ಬೆಳಗಾವಿ: ರೈಲ್ವೇ ಮೇಲ್ಸೇತುವೆ ಉದ್ಘಾಟನೆ ಆಮಂತ್ರಣ ಪಟ್ಟಿಯಲ್ಲಿ ಹೆಸರು ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಹಾಗೂ ಬೆಳಗಾವಿ ಸಂಸದ ಸುರೇಶ ಅಂಗಡಿ ಮಧ್ಯೆ ಜಟಾಪಟಿ ನಡೆದಿದೆ.
ಜಿಲ್ಲೆಯ ಬೋಗಾರೆಸ್ ಕ್ರಾಸ್ ಬಳಿ ಇರುವ ರೈಲ್ವೇ ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಆಮಂತ್ರಣ ಪಟ್ಟಿಯಲ್ಲಿ ನನ್ನ ಹೆಸರು ಕೈಬಿಟ್ಟಿದ್ದಾರೆ ಎಂದು ಪ್ರಭಾಕರ್ ಕೋರೆ ಖ್ಯಾತೆ ತೆಗೆದು ಸುರೇಶ್ ಅಂಗಡಿ ಅವರನ್ನು ಪ್ರಶ್ನಿಸಿದ್ದಾರೆ. ಆಗ ಇಬ್ಬರು ನಾಯಕರು ಕೂಡ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಆದ್ರೆ ಇಲ್ಲಿ ಇವರಿಬ್ಬರ ಜಗಳ ನೋಡಿ ನೂತನ ಸಚಿವ ಸತೀಶ್ ಜಾರಕಿಹೊಳಿ ಮೂಕ ಪ್ರೇಕ್ಷಕರಂತೆ ಕುಳಿತಿದ್ದರು.
ವೇದಿಕೆ ಮೇಲೆ ಬನ್ನಿ ಎಂದು ಸುರೇಶ್ ಅವರು ಕೋರೆಯವರನ್ನು ಕರೆಯಲು ಬಂದಾಗ ಈ ಜಗಳ ನಡೆದಿದೆ. ರೈಲ್ವೇ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ನನ್ನ ಹೆಸರು ಕೈಬಿಟ್ಟಿದ್ದಾರೆ ಎಂದು ಕೋರೆಯವರು ವೇದಿಕೆ ಏರಲು ನಿರಾಕರಿಸಿದ್ದಾರೆ. ಈ ವೇಳೆ ನಿಮಗೆ ಸ್ವಲ್ಪ ಕಾಮನ್ ಸೆನ್ಸ್ ಇದೆಯಾ? ನೀವೇನ್ ದಾದಾಗಿರಿ ಮಾಡ್ತಿದೀರಾ ಎಂದು ಸುರೇಶ್ ಅಂಗಡಿ ಅವರು ಕೋರೆ ಅವರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಕೋರೆಯವರು ಎಲ್ಲವನ್ನೂ ಮೈಮೇಲೆ ತೆಗೆದುಕೊಂಡು ನೀನು ಕೆಲಸ ಮಾಡ್ತಿದೀಯಾ ಹೋಗು, ಇದೇನು ನಿನ್ನ ಕಾರ್ಯಕ್ರಮ ಅಲ್ಲ. ನನ್ನ ಬಳಿ ಜಗಳ ಮಾಡಬೇಡ ಎಂದು ತಿರುಗೇಟು ನೀಡಿದ್ದಾರೆ.
ಇಬ್ಬರು ನಾಯಕರ ನಡುವಿನ ಬೀದಿರಂಪಾಟದಲ್ಲಿ ಸತೀಶ್ ಜಾರಕಿಹೊಳಿ ಅವರು ಮಾತ್ರ ಮೂಖ ಪ್ರೇಕ್ಷಕರಂತೆ ಜಗಳ ನೋಡುತ್ತ ಕುಳಿತಿದ್ದರು. ಪಕ್ಕದಲ್ಲೇ ಜಗಳಮಾಡಿಕೊಂಡ ಮುಖಂಡರನ್ನು ನೋಡಿ ಮುಗುಳ್ನಗೆ ಬೀರಿ ಸುಮ್ಮನಾದರು. ವೇದಿಕೆ ಏರಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರೂ ಕೊನೆಗೂ ಕೋರೆಯವರನ್ನು ಮನವೊಲಿಸಿ ವೇದಿಕೆಗೆ ಸುರೇಶ್ ಅಂಗಡಿ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು.
https://www.youtube.com/watch?v=zTU719DE7qU
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv