ಮಡಿಕೇರಿ: ವಿದ್ಯಾರ್ಥಿನಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿಯಲ್ಲಿ ನಡೆದಿದೆ.
ಪಿಯುಸಿ ವಿದ್ಯಾರ್ಥಿನಿ ಪುಷ್ಪಾ (17) ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ತನ್ನ ಮನೆಯಲ್ಲಿ ಸಮವಸ್ತ್ರದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮನಕಲಕುವಂತಹ ಡೆತ್ ನೋಟ್ ಬರೆದಿಟ್ಟಿದ್ದಾಳೆ.
ಡೆತ್ ನೋಟಿನಲ್ಲಿ ಏನಿದೆ?
ನನ್ನ ಸಾವಿಗೆ ಯಾರು ಕಾರಣ ಅಂತ ನಾನು ಹೇಳುವುದಿಲ್ಲ. ಅವರ ಮೇಲೆ ನಾನೇ ಸೇಡು ತೀರಿಸಿಕೊಳ್ಳುತ್ತೇನೆ. ನನ್ನ ಬದುಕಿನಲ್ಲಿ ನನಗೆ ಯಾವ ಸಂತೋಷವೂ ಉಳಿದಿಲ್ಲ. ನನ್ನ ಜೀವನದಲ್ಲಿ ನನಗೆ ಬೇಕಾದವರು ಯಾರು ಇದ್ದಾರೆ ಅಂತ ನಾನು ಇನ್ನು ಬದುಕೋದು. 17 ವರ್ಷದಲ್ಲಿ 17 ಜನ್ಮವನ್ನೇ ಹುಟ್ಟಿ ಬಂದಾಗಿ ಆಗಿದೆ. ಈ ಜೀವನ ಸಾಕು, ನಾನು ನಿಮ್ಮನ್ನು ಬಿಟ್ಟು ಹೊಗುತ್ತಿದ್ದೀನಿ, ಗುಡ್ ಬೈ” ಎಂದು ನೋವಿನಿಂದ ಬರೆದಿದ್ದಾಳೆ.
ಯಾವಾಗಲೂ ಹೇಳುತ್ತಿದ್ದರಲ್ಲ ಸಾಯಿ ಸಾಯಿ ಅಂತ ಇವತ್ತು ಸಾಯುತ್ತಿದ್ದೀನಿ, ಸಂತೋಷವಾಗಿರಿ. ಇದು ಯಾರಿಗೆ ಹೇಳುತ್ತಿದ್ದೀನಿ ಅಂತ ಯಾರು ಯೋಚಿಸಬೇಡಿ. ಅವರಿಗೆ ಗೊತ್ತಿರುತ್ತದೆ. ನಾನು ಸಾಯುತ್ತಿದ್ದೇನೆ ನಿಮ್ಮ ಕಣ್ಣಲ್ಲಿ ಒಂದು ಹನಿ ನೀರು ಬಂದ್ರೆ ನಿಜವಾಗ್ಲೂ ನನ್ನ ಆತ್ಮಕ್ಕೆ ಶಾಂತಿ ಸಿಗಲ್ಲ. ನೆನಪಿರಲಿ ಸಂತೋಷವಾಗಿರಿ ಎಂದು ಬರೆದು ಕೊನೆಯಲ್ಲಿ ಐ ಲವ್ ಯು ಅಮ್ಮ, ಐ ಮಿಸ್ ಯು ಅಮ್ಮ ಎಂದು ಬರೆದಿದ್ದಾಳೆ.
ವಿರಾಜಪೇಟೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದು, ದೂರನ್ನು ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews