ಹಾಸನ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿ ಸಾವಿನಲ್ಲೂ ಸಾರ್ಥಕತೆ ಮೆರೆದ ಘಟನೆ ಹಾಸನದಲ್ಲಿ ನಡೆದಿದೆ.
ಎಚ್.ಟಿ.ರವಿ ಮೃತಪಟ್ಟ ವ್ಯಕ್ತಿ. ಹಾಸನ ಜಿಲ್ಲೆ, ಬೇಲೂರು ಪಟ್ಟಣದ ನಿವಾಸಿಯಾದ ರವಿ ಅವರು ಬೆಂಗಳೂರಿಗೆ ಬಂದು ಅಪ್ಪುವಿನ ಪಾರ್ಥಿವ ಶರೀರದ ದರ್ಶನ ಪಡೆದು ಬಂದಿದ್ದರು. ಆದರೆ ನಿನ್ನೆ ರವಿ ಅವರಿಗೂ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಹಾಸನದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆಯೇ ರವಿ ಸಾವನ್ನಪ್ಪಿದ್ದಾರೆ.
ನಾನು ಬದುಕುವುದಿಲ್ಲ ಎಂದು ಅರಿತ ರವಿ ಅವರು, ನನ್ನ ಎರಡು ಕಣ್ಣುಗಳನ್ನು ದಾನ ಮಾಡಿ ಎಂದು ಸಹೋದರ ಎಚ್.ಟಿ.ಕುಮಾರಸ್ವಾಮಿ ಅವರಿಗೆ ಸಾಯುವ ಮುನ್ನಾ ತಿಳಿಸಿದ್ದರು. ಸಹೋದರನ ಕೊನೆಯ ಆಸೆಯಂತೆ ಕುಟುಂಬಸ್ಥರು ರವಿ ಅವರ ಎರಡು ಕಣ್ಣುಗಳನ್ನು ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ದಾನ ಮಾಡಿದ್ದಾರೆ. ರವಿ ಅವರ ಅಂತ್ಯಕ್ರಿಯೆಯನ್ನು ಬೇಲೂರಿನ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಗಿದೆ. ಇದನ್ನೂ ಓದಿ: ಭೋಜನಪ್ರಿಯ ಅಪ್ಪುಗೆ ಯಾವ ಯಾವ ಫುಡ್ ಇಷ್ಟ? ಯಾವೆಲ್ಲ ಹೋಟೆಲ್ಗೆ ಹೋಗ್ತಿದ್ರು?
ರವಿ ಅವರು ಪುನೀತ್ ಅಂತಿಮ ದರ್ಶನಕ್ಕೂ ಹೋಗಿ ಬಂದಿದ್ದು, ಕಸಬಾ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನ ನಿರ್ದೇಶಕರು ಹಾಗೂ ತಾಲೂಕು ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾಗಿದ್ದರು.