ಬೀದರ್: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ಕೂಗು ಕಾಂಗ್ರೆಸ್ ಪಾಳಯದಲ್ಲಿ ಎದ್ದಿದೆ. ಆದರೆ ಸಿದ್ದರಾಮಯ್ಯ ಕೀ ಕೊಟ್ಟಿರುವ ಪ್ರಕಾರ ಅವರ ಗೊಂಬೆಗಳು ಮಾತನಾಡುತ್ತಿವೆ ಎಂದು ಬಿಜೆಪಿ ಮುಂಖಡ ಆರ್ ಅಶೋಕ್ ಟೀಕಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಅವರು ಕೀ ಕೊಟ್ಟಿರುವ ಗೊಂಬೆಗಳು ಮಾತನಾಡುತ್ತಿವೆ. ಲೋಕಸಭಾ ಚುನಾವಣೆಯ ಮುಂಚೆ ಯಾಕೆ ಈ ಗೊಂಬೆಗಳು ಮಾತನಾಡಲಿಲ್ಲ? ಸಿದ್ದರಾಮಯ್ಯ ಹೇಳಿದ ಹಾಗೇ ಗೊಂಬೆಗಳು ಕೇಳುತ್ತಿವೆ. ಬಿಜೆಪಿ ಸಮ್ಮಿಶ್ರ ಸರ್ಕಾರವನ್ನ ಬೀಳಿಸುವ ಕೆಲಸವನ್ನ ಮಾಡುತ್ತಿಲ್ಲ. ಆ ಕೆಲಸವನ್ನ ಸಿದ್ದರಾಮಯ್ಯನವರೇ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ನವರ ಮೇಲೆ ಸಿದ್ದರಾಮಯ್ಯ ಹಾವಿನ ದ್ವೇಷ ಇಟ್ಟುಕೊಂಡಿದ್ದಾರೆ. ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರ ಮೇಲೆ 40 ವರ್ಷದ ದ್ವೇಷ ಸಿದ್ದರಾಮಯ್ಯ ಅವರಿಗಿದೆ. ಅದನ್ನ ಅವರು ಮರೆತಿಲ್ಲ. ಸಿದ್ದರಾಮಯ್ಯನವರನ್ನ ಜೆಡಿಎಸ್ ಪಕ್ಷದಿಂದ ಕತ್ತು ಹಿಡಿದು ತಳ್ಳಿ ಮೈಸೂರು ಹೈವೇಗೆ ತಂದು ಬಿಸಾಕಿದ್ದಾರೆ. ಆ ಹಾವಿನ ದ್ವೇಷವನ್ನ ಸಿದ್ದರಾಮಯ್ಯ ಈಗ ತೀರಿಸಿಕೊಳ್ಳುತ್ತಾರೆ. ಸರ್ಕಾರವನ್ನ ಅವರೇ ಕೆಡುವುತ್ತಾರೆ ಎಂದರು.
ಜೆಡಿಎಸ್ ಹಾಗೂ ಕಾಂಗ್ರೆಸ್ನವರು ಭಯೋತ್ಪಾದನೆ ಬಗ್ಗೆ ಮೃದು ಧೋರಣೆ ಹೊಂದಿದವರು. ಪಾಕಿಸ್ತಾನದ ಬಗ್ಗೆ ಧ್ವನಿ ಎತ್ತಿಯೂ ಇವರು ಮಾತನಾಡುವುದಿಲ್ಲ. ಭಯೋತ್ಪಾದಕರನ್ನ ಜೀ ಎಂದು ಗೌರವ ಕೊಟ್ಟು ಕಾಂಗ್ರೆಸ್ಸಿನವರು ಕರೆಯುತ್ತಾರೆ ಎಂದು ಆರ್ ಅಶೋಕ್ ಕಿಡಿಕಾರಿದರು.