ಅದೆಷ್ಟೇ ಜನಸಂದಣಿ ಇರಲಿ, ಅಭಿಮಾನಿಗಳು ಮುತ್ತಿಕ್ಕಿಕೊಳ್ಳಲು ಪುನೀತ್ ರಾಜ್ ಕುಮಾರ್ ಅವರನ್ನು ಸೇಫಾಗಿ ಕರೆದುಕೊಂಡು ಹೋಗುತ್ತಿದ್ದವರು ಅವರ ಗನ್ ಮ್ಯಾನ್ ಚಲಪತಿ. ಮಾಜಿ ಸೈನಿಕರು ಆಗಿರುವ ಚಲಪತಿ ಹಲವು ವರ್ಷಗಳಿಂದ ಅಪ್ಪು ಅವರ ಗನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಅಂದು ಕೊನೆಯ ಬಾರಿಗೆ ಪುನೀತ್ ಅವರು ಆಸ್ಪತ್ರಗೆ ಹೋದಾಗ, ಅವರನ್ನು ಕಾರ್ ವರೆಗೂ ಕರೆದುಕೊಂಡು ಹೋಗಿ ಬಿಟ್ಟವರು ಆನಂತರ ಅಪ್ಪು ಅವರ ಅಗಲಿಗೆ ಸುದ್ದಿ ಕೇಳಿ ಕಣ್ಣಿರಾಗಿದ್ದರು. ಅಷ್ಟೊಂದು ಭಾವನಾತ್ಮಕವಾಗಿ ಅಪ್ಪು ಅವರನ್ನು ಅಭಿಮಾನಿಸುತ್ತಿದ್ದರು.
ಈಗ ಅಪ್ಪು ಇಲ್ಲ, ಸುಮ್ಮನೆ ಅವರ ಮನೆಯಲ್ಲಿ ಕುಳಿತುಕೊಳ್ಳಲು ಆಗಲ್ಲ. ಅಲ್ಲದೇ, ಬೇರೆ ಯಾವ ನಟರ ಬಳಿಯೂ ಇವರಿಗೆ ಕೆಲಸ ಮಾಡಲು ಇಷ್ಟವಿಲ್ಲವಂತೆ. ಹಾಗಾಗಿ ಅಪ್ಪು ಇಲ್ಲದ ಬೆಂಗಳೂರನ್ನೇ ತೊರೆದು, ವಾಪಸ್ಸು ತಮ್ಮೂರಿಗೆ ಹೋಗಿದ್ದಾರೆ ಚಲಪತಿ. ಬೇರೆ ಯಾರಿಗಾದರೂ ಗನ್ ಮ್ಯಾನ್ ಆಗುತ್ತೇನೆ. ಮತ್ತೆ ನಟರಿಗೆ ಆಗಲಾರೆ. ಅಪ್ಪು ಸಾರ್ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂದು ಮಾಧ್ಯಮಗಳ ಜೊತೆ ನೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಶಿವಣ್ಣ – ತಲೈವಾ ಸಿನಿಮಾಗೆ `ಜೈಲರ್’ ಟೈಟಲ್ ಫಿಕ್ಸ್
ಅಪ್ಪು ಸಾರ್ ನಿಧನದ ನಂತರ ಐದಾರು ತಿಂಗಳು ಅಶ್ವಿನಿ ಮೇಡಂ ಜೊತೆ ಕೆಲಸ ಮಾಡಿದೆ. ಇದೀಗ ಕೆಲಸ ಬಿಟ್ಟು ಒಂದು ತಿಂಗಳಾಗಿದೆ. ಊರಲ್ಲೇ ಇದ್ದೇನೆ. ಅಪ್ಪ ಸರ್ ನೆನಪಿನಲ್ಲೇ ದಿನಗಳನ್ನು ಸಾಗಿಸುತ್ತಿದ್ದೇನೆ. ಅಲ್ಲದೇ, ಅಪ್ಪು ಸರ್ ಮನೆಯಲ್ಲಿ ನಾನು ಮಾಡುವಂತಹ ಕೆಲಸ ಏನೂ ಇರಲಿಲ್ಲ. ಸುಮ್ಮನೆ ಕೂರುವುದು ನನಗೆ ಕಷ್ಟ. ಹಾಗಾಗಿ ವಾಪಸ್ಸು ಊರಿಗೆ ಬಂದಿದ್ದೇನೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಯಾವತ್ತೂ ಅಪ್ಪು ಸರ್ ನನ್ನನ್ನು ಗನ್ ಮ್ಯಾನ್ ಆಗಿ ನೋಡಲಿಲ್ಲ. ಸಹೋದರನಂತೆ ಕಂಡರು ಎಂದು ನೆನಪಿಸಿಕೊಳ್ಳುತ್ತಾರೆ.