ಚಂಡೀಗಢ: ಬಲವಂತವಾಗಿ ನಾಲ್ವರನ್ನು ಪೊಲೀಸ್ ಠಾಣೆಗೆ ಎಳೆದೊಯ್ದು ಪೊಲೀಸರೇ ಠಾಣೆಯಲ್ಲಿ ದರೋಡೆ ಮಾಡಿರುವ ಘಟನೆ ಪಂಜಾಬ್ನ ಅಮೃತಸರದಲ್ಲಿ ನಡೆದಿದೆ.
ದುಬೈನಿಂದ ಹಿಂದಿರುಗಿದ ನಾಲ್ವರು ಸ್ನೇಹಿತರು ಅಮೃತಸರ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಪೊಲೀಸರು ಎಸ್ಯುವಿ ಕಾರ್ ಅಡ್ಡಗಟ್ಟಿ, ನಾಲ್ವರನ್ನು ಬಲವಂತವಾಗಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ನಂತರ ಅವರ ಬಳಿ ಇದ್ದ 2 ಕೆ.ಜಿ.ಚಿನ್ನ ಹಾಗೂ ಬೆಲೆಬಾಳುವ ವಸ್ತಗಳನ್ನು ಪೊಲೀಸರೇ ದರೋಡೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಾಲ್ವರು ಸ್ನೇಹಿತರು ರಾಜಸ್ಥಾನದ ನಾಗೌರ್ ನಿವಾಸಿಗಳಾಗಿದ್ದು, ಗುರುವಾರ ರಾತ್ರಿ ಅಮೃತಸರ ವಿಮಾನನಿಲ್ದಾಣದಲ್ಲಿ ಇಳಿದು ಮನೆಗೆ ಮರಳುತ್ತಿದ್ದರು. ಆಗ ಪಂಜಾಬ್ನ ಬಟಿಂಡಾ ಬಳಿ ಕಪ್ಪು ಎಸ್ಯುವಿ ಕಾರ್ ಇವರ ಕಾರನ್ನು ನಿಲ್ಲಿಸಿದೆ. ನಿಲ್ಲಿಸಿದ ಎಸ್ಯುವಿ ಕಾರಿನಿಂದ ಮೌರ್ ಮಂಡಿಯ ಸ್ಟೇಷನ್ ಹೌಸ್ ಆಫೀಸರ್ ಕೆ.ಸಿ.ಪರಶರ್ ಕೆಳಗಿಳಿದಿದ್ದಾನೆ. ಆಗ ನಾಲ್ವರು ಪ್ರಯಾಣಿಸುತ್ತಿದ್ದ ಕಾರ್ ಒಳಗಡೆ ಏನಿದೆ ಹುಡುಕಿ ಎಂದು ತನ್ನ ಸಹಚರರಿಗೆ ಹೇಳಿದ್ದಾನೆ. ಈ ವೇಳೆ ಕಾರಿನಲ್ಲಿ ಚಿನ್ನ ಹಾಗೂ ಬೆಲೆ ಬಾಳುವ ವಸ್ತುಗಳಿರುವುದು ಬೆಳಕಿಗೆ ಬಂದಿದೆ.
ಕಾರಿನಲ್ಲಿದ್ದ ಮೊಹಮ್ಮದ್ ರಫೀಕ್, ಲಿಯಾಕತ್ ಶೆರಾನಿ, ಮೊಹಮ್ಮದ್ ಇಮ್ರಾನ್ ಹಾಗೂ ಮೊಹಮ್ಮದ್ ಯುನಸ್ ನಾಲ್ವರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ನಂತರ ಅವರನ್ನು ಸೆಲ್ನಲ್ಲಿ ಬಂಧಿಸಿ, ನಾಲ್ಕು ಗಂಟೆಗಳ ನಂತರ ಅವರನ್ನು ಹೊರಗೆ ಬಿಟ್ಟಿದ್ದಾರೆ. ಆದರೆ ದುಬೈನಿಂದ ತಂದಿದ್ದ ಹಲವು ವಸ್ತುಗಳನ್ನು ಪೊಲೀಸರೇ ತೆಗೆದುಕೊಂಡು ಹೋಗಿದ್ದಾರೆ, ಇದರಲ್ಲಿ 2 ಕೆ.ಜಿ.ಚಿನ್ನವೂ ಸೇರಿದೆ ಎಂದು ಆರೋಪಿಸಲಾಗಿದೆ.
ಆರೋಪಿಗಳ ವಿರುದ್ಧ ಅಪಹರಣ ಹಾಗೂ ಸುಲಿಗೆ ಪ್ರಕರಣ ದಾಖಲಿಸಲಾಗಿತ್ತು. ಸ್ಟೇಷನ್ ಹೌಸ್ ಆಫೀಸರ್ ಕೆ.ಸಿ.ಪರಶರ್, ಇವನ ಗನ್ ಮ್ಯಾನ್ ಹವಾಲ್ದಾರ್ ಅವತಾರ್ ಸಿಂಗ್ ಹಾಗೂ ಅನುಪ್ ಗ್ರೋವರ್ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಚಿನ್ನ ಇನ್ನೂ ಸಿಕ್ಕಿಲ್ಲ, ವಶಪಡಿಸಿಕೊಳ್ಳಬೇಕಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನಾನಕ್ ಸಿಂಗ್ ತಿಳಿಸಿದ್ದಾರೆ.