ಚಿಕ್ಕಮಗಳೂರು: ಜನ ಮೆಚ್ಚುವ ಸಿನಿಮಾ ಹಾಗೂ ಯುವಕರಿಗೆ ಅಡ್ವೈಸ್ ಮಾಡುವಂತಹಾ ಸಿನಿಮಾ ಮಾಡಬೇಕು ಎಂಬುದು ಪುನೀತ್ ರಾಜ್ಕುಮಾರ್ ಅವರ ಕನಸಾಗಿತ್ತು. ಅವರಿಗೆ ಚಿಕ್ಕಮಗಳೂರಿನ ನೇಚರ್, ಕಾಫಿ ಎಂದರೆ ತುಂಬಾ ಇಷ್ಟ ಎಂದು ಅವರ ಸ್ನೇಹಿತ ಹಾಗೂ ಸಂಬಂಧಿ ಭರತ್ ಪಬ್ಲಿಕ್ ಟಿವಿ ಜೊತೆ ಪುನೀತ್ ಜೊತೆಗಿನ ಆತ್ಮೀಯತೆಯನ್ನು ಮೆಲುಕು ಹಾಕಿದ್ದಾರೆ.
ಭರತ್, ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿಯವರ ಚಿಕ್ಕಪ್ಪನ ಮಗ. ಇಂದು ತಾಲೂಕಿನ ಭಾಗಮನೆ ಎಸ್ಟೇನ್ನಲ್ಲಿ ಮಾತನಾಡಿದ ಅವರು, ಪುನೀತ್ಗೆ ಕಾಫಿ ಅಂದರೆ ತುಂಬಾ ಇಷ್ಟ. ಜೊತೆಗೆ ಚಿಕ್ಕಮಗಳೂರಿನ ನೇಚರನ್ನು ಅವರು ತುಂಬಾ ಇಷ್ಟಪಡುತ್ತಿದ್ದರು. ಚಿಕ್ಕಮಗಳೂರಿಗೆ ಬಂದಾಗೆಲ್ಲಾ ನನ್ನ ಚಿಕ್ಕ ವಯಸ್ಸಲ್ಲಿ ಮಾಡಿದ ಚಿತ್ರದ ಸ್ಥಳಕ್ಕೆ ಹೋಗಬೇಕು ಎಂದು ತುಂಬಾ ಹೇಳುತ್ತಿದ್ದರು. ಅವರಿಗೆ ಇಲ್ಲಿನ ಪ್ರಕೃತಿ ಸೌಂದರ್ಯ ತುಂಬಾ ಇಷ್ಟವಿತ್ತು. ಪುನೀತ್ ತುಂಬಾ ಡೌನ್ ಟು ಅರ್ಥ್ ವ್ಯಕ್ತಿ. ಬಹಳ ಸಿಂಪಲ್. ಅವರ ಸಿಂಪ್ಲಿಸಿಟಿ ಯಾರಿಗೂ ಬರುವುದಿಲ್ಲ. ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಮೇರು ವ್ಯಕ್ತಿತ್ವ ಅವರದ್ದು. ದಾನ-ಧರ್ಮ ಮಾಡುವುದು ಅವರಿಗೆ ತುಂಬಾ ಇಷ್ಟ. ತುಂಬಾ ಮಾಡಿದ್ದಾರೆ. ಅವರನ್ನು ಕಳೆದುಕೊಂಡಿರುವುದು ದೇಶಕ್ಕೆ ತುಂಬಲಾರದ ನಷ್ಟ ಎಂದು ಅವರೊಂದಿಗಿನ ಒಡನಾಟ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ
ಜನ ಮೆಚ್ಚುವ ಸಿನಿಮಾ ಹಾಗೂ ಯುವಜನತೆಗೆ ಪ್ರೇರೇಪಣೆ ನೀಡುವಂತಹಾ ಸಿನಿಮಾ ಮಾಡಬೇಕು ಅನ್ನೋದು ಅವರ ಆಸೆಯಾಗಿತ್ತು. ಅವರು ಕಾಫಿಯನ್ನು ಹೆಚ್ಚು ಇಷ್ಟ ಪಡುತ್ತಿದ್ದರು. ನಮ್ಮನ್ನು ಕಂಡಾಗ ಜೊತೆ ಕೂತು ಅವರು ಮಾತನಾಡುತ್ತಿದ್ದ ರೀತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನನ್ನ ಅವರ ಸಂಬಂಧ ಬಹಳ ಆತ್ಮಿಯವಾಗಿತ್ತು. ಅವರು ಆಗಾಗ ಇಲ್ಲಿಗೆ ಬಂದು ಹೋಗುತ್ತಿದ್ದರು. ಬೆಂಗಳೂರಿಗೆ ಹೋದಾಗ ಸಿಗುತ್ತಿದ್ದರು. ತುಂಬಾ ಆತ್ಮೀಯವಾಗಿ ಮಾತನಾಡುತ್ತಿದ್ದರು. ಸದಾ ಖುಷಿಯಿಂದ ಇರುತ್ತಿದ್ದರು. ಬೆಟ್ಟದ ಹೂ ಚಿತ್ರ ಮಾಡಿದ ನೆನಪನ್ನು ಆಗಾಗ ಮೆಲುಕು ಹಾಕುತ್ತಿದ್ದರು ಎಂದರು. ಇದನ್ನೂ ಓದಿ: ಪುನೀತ್ ಸಾವಿನ ಸುದ್ದಿ ನೋಡಿ ಹೃದಯಾಘಾತದಿಂದ ಅಭಿಮಾನಿ ಸಾವು
ಮಲೆನಾಡ ಊಟ ಅಂದರೆ ಅವರಿಗೆ ತುಂಬಾ ಇಷ್ಟ. ಇಲ್ಲಿಗೆ ಬಂದಾಗ ಮಲೆನಾಡ ಊಟ ಮಾಡಿಕೊಂಡು ಎಲ್ಲರ ಜೊತೆಯೂ ಆತ್ಮೀಯತೆಯಿಂದ ಇರುತ್ತಿದ್ದರು. ಚಿಕ್ಕಮಗಳೂರಿಗೆ ಬಂದಾಗ ನನ್ನನ್ನು ಭೇಟಿಯಾಗದೆ ಹೋಗುತ್ತಿರಲಿಲ್ಲ. ಚಿಕ್ಕಮಗಳೂರಿಗೆ ಬರುವಾಗಲೂ ಬರುತ್ತಿದ್ದೇನೆ ಎಂದು ಹೇಳಿ ಬರುತ್ತಿದ್ದರು. ಮೊನ್ನೆ ಕೂಡ ಫೋನ್ ಮಾಡಿದ್ದರು. ಆದರೆ, ಇಂದು ಟಿವಿ ನೋಡಿ ಶಾಕ್ ಆಗಿದೆ. ನಾಳೆ ಬೆಂಗಳೂರಿಗೆ ಹೋಗಿ ಅವರ ಅಂತಿಮ ದರ್ಶನ ಪಡೆಯಲಿದ್ದೇನೆ ಎಂದು ಭರತ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹೊಗಳಿದರೆ ಮಾತು ಬೇರೆ ಟಾಪಿಕ್ಗೆ ಹೋಗುತ್ತಿತ್ತು, ಮೂಡಾಫ್ ಆಗಿದ್ದನ್ನು ನೋಡಿಲ್ಲ