ಚಿಕ್ಕಮಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯಾಘಾತದ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು, ದೇವೀರಮ್ಮನಿಗೆ ಪೂಜೆ ಮಾಡಿಸಿ ನಮ್ಮಣ್ಣಂಗೆ ಏನೂ ಆಗೋದು ಬೇಡ, ಹೆಗಲ ಮೇಲೆ ಸೌದೆ ಹೊತ್ಕೊಂಡು ನಿನ್ನ ಬೆಟ್ಟ ಹತ್ತಿ ಪೂಜೆ ಮಾಡಿಸ್ತೀನಿ ಅಂತ ಹರಕೆ ಕಟ್ಟಿಕೊಂಡಿದ್ರು. ಆದರೆ ವಿಧಿಲಿಖಿತ ಬೇರೆಯೇ ಇತ್ತು. ಕೋಟ್ಯಂತರ ಮನಸುಗಳ ಪ್ರಾರ್ಥನೆ ಆ ಭಗವಂತನಿಗೆ ಕೇಳಿಸ್ತೋ-ಇಲ್ವೊ ಪುನೀತ್ ನಮ್ಮನ್ನ ಅಗಲಿಯೇ ಬಿಟ್ಟರು. ಆದರೆ ಹರಕೆ ಕಟ್ಟಿಕೊಂಡಿದ್ದ ಆ ಯುವಕರು ಅಪ್ಪು ಕುಟುಂಬಕ್ಕಾಗಿ ಹರಕೆ ಸಲ್ಲಿಸಿದ್ದಾರೆ. ಇದು ಕಾಫಿನಾಡಿನ ಅಪ್ಪು ಅಭಿಮಾನಿಗಳ ಅಭಿಮಾನದ ಕಥೆ.
ಪುನೀತ್ ಅಪ್ಪಟ ಅಭಿಮಾನಿ ಚಿಕ್ಕಮಗಳೂರಿನ ರವಿ ಅವರು ಸೌದೆ ಹೊತ್ತು ದೇವೀರಮ್ಮನ ದರ್ಶನ ಮಾಡಿದ್ದಾರೆ. ಅಪ್ಪುಗೆ ಹೃದಯಾಘಾತವಾದ ಸುದ್ದಿ ತಿಳಿಯುತ್ತಿದ್ದಂತೆ ಬೇಗ ಗುಣಮುಖರಾಗಲಿ. ಬೆಟ್ಟ ಹತ್ತಿ ಪೂಜೆ ಮಾಡಿಸ್ತೀನಿ ಅಂತ ದೇವೀರಮ್ಮನಿಗೆ ಹರಕೆ ಕಟ್ಟಿಕೊಂಡಿದ್ದರಂತೆ. ಆದರೀಗ ಅಪ್ಪು ಇಲ್ಲದ ಕಾರಣ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ಒಳ್ಳೆದಾಗಲಿ ಅಂತ 3,800 ಅಡಿ ಎತ್ತರದ ಬೆಟ್ಟವನ್ನ ಹತ್ತಿ ದೇವೀರಮ್ಮನಿಗೆ ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಈಡೇರಿತು ಕನ್ನಡಿಗರ ಕಣ್ಮಣಿಯ ಮಹದಾಸೆ – 40 ಸಾವಿರ ಅಭಿಮಾನಿಗಳಿಗೆ ಒಟ್ಟಿಗೇ ಊಟ!
ಅಪ್ಪು ರವಿ ಅಂತಲೇ ಫೇಮಸ್ ಆಗಿರೋ ರವಿ, ನಾನು ನನ್ನ ತಮ್ಮ ಇಬ್ಬರೂ ಅಪ್ಪು ರೀತಿ ನೇತ್ರದಾನ ಮಾಡೋಕೆ ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಮಗಳ ಹೆಸರಿದ್ದ ಕ್ಯಾಂಟೀನ್ಗೆ ಅಪ್ಪು ಹೆಸರನ್ನು ಮರುನಾಮಕರಣ ಮಾಡಿದ್ದಾರೆ. ಕ್ಯಾಂಟಿನ್ಗೆ ಬರುವ 60 ವರ್ಷ ಮೇಲ್ಪಟ್ಟವರಿಗೆ ಉಚಿತ ಊಟ-ತಿಂಡಿ, ಕಾಫಿ-ಟೀ ಕೊಡ್ತಿದ್ದಾರೆ. ಇನ್ನು ಕ್ಯಾಂಟಿನ್ಗೂ ಮೊದಲು ಆರ್ಕೇಸ್ಟ್ರಾದಲ್ಲಿ ಕೆಲಸ ಮಾಡುತ್ತಿದ್ದ ರವಿ, ಅಪ್ಪು ರೀತಿ ಡ್ಯಾನ್ಸ್ ಮಾಡ್ತಿದ್ರಂತೆ, ಕೊನೆಯಲ್ಲಿ ಪುನೀತ್ ಹಾಡು ಇಲ್ಲದೆ ವಾಪಸ್ ಬರುತ್ತಿರಲಿಲ್ವಂತೆ.