ಉಡುಪಿ: ಮಾಲೂರಿನಲ್ಲಿ ಉತ್ಸವದ ಸಂದರ್ಭ ಪಲ್ಲಕ್ಕಿ ಮುಟ್ಟಿದ್ದಕ್ಕೆ ಸವರ್ಣೀಯರಿಂದ (Upper Caste) ದಲಿತ ಬಾಲಕನಿಗೆ (Dalit Boy) ಬಹಿಷ್ಕಾರ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ (Udupi) ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ (Pejavara Shree) ತೀವ್ರ ಖೇದ ವ್ಯಕ್ತಪಡಿಸಿದರು.
ಈ ಘಟನೆಯನ್ನು ಕೇಳಿ ನಮಗೆ ಬಹಳ ಖೇದವಾಗಿದೆ. ಧರ್ಮ ಗ್ರಂಥಗಳು ಇಂತಹ ಬೆಳವಣಿಗೆಯನ್ನು ಒಪ್ಪುವುದಿಲ್ಲ. ಉತ್ಸವ ಇಡೀ ಊರಿಗೆ ಸಂಬಂಧಿಸಿದ ಕಾರ್ಯಕ್ರಮ. ಬಹಿಷ್ಕಾರ ಶಿಕ್ಷೆ ದಂಡವನ್ನು ಯಾವ ಧರ್ಮ ಗ್ರಂಥವೂ ಒಪ್ಪುವುದಿಲ್ಲ. ಹಿಂದೂ ಸಂಘಟನೆಗಳು ಪಿಡುಗಿನ ವಿರುದ್ಧ ಜಾಗೃತಿ ಮೂಡಿಸುತ್ತಿದೆ. ಸರ್ಕಾರ ಕೂಡ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.
ತಪ್ಪು ಮಾಡಿದವರನ್ನು ಶಿಕ್ಷಿಸಿದರೆ ಸಾಲದು, ಜಾಗೃತ ಕಾರ್ಯಕ್ರಮ ಆಗಬೇಕು. ಸಮಾಜ ಮತ್ತು ಧರ್ಮ ಒಪ್ಪದ ಚಟುವಟಿಕೆಗಳಿಗೆ ಯಾರೂ ಇಳಿಯಬಾರದು ಎಂದು ಪೇಜಾವರ ಶ್ರೀಗಳು ಹೇಳಿದರು. ಇದನ್ನೂ ಓದಿ: ದಲಿತ ಬಾಲಕ ದೇವರ ಮೂರ್ತಿ ಮುಟ್ಟಿದ್ದಕ್ಕೆ 60 ಸಾವಿರ ರೂ. ದಂಡ ಹಾಕಿದ ಗ್ರಾಮಸ್ಥರು
ಶಿವಮೊಗ್ಗಕ್ಕೆ ಉಗ್ರರ ಪ್ರವೇಶವಾಗಿದೆ ಎಂದು ಕೇಳಿ ನಮಗೆ ಆಘಾತವಾಗಿದೆ. ಮಂಗಳೂರು, ಉಡುಪಿ ಭಾಗದಲ್ಲೂ ಇಂತಹ ಚಟುವಟಿಕೆ ನಡೆದಿದೆ. ಸ್ಯಾಟಲೈಟ್ ಫೋನ್ಗಳ ಮೂಲಕ ಸಂಭಾಷಣೆ ನಡೆಯುವುದು ನಮ್ಮ ಗಮನಕ್ಕೆ ಬಂದಿತ್ತು. ನಿಖರವಾದ ಮಾಹಿತಿಗಳ ಜೊತೆಗೆ ಇದನ್ನು ಪರಿಶೀಲನೆ ಮಾಡಬೇಕು. ಪ್ರಕರಣದಲ್ಲಿ ಹತ್ತು ಹಲವು ಜನ ಭಾಗಿ ಆಗಿರುವ ಸಾಧ್ಯತೆ ಇದೆ ಎಂದು ಪೇಜಾವರ ಶ್ರೀ ಸಂಶಯ ವ್ಯಕ್ತಪಡಿಸಿದರು.
ಉಗ್ರರ ವಿರುದ್ಧ ಕೂಂಬಿಂಗ್ ಮಾದರಿಯಲ್ಲಿ ಪರಿಶೀಲನೆ ಆಗಬೇಕು. ಸಮಾಜದ ಶಾಂತಿ ಕದಡುವುದನ್ನು ತಪ್ಪಿಸಬೇಕು. ಉಗ್ರರಿಂದ ಸಮಾಜದಲ್ಲಿ ಯಾರಿಗೂ ನೆಮ್ಮದಿ ಇಲ್ಲ. ಸಮಾಜದ ಶಾಂತಿ ಕದಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮವಾಗಲಿ. ಯಾವುದೇ ಕೋಮಿನ ಬಣ್ಣ ನೀಡದೆ ಇದನ್ನು ನಿಗ್ರಹ ಮಾಡಬೇಕು. ಭಾರತ ದೇಶದ ಒಳಗೆ ಇರುವವರು ಭಾರತೀಯರು ದೇಶದ ಯಾವುದೇ ಭಾಗದಲ್ಲಿ ಉಗ್ರರ ಕರಿನೆರಳು ಹಾಯಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಹಾಸ್ಟೆಲ್ನ ಕಿಟಕಿ ರಾಡ್ ಮುರಿದು ಮೂವರು ವಿದ್ಯಾರ್ಥಿನಿಯರು ಪರಾರಿ