ಭಾರತೀಯ ಸೇನೆಯ ಇತಿಹಾಸಲ್ಲಿ ಕಂಡು ಕೇಳರಿಯದ ಉಗ್ರರ ದಾಳಿ ನಡೆದಿದಿದ್ದು ಸಿಆರ್ಪಿಎಫ್ನ 47 ಯೋಧರು ಹುತಾತ್ಮರಾಗಿದ್ದಾರೆ. ನರಹಂತಕ ಉಗ್ರನೊಬ್ಬ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಕಾರನ್ನು ಬಸ್ಸಿಗೆ ಡಿಕ್ಕಿ ಹೊಡೆಸಿದ ಪರಿಣಾಮ 47 ಮಂದಿ ಯೋಧರು ವೀರಮರಣವನ್ನು ಹೊಂದಿದ್ದಾರೆ.. 2,547 ಸೈನಿಕರು ಜಮ್ಮುವಿನಿಂದ ಶ್ರೀನಗರ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಹೀಗಾಗಿ ಕಣಿವೆ ರಾಜ್ಯದಲ್ಲಿ ಸಿಆರ್ಪಿಎಫ್ ಪಾತ್ರ ಏನು? ಇತ್ಯಾದಿ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.
ಏನಿದು ಸಿಆರ್ಪಿಎಫ್?
ದೇಶದ ಶಸಸ್ತ್ರ ಪೊಲೀಸ್ ಪಡೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್) ಅತಿ ದೊಡ್ಡ ಪಡೆಯಾಗಿದ್ದು ಕೇಂದ್ರ ಗೃಹ ಇಲಾಖೆಯ ಅಡಿ ಕೆಲಸ ಮಾಡುತ್ತದೆ.
ಸಿಆರ್ಪಿಎಫ್ ಕೆಲಸ ಏನು?
ದೇಶದ ಗಡಿಯಲ್ಲಿ ಬಿಎಸ್ಎಫ್ ಸೈನಿಕರು ನಿಯೋಜನೆಗೊಂಡರೆ ದೇಶದ ಒಳಗಡೆ ನಡೆಯುತ್ತಿರುವ ಗಲಭೆಗಳನ್ನು ನಿಯಂತ್ರಿಸುವುದು ಸಿಆರ್ಪಿಎಫ್ ಪೊಲೀಸರ ಕೆಲಸ. ಜಮ್ಮು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಆರ್ಪಿಎಫ್ ಪೊಲೀಸರನ್ನು ಸರ್ಕಾರ ನಿಯೋಜಿಸಿದೆ.
ಜಮ್ಮು ಕಾಶ್ಮೀರದಲ್ಲಿ ಎಷ್ಟಿದ್ದಾರೆ?
ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿ ಪ್ರಕಾರ ಒಟ್ಟು 60 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಯೋಧರು ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದಾರೆ. ಕಣಿವೆ ರಾಜ್ಯವನ್ನು ಜಮ್ಮು, ಕಾಶ್ಮೀರ, ಲಡಾಖ್ ಎಂಬ ಮೂರು ಪ್ರಾಂತ್ಯಗಳ ಮೂಲಕ ಗುರುತಿಸಲಾಗುತ್ತದೆ. ಇದರಲ್ಲಿ ಕಾಶ್ಮೀರ ಭಾಗದ ಎಲ್ಲ ಜಿಲ್ಲೆಗಳಲ್ಲಿ ಸಿಆರ್ಪಿಎಫ್ ಯೋಧರನ್ನು ನಿಯೋಜಿಸಲಾಗಿದೆ. ಅದರಲ್ಲೂ ಕಾಶ್ಮೀರದ ಬಾರಾಮುಲ್ಲಾ, ಕುಪ್ವಾರ, ಪುಲ್ವಾಮಾ, ಬಂದೀಪುರ, ಶೋಪಿನ್ ಜಿಲ್ಲೆಗಳಲ್ಲಿ ಹೆಚ್ಚು ಆತಂಕವಾದಿಗಳಿದ್ದು ಇಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.
ಈ ಹಿಂದೆ ಗಡಿ ಭದ್ರತೆ ಮತ್ತು ದೇಶದ ಕಾನೂನು ಸುವ್ಯವಸ್ಥೆಯನ್ನು ಬಿಎಸ್ಎಫ್ ಮತ್ತು ಸಿಆರ್ಪಿಎಫ್ ನೋಡಿಕೊಳ್ಳುತ್ತಿತ್ತು. ಆದರೆ 2005ರಿಂದ ಬಿಎಸ್ಎಫ್ ಯೋಧರಿಗೆ ಗಡಿ ರಕ್ಷಣೆಯ ಜವಾಬ್ದಾರಿ ನೀಡಿದರೆ, ಸಿಆರ್ಪಿಎಫ್ ಯೋಧರನ್ನು ದೇಶದ ಆಂತರಿಕ ಸಮಸ್ಯೆ ನಿವಾರಿಸಲು ನಿಯೋಜಿಸಲಾಗುತ್ತದೆ.
ಕಾಶ್ಮೀರದಲ್ಲಿ ಕೆಲಸ ಏನು?
ಕಾಶ್ಮೀರದ ಕಣಿವೆ ಪ್ರದೇಶದಲ್ಲಿ ಸಿಆರ್ಪಿಎಫ್ ಯೋಧರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಗುಪ್ತಚರ ಇಲಾಖೆ ನೀಡಿದ ಮಾಹಿತಿಯಂತೆ ಕಾರ್ಯಾಚರಣೆ ಮಾಡುವುದು, ಸೇನಾ ಕಾರ್ಯಾಚಣೆಗೆ ಸಹಕಾರ ನೀಡುವ ಕೆಲಸವನ್ನು ಮಾಡುತ್ತದೆ.
ಹಿಂದೆ ಯಾವಾಗ ದಾಳಿಯಾಗಿತ್ತು?
2018ರ ಜುಲೈ 13ರಂದು ಅನಂತ್ನಾಗ್ ಜಿಲ್ಲೆಯಲ್ಲಿ ಉಗ್ರರು ಸಿಆರ್ಪಿಎಫ್ ಯೋಧರ ಮೇಲೆ ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದರೆ, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಇದಕ್ಕೂ ಮುನ್ನ 2018ರ ಫೆಬ್ರವರಿ ತಿಂಗಳು ಶ್ರೀನಗರದ ಸಿಆರ್ಪಿಎಫ್ ಶಿಬಿರದ ಮೇಲೆ ಉಗ್ರರು ದಾಳಿ ಮಾಡಿದ್ದರು. ಆಗ 30 ಗಂಟೆಗಳ ಕಾಲ ನಿರಂತರ ಗುಂಡಿನ ದಾಳಿಯ ಮೂಲಕ ಭಾರತೀಯ ಯೋಧರು, ಉಗ್ರರನ್ನು ಹತ್ಯೆ ಮಾಡಿದ್ದರು.
ಹಿಂದೆ ಐಇಡಿ ದಾಳಿ ನಡೆ ನಡೆದಿತ್ತಾ?
ಕಣಿವೆ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸುಧಾರಿತ ಸ್ಫೋಟಕ ಬಳಸಿ ಸ್ಫೋಟಿಸುವ ಕೃತ್ಯಗಳು ಕಡಿಮೆಯಾಗಿದೆ. 1990ರ ಅವಧಿಯಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತಿತ್ತು. 2017ರಲ್ಲಿ ಒಂದು ಪ್ರಕರಣ ನಡೆದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv