ಬೆಂಗಳೂರು: ನೈಟ್ ಕರ್ಫ್ಯೂ ಬಗ್ಗೆ ಸದ್ಯಕ್ಕೆ ಚಿಂತನೆ ನಡೆಸಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಓಮಿಕ್ರಾನ್ ತಡೆಗೆ ನೈಟ್ ಕರ್ಫ್ಯೂ ಹೇರುವುದರ ಬಗ್ಗೆ ಯಾವುದೇ ಚಿಂತನೆಯನ್ನು ನಡೆಸಿಲ್ಲ. ಬದಲಿಗೆ ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು.
ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಮಾರ್ಗಸೂಚಿ ಬಿಡುಗಡೆಗೊಳಿಸುವುದರ ಕುರಿತು ಸಿಎಂ ಜೊತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಓಮಿಕ್ರಾನ್ ಆತಂಕದಿಂದಾಗಿ ಕ್ರಿಸ್ ಮಸ್ ಹಾಗೂ ಹೊಸವರ್ಷಕ್ಕೆ ನಿರ್ಬಂಧ ಅಗತ್ಯವಾಗಿದೆ. ಓಮಿಕ್ರಾನ್ ಬೇರೆ ಬೇರೆ ದೇಶದಲ್ಲಿ ಹೆಚ್ಚು ಹರಡುತ್ತಿದ್ದು, ಇಂದು ಬೆಂಗಳೂರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ತಜ್ಞರ ಸಲಹೆಯನ್ನು ಪಡೆಯಲಾಗಿದೆ. ಹೊಸವರ್ಷ ಆಚರಣೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.
ಈಗಾಗಲೇ ಸಭೆ ಸಮಾರಂಭಗಳಿಗೆ 500 ಜನರು ಸೇರಬಹುದು ಎಂದು ಹೇಳಲಾಗಿದೆ. ಆದರೆ ಕ್ರಿಸ್ಮಸ್ ಸಂದರ್ಭದಲ್ಲಿ ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸುವವರ ಸಂಖ್ಯೆ ಹೆಚ್ಚಿರುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ನಾಳೆಯೊಳಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅವಶ್ಯಕತೆ ಏನಿದೆ?: ಎಚ್.ಡಿ ರೇವಣ್ಣ
ಹೊಸವರ್ಷ ಆಚರಣೆ ಸಂದರ್ಭದಲ್ಲಿ ಸ್ಟ್ರೀಟ್ ಸಂಭ್ರಮದ ಬಗ್ಗೆ ಮಾತನಾಡಿದ ಅವರು, ಸ್ಟ್ರೀಟ್ ಸಂಭ್ರಮದ ಬಗ್ಗೆ ಹೆಚ್ಚು ಭಯವಿದೆ. ಈ ಸಂದರ್ಭದಲ್ಲಿ ತಬ್ಬಿಕೊಂಡು ಮುದ್ದಾಡುವ ಸಂಭ್ರಮ ಜೋರಾಗಿರುತ್ತದೆ. ಇದರಿಂದಾಗಿ ಕೊರೊನಾ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಸ್ಟ್ರೀಟ್ ಸಂಭ್ರಮಕ್ಕೆ ಬ್ರೇಕ್ ಹಾಕುವ ಬಗ್ಗೆಯೂ ಗಂಭೀರ ಚರ್ಚೆ ನಡೆಸಲಾಗುವುದು ಎಂದರು. ಇದನ್ನೂ ಓದಿ: ದೇಶದಲ್ಲಿ 200 ಗಡಿ ದಾಟಿದ ಓಮಿಕ್ರಾನ್ ಸೋಂಕಿತರ ಸಂಖ್ಯೆ – ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ
ಎಂಜಿ ರೋಡ್, ಬ್ರಿಗೇಡ್ ರೋಡ್ ಸಂಭ್ರಮಕ್ಕೆ ನಿರ್ಬಂಧ ಹಾಕುವ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿಬಂಧನೆಯನ್ನು ತರುತ್ತೇವೆ. ಅದಕ್ಕೆ ಕಡಿವಾಣ ಹಾಕಬೇಕಾ ಅಥವಾ ನಿಬಂಧನೆ ಹೇರಬೇಕಾ ಎನ್ನುವುದರ ಕುರಿತು ಚರ್ಚೆ ನಡೆಸಲಾಗುವುದು. ಎಂದು ಮಾಹಿತಿ ನೀಡಿದರು.