– 144 ಕೋಟಿ ರೂ. ನೀರಲ್ಲಿ ಹೋಮ
ಬೆಂಗಳೂರು: ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಜಾಗದಲ್ಲಿ ಸೈನಾ ನೆಹ್ವಾಲ್, ಷಟ್ಲರ್ ಸೈನಾ ನೆಹ್ವಾಲ್ ಜಾಗದಲ್ಲಿ ಸಾನಿಯಾ ಮಿರ್ಜಾ. ಷಟ್ಲರ್ ಪಿ.ವಿ.ಸಿಂಧು ಒಲಿಂಪಿಕ್ಸ್ನಲ್ಲಿ ಗೆದ್ದಿದ್ದು ಕಂಚಿನ ಪದಕವಂತೆ. ಇವು ಶಾಲಾ ಪಠ್ಯದಲ್ಲಿ ಕಂಡು ಬಂದ ತಪ್ಪುಗಳು. ಇವು ಸ್ಯಾಂಪಲ್ ಅಷ್ಟೇ. ಹುಡುಕುತ್ತಾ ಹೋದ್ರೆ ನೂರೆಂಟು ತಪ್ಪುಗಳು ಕಂಡುಬರುತ್ತೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮಕ್ಕಳು ಕಲಿಯುತ್ತಿರುವುದು ಇದನ್ನೇ.
ಹೌದು. ಸರ್ಕಾರ 144 ಕೋಟಿ ರೂ. ಖರ್ಚು ಮಾಡಿ 6 ಕೋಟಿ ಪಠ್ಯಪುಸ್ತಕ ಪ್ರಿಂಟ್ ಮಾಡಿದೆ. ಬರೋಬ್ಬರಿ 2 ವರ್ಷ, 185 ಪರಿಣಿತರು, 45 ಲಕ್ಷ ರೂ. ಖರ್ಚು- ಇಷ್ಟೆಲ್ಲಾ ಟೈಂ ಕೊಟ್ಟು ಇಷ್ಟೆಲ್ಲಾ ಮ್ಯಾನ್ ಪವರ್ ಕೊಟ್ಟು ಇಷ್ಟೆಲ್ಲಾ ಖರ್ಚು ಮಾಡಿಯೂ ಶಾಲಾ ಪಠ್ಯಪುಸ್ತಕದಲ್ಲಿ ತಪ್ಪುಗಳ ಸರಮಾಲೆಯೇ ಇದೆ. ನೂರೆಂಟು ತಪ್ಪುಗಳ ಜೊತೆಗೆ ಕಾಗದದ ಗುಣಮಟ್ಟವೂ ಕಳಪೆಯಾಗಿದೆ.
ಪಠ್ಯ ಪುಸ್ತಕದಲ್ಲಿ ಇರುವ ಲೋಪದೋಷಗಳು
1. ಒಲಿಂಪಿಕ್ಸ್ ನಲ್ಲಿ ಪಿ.ವಿ ಸಿಂಧು ಗೆದ್ದಿರೋದು ಬೆಳ್ಳಿ ಪದಕ, ಆದ್ರೆ ಪುಸ್ತಕದಲ್ಲಿ ಕಂಚಿನ ಪದಕ ಅಂತ ತಪ್ಪು ಮಾಹಿತಿ ನೀಡಲಾಗಿದೆ.
2. ಇಂಗ್ಲಿಷ್ ವಿಷಯದಲ್ಲಿ ಪಠ್ಯಗಳು ಇರೋದೆ 24, ರಾಷ್ಟ್ರಗೀತೆಯ ಬಗ್ಗೆ ಮಾಹಿತಿ ನೀಡಿರೋ ಪಠ್ಯವನ್ನ 25ನೇ ಪಠ್ಯ ಅಂತ ಮುದ್ರಿಸಲಾಗಿದೆ.
4. ಪಠ್ಯಪುಸ್ತಕದ ಹಾಳೆಯ ಗುಣಮಟ್ಟ ಕಳಪೆ ಮಟ್ಟದ್ದು.
5. ಕನ್ನಡ ಪಠ್ಯಪುಸ್ತಕದಲ್ಲಿ ಒಂದೇ ಅಧ್ಯಾಯದ ಹೆಸರು ಎರಡು ಬಾರಿ ಮುದ್ರಣವಾಗಿದೆ.
6. ಗಣಿತ ಪಠ್ಯ ಪುಸ್ತಕದಲ್ಲಿ ಸಮಸ್ಯೆಗಳಿವೆ, ಆದರೆ ಅದಕ್ಕೆ ಉತ್ತರಗಳು ಸರಿ ಇಲ್ಲ.
7. ಪಠ್ಯ ಪುಸ್ತಕದಲ್ಲಿ ವ್ಯಾಕರಣಗಳು ತಪ್ಪು, ಇಂಗ್ಲಿಷ್ನ ಪಠ್ಯದಲ್ಲಿ ಗ್ರಾಮರ್ಗಳು ತಪ್ಪಾಗಿದೆ.
8. ಅಭ್ಯಾಸ ಚಿತ್ರಗಳನ್ನ ಪಠ್ಯದಲ್ಲಿ ಉಲ್ಟಾ ಪಲ್ಟಾ ನೀಡಲಾಗಿದೆ.
9. ಕೆಲ ಪುಸ್ತಕದಲ್ಲಿ ಪೇಜ್ ಮುದ್ರಣವಾಗಿಲ್ಲ. ಖಾಲಿ ಖಾಲಿ ಹಾಗೇ ಇದೆ.
ರಾಜ್ಯ ಪಠ್ಯ ಪುಸ್ತಕದಲ್ಲಿ ಲೋಪದೋಷವಾಗಿರುವ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿದ್ದು, ಲೋಪದೋಷವಾಗಿರೋ ಪಠ್ಯ ಪುಸ್ತಕವನ್ನ ಕೂಡಲೇ ವಾಪಸ್ ಪಡೆಯಬೇಕು ಎಂದು ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ಆಗ್ರಹಿಸಿದ್ದಾರೆ. ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ಮುದ್ರಣ ಲೋಪವಿದ್ದು, ತಪ್ಪು ಮಾಹಿತಿಗಳನ್ನ ನೀಡಲಾಗಿದೆ. ಇದರಿಂದ ಮಕ್ಕಳ ಭವಿಷ್ಯ ಹಾಳಾಗುತ್ತೆ. ಕೂಡಲೇ ಲೋಪವಾಗಿರೋ ಪುಸ್ತಕಗಳನ್ನ ವಾಪಸ್ ಪಡೆದು ಸರಿಯಾದ ಪುಸ್ತಕ ನೀಡಬೇಕು. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ರಾಜೀನಾಮೆಯನ್ನ ಕೂಡಲೇ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪರಿಷತ್ ಸದಸ್ಯ ಅರುಣ್ ಶಹಾಪುರ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಪಠ್ಯ ಪುಸ್ತಕ ಲೋಪದೋಷಕ್ಕೆ ಸಿಎಂ ಸಿದ್ದರಾಮಯ್ಯ ನೇರ ಹೊಣೆ. ಪರಿಷ್ಕರಣ ಸಮಿತಿಯ ಸಭೆಯಲ್ಲಿ ಲೋಪದೋಷಗಳು ಇವೆ ಅಂತ ಸ್ವತಃ ಶಿಕ್ಷಣ ಸಚಿವರು, ಅಧಿಕಾರಿಗಳು ಹೇಳಿದ್ರು. ಹೀಗಿದ್ರೂ ಸಿಎಂ ಸಿದ್ದರಾಮಯ್ಯ ಮುದ್ರಣ ಮಾಡುವಂತೆ ಸೂಚಿಸಿದ್ರು. ಹೀಗಾಗಿ ಇಷ್ಟು ದೊಡ್ಡ ಲೋಪಗಳು ಆಗಿದೆ. ಸರ್ಕಾರ ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿದೆ. ಈ ಕುರಿತು ಅಧ್ಯಾಯನ ಪೂರ್ವಕವಾಗಿ ಯಾವ ಕ್ರಮ ತೆಗೆದುಕೊಳ್ಳಬೇಕು ಅಂತ ನಿರ್ಧಾರ ಮಾಡ್ತೀವಿ ಅಂದ್ರು.
ಶಿಕ್ಷಣ ಸಚಿವ ತನ್ವೀರ್ ಸೇಠ್ ಈ ಬಗ್ಗೆ ಸಮರ್ಥನೆ ನೀಡಿದ್ದು, ಪಠ್ಯ ಪುಸ್ತಕದಲ್ಲಿ ದೊಡ್ಡಮಟ್ಟದ ಲೋಪ ಆಗಿಲ್ಲ. ಪ್ರಿಂಟಿಂಗ್ ಮಿಸ್ಟೇಕ್ ಆಗಿರೋದು ಲೋಪ ದೋಷಕ್ಕೆ ಕಾರಣ. ಈಗಾಗಲೇ ಲೋಪ ದೋಷ ಕುರಿತು ವರದಿ ನೀಡಲು ಸೂಚಿಸಿದ್ದೇನೆ. ಕೆಲಸದ ಒತ್ತಡದಿಂದ ಕೆಲ ಪ್ರಮಾಣದ ತಪ್ಪು ಆಗಿರಬಹುದು. ಲೋಪವಾಗಿರುವ ಪಠ್ಯ ಪುಸ್ತಕ ಸರಿ ಮಾಡಿ ಹೊಸ ಪುಸ್ತಕ ನೀಡುತ್ತೇವೆ. ಪಠ್ಯ ಪುಸ್ತಕದಲ್ಲಿ ಆದ ಲೋಪ ದೋಷಗಳು ದೊಡ್ಡ ಮಟ್ಟದಲ್ಲ ಎಂದಿದ್ದಾರೆ.