ಬೆಂಗಳೂರು: ತಂದೆ ದಿ. ಡಾ. ರಾಜ್ ಕುಮಾರ್ ಅವರಂತೆ ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದು ಅನ್ನೋ ವ್ಯಕ್ತಿತ್ವ ಪುನೀತ್ ಅವರದ್ದಾಗಿದೆ ಎಂದು ಸಂಗೀತ ನಿದೇರ್ಶಕ ವಿ ಮನೋಹರ್ ಹೇಳಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪುನೀತ್ ಜೊತೆ 25 ವರ್ಷಗಳಿಂದ ಒಡನಾಟ ಇದೆ. ಅಣ್ಣಬಾಂಡ್, ಅಂಜನಿ ಪುತ್ರ ಎರಡು ಸಿನಿಮಾದಲ್ಲಿ ಆಕ್ಟ್ ಮಾಡಿದ್ದೀನಿ. ಸಿಕ್ಕಾಗಲ್ಲೆ ರಿದಮ್ ಬಗ್ಗೆ ಮಾಹಿತಿ ಕೊಡೋರು. ಅವರಿಗೆ ತುಂಬಾ ಪ್ರೀತಿ ಇತ್ತು ಎಂದು ಭಾವುಕರಾದರು. ಇದನ್ನೂ ಓದಿ: ಕರಗದ ಅಪ್ಪು ಅಭಿಮಾನಿಗಳ ಸಾಗರ – ನೂಕುನುಗ್ಗಲು, ಬ್ಯಾರಿಕೇಡ್ ತಳ್ಳಿ ಆಕ್ರಂದನ
ತಂದೆಯ ರೀತಿಯಲ್ಲಿಯೇ ಎಡಗೈಯಲ್ಲಿ ಕೊಟ್ಟಿದ್ದು ಬಲಗೈಯಲ್ಲಿ ಗೊತ್ತಾಗಬಾರದು ಎನ್ನುವಂತಹ ವ್ಯಕ್ತಿತ್ವ ಅವರದ್ದು. ಸಂಘ ಸಂಸ್ಥೆಗಳಿಗೆ ತುಂಬಾ ಸಹಾಯ ಮಾಡುತ್ತಿದ್ದರು. ತುಂಬಾ ಫಿಟ್ ಆಗಿದ್ದ ಪುನೀತ್ಗೆ ಹೀಗೆ ಯಾಕಾಯ್ತು. ಪುನೀತ್ ಹಾಡು ಹಾಡೋಣ ಅಂತ ಒಂದು ಹಾಡು ರೆಡಿ ಮಾಡೋಕೆ ಹೇಳಿದ್ರು. ಅಷ್ಟರಲ್ಲಿ ಪುನೀತ್ ಗೆ ಹೀಗಾಯ್ತು ಎಂದು ಗದ್ಗದಿತರಾದರು. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ಕೊನೆಯದಾಗಿ ವಿಶೇಷ ಪೋಸ್ಟ್ ಮಾಡಿದ್ದ ಅಪ್ಪು
ನಿನ್ನೆ ಬೆಳಗ್ಗೆ ಅಪ್ಪುಗೆ ಹೃದಯಾಘಾತವಾಗಿತ್ತು. ಕೂಡಲೇ ಅವರು ಸ್ಥಳೀಯ ರಮಣಶ್ರೀ ಕ್ಲಿನಿಕ್ ಗೆ ತೆರಳಿದ್ದಾರೆ. ಅಲ್ಲಿ ಇಸಿಜಿ ಮಾಡಿಸಿಕೊಂಡು ಇನ್ನೇನು ಮನೆ ಕಡೆ ತೆರಳುವಷ್ಟರಲ್ಲಿ ಅಲ್ಲಿಯೇ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಕಾರಿನಲ್ಲಿಯೇ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ, ಫಲಕಾರಿಯಾಗದೇ ನಿಧನರಾಗಿದ್ದಾರೆ. ಪುನೀತ್ ಅವರು ಓರ್ವ ಪುತ್ರಿ ಅಮೆರಿಕದಲ್ಲಿದ್ದು, ಅವರ ಬರುವಿಕೆಯ ನಂತರ ಅಂತ್ಯಕ್ರಿಯೆ ನಡೆಯಲಿದೆ.