ಪಕ್ಷದ ವಿದ್ಯಮಾನ ಬೇಸರ ತರಿಸಿದೆ – ಅಧ್ಯಕ್ಷರ ಬದಲಾವಣೆ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಆರ್.ಅಶೋಕ್

Public TV
2 Min Read
R Ashoka

– ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ;ವಿಪಕ್ಷ ನಾಯಕ

ಬೆಂಗಳೂರು: ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ನಮಗೂ ಬೇಸರ ತರಿಸಿದೆ. ನಾನು ದೆಹಲಿಗೆ ತೆರಳಿ ಎಲ್ಲಾ ವಿಚಾರಗಳನ್ನು ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ಹೇಳಿದರು.

ಅಧ್ಯಕ್ಷರ ಬದಲಾವಣೆ ಬಗ್ಗೆ `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿ, ಜೆ.ಪಿ ನಡ್ಡಾ (JP Nadda) ಅವರು ಬೆಂಗಳೂರಿಗೆ ಬಂದಿದ್ದಾಗ ನಾನು ಕೂಡ ಅರ್ಧ ಗಂಟೆ ಮಾತಾಡಿದ್ದೇನೆ. ರಾಜ್ಯ ಬಿಜೆಪಿಯಲ್ಲಿ (BJP) ಏನೆಲ್ಲ ನಡೆಯುತ್ತಿದೆ ಎಂದು ನಡ್ಡಾರಿಗೆ ಸವಿಸ್ತಾರವಾಗಿ ಹೇಳಿದ್ದೇನೆ. ಒಟ್ಟಿನಲ್ಲಿ ಪಕ್ಷದಲ್ಲಿ ಎಲ್ಲ ಸರಿಯಾಗಬೇಕು. ಹೀಗಾಗಿ ಎಲ್ಲವನ್ನೂ ವರಿಷ್ಠರ ಗಮನಕ್ಕೆ ತಂದಿದ್ದೇವೆ. ಹೈಕಮಾಂಡ್‌ನ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು. ಇದನ್ನೂ ಓದಿ: ಬೆಂಗಳೂರು| ಹೊಸ ಇಂದಿರಾ ಕ್ಯಾಂಟೀನ್‍ಗಳಿಗೆ ಆರಂಭದಲ್ಲೇ ವಿಘ್ನ – 52 ಹೊಸ ಕ್ಯಾಂಟೀನ್‍ಗಳು ಓಪನ್ ಆಗೋದೇ ಡೌಟ್?

Vijayendra yatnal

ಅಧ್ಯಕ್ಷರ ಬದಲಾವಣೆ ಮಾಡುವುದು ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದೆ. ಬೊಮ್ಮಾಯಿಯವರು ದೆಹಲಿಯಲ್ಲಿ ಇದ್ದಾರೆ. ಅವರು ತಿಳಿಸಿದಾಗ ನಾನೂ ದೆಹಲಿಗೆ ಹೋಗುತ್ತೇನೆ. ಹೈಕಮಾಂಡ್ ಎಲ್ಲರ ಅಭಿಪ್ರಾಯವನ್ನು ಪರಿಗಣಿಸಿ ತೀರ್ಮಾನ ಮಾಡುತ್ತದೆ. ಯತ್ನಾಳ್ ಗುಂಪು ಈಗಾಗಲೇ ಹೈಕಮಾಂಡ್ ಗಮನಕ್ಕೆ ಎಲ್ಲ ವಿಚಾರ ತಂದಿದೆ. ಒಂದಷ್ಟು ಜನ ರಾಜ್ಯಾಧ್ಯಕ್ಷರ ಪರವಾಗಿಯೂ ಅಭಿಪ್ರಾಯ ಕೊಟ್ಟಿದ್ದಾರೆ ಎಂದು ಹೇಳಿದರು.

Vijayendra and Yatnal Meet In Delhi 2

ನಾನು, ಬೊಮ್ಮಾಯಿಯವರು ಆರೆಸ್ಸೆಸ್ ನಾಯಕರ ಭೇಟಿಗೆ ಹೋಗಿದ್ದೆವು ಎಂದು ಪತ್ರಿಕೆಯೊಂದರಲ್ಲಿ ಬಂದಿರುವುದು ಸುಳ್ಳು ಸುದ್ದಿಯಾಗಿದೆ. ನಾನಾಗಲೀ, ಬೊಮ್ಮಾಯಿಯವರಾಗಲೀ ಸಂಘದವರ ಭೇಟಿ ಮಾಡಿಲ್ಲ. ರಾಜಕೀಯದಲ್ಲಿ ಆರ್‌ಎಸ್‌ಎಸ್‌ ಮೂಗು ತುರಿಸುವುದಿಲ್ಲ. ಪಕ್ಷದ ವಿಚಾರ ಸಂಘದವರ ಜತೆ ಚರ್ಚಿಸುವ ವ್ಯವಸ್ಥೆ ಇಲ್ಲ. ಪಕ್ಷದಲ್ಲಿ ಎಲ್ಲರೂ ಅನುಸರಿಸಿಕೊಂಡು ಹೋಗಬೇಕು. ಈ ವಿಚಾರದಲ್ಲಿ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ ಎಂದು ನುಡಿದರು.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿಲ್ಲ:
ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿಲ್ಲ. ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಅಲ್ಲ. ನನ್ನನು ವರಿಷ್ಠರು ಪ್ರತಿಪಕ್ಷದ ನಾಯಕನನ್ನಾಗಿ ಮಾಡಿದ್ದಾರೆ. ಅದನ್ನು ಗೌರವದಿಂದ ನಡೆಸಿಕೊಂಡು ಹೋಗುತ್ತಿದ್ದೇನೆ. ಕೇಂದ್ರದ ನಾಯಕರು ಎಲ್ಲವನ್ನು ಅವಲೋಕನ ಮಾಡುತ್ತಿದ್ದಾರೆ. ಕೋರ್ ಕಮಿಟಿ ಸದಸ್ಯರಿಗೆ, ಕಾರ್ಯಕರ್ತರಿಗೆ ಪಕ್ಷದಲ್ಲಿನ ಕಚ್ಚಾಟ ಬೇಸರ ಮತ್ತು ನೋವು ತರಿಸಿದೆ. ಇವೆಲ್ಲವನ್ನು ಹೈಕಮಾಂಡ್ ಸರಿ ಮಾಡಲಿದೆ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷರ ಆಯ್ಕೆಯ ಗೊಂದಲ ಬಗ್ಗೆ ಯತ್ನಾಳ್ ತಂಡ ಹೈಕಮಾಂಡ್‌ಗೆ ದೂರು ಕೊಟ್ಟಿದೆ. ನಾವೂ ಕೂಡಾ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಮಾಡಿ, ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಕೆಲವರ ಬದಲಾವಣೆಗೆ ಪಟ್ಟಿ ಕೊಟ್ಟಿದ್ದೆವು. ಏನಾಗಿದೆ ಎಂದು ನನಗೆ ಗೊತ್ತಿಲ್ಲ. ಕೇಂದ್ರದ ನಾಯಕರು ಏನು ಹೇಳುತ್ತಾರೋ ಅದರಂತೆ ನಡೆದುಕೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಮಹಾ ಕುಂಭಮೇಳ‌ – ರುದ್ರಾಕ್ಷಿ ಮಾಲೆ ಧರಿಸಿ ತ್ರಿವೇಣಿ ಸಂಗಮದಲ್ಲಿ ಮೋದಿ ಪುಣ್ಯಸ್ನಾನ

ನಮ್ಮ ಪಕ್ಷದಲ್ಲಿ ಇಂತಹ ಬೆಳವಣಿಗೆ ಆಗಬಾರದಿತ್ತು. ಕೆಲವರು ಪಕ್ಷದ ವೇದಿಕೆಯಲ್ಲಿ ಮಾತಾಡದೆ ಹೊರಗೆ ಮಾತನಾಡುವುದು ಸರಿಯಲ್ಲ. ಉಳಿದ ನಾಯಕರ ಜತೆಗೂ ನಾನು ಸಂಪರ್ಕದಲ್ಲಿ ಇದ್ದೇನೆ. ಇನ್ನು 10-15 ದಿನಗಳಲ್ಲಿ ಪಕ್ಷದ ಪರಿಸ್ಥಿತಿ ಸರಿಯಾಗುತ್ತದೆ. ಎಲ್ಲಾ ವಿಚಾರಗಳನ್ನು ಕೇಂದ್ರದ ಗಮನಕ್ಕೆ ತರಲಾಗಿದೆ. ಆಂತರಿಕ ವೈಮನಸ್ಸಿನಿಂದ ಪಕ್ಷಕ್ಕೆ ಹಿನ್ನಡೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.  ಇದನ್ನೂ ಓದಿ: ನೆತನ್ಯಾಹು ಭೇಟಿ ಬೆನ್ನಲ್ಲೇ ಗಾಜಾದ ಮೇಲೆ ಕಣ್ಣಿಟ್ಟ ಅಮೆರಿಕ – ಟ್ರಂಪ್‌ ಕೊಟ್ಟ ಆಫರ್‌ ಏನು?

Share This Article