ದುಬೈ: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಕ್ಷಿಪಣಿ ದಾಳಿಯಿಂದಾಗಿ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ.
ಮಂಗಳವಾರ ಆರಂಭವಾಗಲಿರುವ ಆಲ್ ಇಂಗ್ಲೆಂಡ್ ಓಪನ್ಗಾಗಿ ಸಿಂಧು ಬರ್ಮಿಂಗ್ಹ್ಯಾಮ್ಗೆ ತೆರಳುತ್ತಿದ್ದರು. ದುಬೈ ಅವರ ಸಂಪರ್ಕ ಬಿಂದುವಾಗಿದೆ. ಆದಾಗ್ಯೂ, ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಸಂಘರ್ಷವು ವಿಶ್ವದ ಅತ್ಯಂತ ಜನನಿಬಿಡ ಪ್ರಯಾಣ ಕೇಂದ್ರಗಳಲ್ಲಿ ಒಂದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತು. ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಸೇರಿದಂತೆ ಸಾವಿರಾರು ಪ್ರಯಾಣಿಕರು ದುಬೈನಲ್ಲಿ ಸಿಲುಕಿದ್ದಾರೆ.
ವಿಮಾನ ನಿಲ್ದಾಣದಲ್ಲಿ ತನ್ನ ಸುತ್ತ ನಡೆಯುತ್ತಿರುವ ದೃಶ್ಯಗಳನ್ನು ಸೆರೆಹಿಡಿದು ಸಿಂಧು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಮುಂದಿನ ಸೂಚನೆ ಬರುವವರೆಗೂ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂಬ ಸಾಲುಗಳೊಂದಿಗೆ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಜೊತೆಗೆ ಎಕ್ಸ್ ಖಾತೆಯಲ್ಲೂ ಪೋಸ್ಟ್ ಹಂಚಿಕೊಂಡಿರುವ ಸಿಂಧು, ಈಗ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ನಮ್ಮ ತಲೆ ಮೇಲೆಯೇ ನಡೆಯುವ ಘಟನಾವಳಿ ಎಷ್ಟು ಬೇಗನೆ ಉಲ್ಬಣಗೊಂಡಿದೆ ಎಂಬುದನ್ನು ನೋಡುವುದು ನಿಜಕ್ಕೂ ಭಯಾನಕವಾಗಿದೆ. ದುಬೈ ನಾನು ತುಂಬಾ ಪ್ರೀತಿಸುವ ನಗರ, ಸದಾ ಸುರಕ್ಷಿತ ಸ್ಥಳವಾಗಿದೆ. ಆದರೆ, ಈಗಿನ ಕ್ಷಣವನ್ನು ಊಹಿಸುವುದು ಕಷ್ಟಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

