ಬೆಂಗಳೂರು: ಅಂತಾರಾಷ್ಟ್ರೀಯ ಪ್ರಯಾಣಿಕರು ಕೊರೊನಾ (Corona) ಪಾಸಿಟಿವ್ ಕಂಡುಬಂದಲ್ಲಿ ಕೂಡಲೇ ಅವರನ್ನು ಕ್ವಾರಂಟೈನ್ನಲ್ಲಿಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯವಸ್ಥೆ ಮಾಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋವಿಡ್ 19 (Covid19) ಜಾಗೃತಿ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದರಲ್ಲಿ ಕೊರೊನಾ ಸೋಂಕಿತರಿಗಾಗಿ ಬೆಂಗಳೂರಿನಲ್ಲಿ ಬೋರಿಂಗ್ ಹಾಸ್ಪಿಟಲ್ ಮತ್ತು ಮಂಗಳೂರಿನಲ್ಲಿ ವೆನ್ಲಕ್ ಹಾಸ್ಪಿಟಲ್ನಲ್ಲಿ ಕ್ವಾರಂಟೈನ್ಗೆ ವ್ಯವಸ್ಥೆ ಮಾಡಿದ್ದು, ಸೋಂಕಿನ ಲಕ್ಷಣಗಳು ಕಂಡುಬಂದ ಪ್ರಯಾಣಿಕರು ಸ್ಥಳೀಯ ಖಾಸಗಿ ಹೋಟೆಲ್ಗಳಲ್ಲಿ ಪ್ರತ್ಯೇಕವಾಗಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದೆ. ಅಷ್ಟೇ ಅಲ್ಲದೇ ವಿಮಾನ ನಿಲ್ದಾಣಗಳಲ್ಲಿ (Airport) ಕೋವಿಡ್ ಪರೀಕ್ಷೆಗೆ ಒಳಗಾದವರು ರಿಸಲ್ಟ್ ಬರಲು ತಡವಾಗಿದ್ದಲ್ಲಿ ತಮ್ಮ ಮನೆಗಳಲ್ಲಿಯೇ ಪ್ರತ್ಯೇಕವಾಗಿ ಉಳಿದುಕೊಳ್ಳಲು ಸೂಚನೆ ನೀಡಿದೆ.
ಸಾಮಾಜಿಕ ಸಭೆ ಸಮಾರಂಭ ಮತ್ತು ಕಾರ್ಯಕ್ರಮಗಳಲ್ಲಿ ಜನಸಂದಣಿ ಕಡಿಮೆ ಮಾಡಲು ಹಲವು ಕಡೆಗಳಲ್ಲಿ ಆಗಮನ ಮತ್ತು ನಿರ್ಗಮನ ಕೇಂದ್ರಗಳ ಸ್ಥಾಪನೆಗೆ ಸೂಚಿಸಿದೆ. ಅಷ್ಟೇ ಅಲ್ಲದೇ ನೋ ಮಾಸ್ಕ್ ನೋ ಎಂಟ್ರಿ ಡಿಸ್ಪ್ಲೇ ಬೋರ್ಡ್ಗಳನ್ನು ಎಲ್ಲಾ ಕಡೆಯೂ ಕಡ್ಡಾಯವಾಗಿ ಅಳವಡಿಕೆ, ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆಯನ್ನು ಸಹ ಕೈಗೊಳ್ಳಲು ವ್ಯವಸ್ಥೆ, ಒಳಾಂಗಣ ಪ್ರದೇಶಗಳಿಗೆ ಆಗಮಿಸುವ ಜನರಿಗೆ ಸ್ಯಾನಿಟೈಸರ್ ನೀಡಲು ಸೂಚನೆ ನೀಡಿದೆ.
ಈ ಬಗ್ಗೆ ರಾಜ್ಯ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆಯ ಆಯುಕ್ತ ರಣದೀಪ್ ಮಾತನಾಡಿ, ಕೊರೊನಾ ಸಂಬಂಧಿತ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯಕೀಯ ಸಲಹೆ ಪಡೆದುಕೊಳ್ಳಬೇಕು. ಬೃಹತ್ ಕಾರ್ಯಕ್ರಮಗಳನ್ನು ಆ ಯೋಜನೆ ಮಾಡುವವರು ಸ್ಥಳೀಯ ಆಸ್ಪತ್ರೆಗಳ ಆಂಬುಲೆನ್ಸ್ಗಳ ಮೂಲಕ ರೋಗಿಗಳನ್ನು ಕೊಂಡೊಯ್ಯಲು ವ್ಯವಸ್ಥೆ ಮಾಡಿಕೊಳ್ಳಬೇಕು. ಹಾಗೂ ಚಿತ್ರಮಂದಿರಗಳಲ್ಲಿಯೂ ಕೂಡ n95 ಮಾಸ್ಕ್ ಕಡ್ಡಾಯವಾಗಿದ್ದು, ಈ ಕುರಿತು ಚಿತ್ರಮಂದಿರ ಸಿಬ್ಬಂದಿ ನಿಗಾ ವಹಿಸುವುದು. ಒಳಾಂಗಣ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಹೊಸ ವರ್ಷಾಚರಣೆಗೆ ನ್ಯೂ ರೂಲ್ಸ್- ಮಧ್ಯರಾತ್ರಿ 1 ಗಂಟೆವರೆಗಷ್ಟೇ ಸೆಲಬ್ರೇಷನ್!
ಕೊರೊನಾ ಲಸಿಕೆ ಕುರಿತಾಗಿ ಈಗಾಗಲೇ ಬಿಬಿಎಂಪಿ ಮತ್ತು ಎಲ್ಲಾ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದ್ದು, ಇವುಗಳ ಮೇಲೆ ನಿಗಾ ಇಡುವುದು. ಬೂಸ್ಟರ್ ಡೋಸ್ ಪಡೆದ ಫಲಾನುಭವಿಗಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳುವುದು, ಸದ್ಯ ಇರುವ ಶೇ. 21 ಪ್ರಮಾಣವನ್ನು 2023 ಜನವರಿ ಅಂತ್ಯಕ್ಕೆ ಶೇ. 50 ಕ್ಕೆ ಏರಿಕೆ ಮಾಡಲು ಬಿಬಿಎಂಪಿ (Bengaluru) ವ್ಯಾಪ್ತಿಯ ಆರೋಗ್ಯ ಅಧಿಕಾರಿಗಳು ಮತ್ತು ಎಲ್ಲಾ ಜಿಲ್ಲಾ ಆರೋಗ್ಯ ಅಧಿಕಾರಿಗಳು ನಿಗ ವಹಿಸ ಬೇಕು ಎಂದು ಆದೇಶಿಸಿದರು. ಇದನ್ನೂ ಓದಿ: ಚಿತ್ರಮಂದಿರ ಪ್ರವೇಶಕ್ಕೆ ಮಾಸ್ಕ್ ಕಡ್ಡಾಯ: ಸಚಿವ ಆರ್.ಅಶೋಕ್