ರಾಮನಗರ: ಪಿಡಬ್ಲ್ಯೂಡಿ ಇಲಾಖೆಯಲ್ಲಿ ಭಾರೀ ಗೋಲ್ಮಾಲ್ ನಡೆದಿದ್ದು, ಕದ್ದು ಮುಚ್ಚಿ 1.90 ಕೋಟಿ ರೂ. ವೆಚ್ಚದ ಕಾಮಗಾರಿಗಳ ಟೆಂಡರ್ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿ ಯೋಜನೆಯ ಕಾಮಗಾರಿ ವಿಚಾರವಾಗಿ ಆಡಳಿತತ್ಮಾಕ ಅನುಮೋದನೆ ಪಡೆಯದೇ ಮೂರೇ ದಿನದಲ್ಲಿ ಟೆಂಡರ್ ನೀಡಲಾಗಿದೆ. ಸಿಎಂ ಕುಮಾರಸ್ವಾಮಿ ಅನುಯಾಯಿಗಳಿಗೆ ಮಾತ್ರ ಟೆಂಡರ್ ನೀಡಲಾಗಿದೆ ಎಂದು ಆರೋಪಿಸಿ ಚನ್ನಪಟ್ಟಣದ ಗುತ್ತಿಗೆದಾರರು ರಾಮನಗರದ ಲೋಕೋಪಯೋಗಿ ಇಲಾಖೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆ ವೇಳೆ ಲೋಕೋಪಯೋಗಿ ಅಧಿಕಾರಿಗಳ ಜೊತೆ ಗುತ್ತಿಗೆದಾರರು ಮಾತಿನ ಚಕಮಕಿ ಕೂಡ ನಡೆಸಿದ್ದಾರೆ. ತಾಂತ್ರಿಕ ಸಹಾಯಕ ಎಸ್ ಪಿ ಮಹೇಶ್ ಜೊತೆ ಗುತ್ತಿಗೆದಾರರು ವಾಗ್ದಾಳಿ ನಡೆಸಿದ್ದಾರೆ. ಹಾಗೆಯೇ ಸಿಎಂ ಕುಮಾರಸ್ವಾಮಿ ವಿರುದ್ಧ ಕೂಡ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೆಂಡರ್ ಕರೆಯದೇ, ಜಾಹಿರಾತು ನೀಡದೇ, ನಾಮಫಲಕವನ್ನೂ ಹಾಕದೇ ಹಾಗೂ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯದೇ ಆಕ್ರಮವಾಗಿ ಟೆಂಡರ್ ನೀಡಲಾಗಿದೆ. ಜೆಡಿಎಸ್ ಗುತ್ತಿಗೆದಾರರಿಗೆ ಮಾತ್ರ ಟೆಂಡರ್ ನೀಡಲಾಗಿದೆ. ಕೇವಲ ಚನ್ನಪಟ್ಟಣ ಮಾತ್ರವಲ್ಲದೇ ರಾಮನಗರದಲ್ಲೂ ಒಂದು ಕೋಟಿ ಟೆಂಡರ್ ಅವ್ಯವಹಾರ ಮಾಡಲಾಗಿದೆ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv