ಬೆಂಗಳೂರು: ಅನ್ನಭಾಗ್ಯ (Anna Bhagya) ಯೋಜನೆಯನ್ನು ಜಾರಿ ಮಾಡಿದ ರಾಜ್ಯ ಸರ್ಕಾರ (State Government) ಈಗ ಸಂಕಷ್ಟಕ್ಕೆ ಸಿಲುಕಿದೆ. ಅಕ್ಕಿ (Rice) ಉತ್ಪಾದಿಸುವ ರಾಜ್ಯಗಳ ಪರ ಹೋದರೂ ಸಹಕಾರ ಸಿಗುವುದು ಅನುಮಾನ ಎನ್ನುವ ಮಾತುಗಳು ವ್ಯಕ್ತವಾಗುತ್ತಿದೆ.
ಸದ್ಯ 4 ರಾಜ್ಯಗಳ ಜತೆ ಸರ್ಕಾರ ಅಕ್ಕಿ ಖರೀದಿ ಮಾತುಕತೆ ನಡೆಸಿದೆ. ಈ ಪೈಕಿ ರಾಜ್ಯಕ್ಕೆ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ಪಂಜಾಬ್, ತೆಲಂಗಾಣ ರಾಜ್ಯಗಳು ಈಗಾಗಲೇ ತಿಳಿಸಿದೆ. ಛತ್ತೀಸ್ಗಢ (Chhattisgarh) ರಾಜ್ಯದಿಂದ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸಿಗುವ ಭರವಸೆ ನೀಡಿದರೂ ಅಂದುಕೊಂಡಷ್ಟು ಪೂರೈಕೆ ಮಾಡುವುದು ಅನುಮಾನ ಎನ್ನಲಾಗುತ್ತಿದೆ.
ಸದ್ಯ ನಮ್ಮ ರಾಜ್ಯಕ್ಕೆ ಮಾಸಿಕ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದೆ. ಛತ್ತೀಸ್ಗಢ ಕೊಡುತ್ತೇವೆ ಎಂದು ಹೇಳಿರುವುದು 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮಾತ್ರ. ಆದರೆ ಉಳಿದ 1 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊರತೆ ಎದುರಾಗಲಿದೆ. ಅಕ್ಕಿ ಖರೀದಿ ಸಂಬಂಧ ಆಂಧ್ರಪ್ರದೇಶ (Andhra Pradesh) ಸರ್ಕಾರದ ಜೊತೆಯೂ ಮಾತುಕತೆ ನಡೆಸಿದ್ದು, ಇಂದು ಅಥವಾ ನಾಳೆ ಉತ್ತರ ಬರಲಿದೆ. ಇದನ್ನೂ ಓದಿ: ಮೆಜೆಸ್ಟಿಕ್ನಲ್ಲಿ ಮಹಿಳೆಯರ ʼಶಕ್ತಿʼ ಪ್ರದರ್ಶನ – ಮಧ್ಯರಾತ್ರಿಯೂ ಇತ್ತು ಬುಕ್ಕಿಂಗ್ ಸಾಲು!
ಛತ್ತೀಸ್ಗಡ ರಾಜ್ಯದ ಅಕ್ಕಿಯೂ ಸ್ವಲ್ಪ ದುಬಾರಿ ಮತ್ತು ಸಾಗಣೆ ವೆಚ್ಚವೂ ಹೆಚ್ಚಾಗುತ್ತದೆ. ಇದು ರಾಜ್ಯ ಸರ್ಕಾರಕ್ಕೆ ಇನ್ನಿಲ್ಲದ ತಲೆಬಿಸಿಗೆ ಕಾರಣವಾಗಿದೆ.
ಚುನಾವಣಾ ಸಮಯದಲ್ಲಿ ಸಿದ್ದರಾಮಯ್ಯ (Siddaramaiah) ಸೇರಿದಂತೆ ಕಾಂಗ್ರೆಸ್ ನಾಯಕರು ನಾವು 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಗ್ಯಾರಂಟಿ ಭರವಸೆ ನೀಡಿದ್ದರು.
ಕಳೆದ ವರ್ಷದವರೆಗೆ 1 ಕೆಜಿ ಅಕ್ಕಿಗೆ ಕೇಂದ್ರ ಸರ್ಕಾರ 34.28 ರೂ. ಸಬ್ಸಿಡಿ ನೀಡಿದ್ದರೆ, ರಾಜ್ಯ ಸರ್ಕಾರಗಳು 2 ಕೆಜಿ ನೀಡುತ್ತಿತ್ತು. ಈ ವರ್ಷದ ಜನವರಿಯಿಂದ ರಾಜ್ಯ ಸರ್ಕಾರದ ಯಾವುದೇ ಸಬ್ಸಿಡಿ ಇಲ್ಲದೇ ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ 1 ಕೆಜಿ ಅಕ್ಕಿಯನ್ನು ಬಡವರಿಗೆ ಉಚಿತವಾಗಿ ನೀಡಲು ಆರಂಭಿಸಿದೆ.