ಬೆಂಗಳೂರು: ಸಹಪಾಠಿಯಿಂದ ಕಿರುಕುಳಕ್ಕೆ ಒಳಗಾದ ವಿದ್ಯಾರ್ಥಿನಿ ಮನನೊಂದು ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಕೆ.ಆರ್ ಪುರದ ಅಕ್ಷಯ ನಗರದಲ್ಲಿ ನಡೆದಿದೆ.
ಕೆ.ಆರ್. ಪುರದ ಅಕ್ಷಯನಗರದ ಶ್ರೀನಿವಾಸ್ ಮೂರ್ತಿ ಅವರ ಸಾಕು ಮಗಳು ಲೀನಾ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಈಕೆಗೆ ಮಂಜುನಾಥ್ ಎಂಬಾತ ತನ್ನನ್ನು ಪ್ರೀತಿ ಮಾಡುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ.
ಲೀನಾ ಸದ್ಯ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಲೀನಾ 10ನೇ ತರಗತಿಯಲ್ಲಿ ಓದುತ್ತಿದ್ದಾಗ ಆರೋಪಿ ಆಕೆಗೆ ಸಹಪಾಠಿ ಆಗಿದ್ದನು. ಹೀಗಾಗಿ ತನ್ನನ್ನು ಪ್ರೀತಿಸುವಂತೆ ಲೀನಾಳಿಗೆ ಒತ್ತಾಯಿಸುತ್ತಿದ್ದನು. ಪ್ರತಿನಿತ್ಯವೂ ಕಾಲೇಜು, ಮನೆಯ ಕಡೆಗೆ ಹೋಗಿ ಪ್ರೀತಿಸುವಂತೆ ಪಿಡಿಸುತ್ತಿದ್ದನು. ಇದಕ್ಕೆ ಒಪ್ಪಿಕೊಳ್ಳದ ಲೀನಾ ಮೇಲೆ ಹಲ್ಲೆ ಮಾಡಿದ್ದನು. ಈ ವಿಚಾರವನ್ನು ತಂದೆ ಶ್ರೀನಿವಾಸ್ ಮೂರ್ತಿ ಮುಂದೆ ಲೀನಾ ಹೇಳಿಕೊಂಡಿದ್ದಳು.
ಶ್ರೀನಿವಾಸ್ ಮೂರ್ತಿ ಅವರು ಆರೋಪಿಗೆ ಎಚ್ಚರಿಕೆ ಕೊಟ್ಟಿದ್ದರು. ಆದರೆ ಯಾರ ಎಚ್ಚರಿಕೆಗೂ ಜಗ್ಗದ ಆರೋಪಿ ತನ್ನ ಹಳೇ ಚಾಳಿ ಮುಂದುವರಿಸಿದ್ದನು. ಆತನ ಕಾಟದಿಂದ ಬೇಸತ್ತ ಲೀನಾ ಮನೆಯಲ್ಲಿ ಮಂಗಳವಾರ ನೇಣಿಗೆ ಶರಣಾಗಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.
ಘಟನೆ ಸಂಬಂಧ ಲೀನಾ ಪೋಷಕರು ರಾಮಮೂರ್ತಿ ನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಾಗಲ್ ಪ್ರೇಮಿ ತಲೆ ಮಾರಿಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.