವರಿ ಮತ್ತು ಸರ್ಕಾರಕ್ಕೆ ಮೋಸ ಮಾಡುತ್ತಿರುವವರ ಬಗ್ಗೆ ತನಿಖೆ ನಡೆಸಲು ಎಸ್ಐಟಿ ರಚಿಸುವುದಾಗಿ ಹೇಳಿದ್ದಾರೆ. ಈ ಕೇಸ್ ಅನ್ನು ಆ ಎಸ್ಐಟಿಗೆ ವಹಿಸಲಾಗುತ್ತದೆ. ಫಿಲ್ಟರ್ ಮರಳು ದಂಧೆ ಮತ್ತು ಭೂ ಒತ್ತುವರಿ ಪ್ರಕರಣ ಕುರಿತು ಎಸ್ಐಟಿ ತನಿಖೆಗೆ ಸರ್ಕಾರ ಬದ್ಧವಾಗಿದೆ ಎಂದು ಪ್ರಕಟಿಸಿದರು. ಇದನ್ನೂ ಓದಿ: ಬಂಟ ಸಮಾಜವನ್ನು ಕೇಂದ್ರ ಹಿಂದುಳಿದ ವರ್ಗಕ್ಕೆ ಸೇರಿಬೇಕು: ರಮಾನಾಥ್ ರೈ ಮನವಿ