ಶಿವಮೊಗ್ಗ ಜಿಲ್ಲೆಯ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ರಾಜ್ಯ ಸರ್ಕಾರ ಶರಾವತಿ ಪಂಪ್ಡ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಗೆ ಮುಂದಾಗಿದೆ. ಈ ಯೋಜನೆಯಿಂದ ರಾಜ್ಯ ಸರ್ಕಾರವು 2000 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿಯನ್ನು ಹೊಂದಿದೆ. ಇದಕ್ಕಾಗಿ ಈಗಾಗಲೇ ಟೆಂಡರ್ ಸಹ ಕರೆದು ಕೆಲಸ ನಿರ್ವಹಿಸಲು ಗುತ್ತಿಗೆ ನೀಡಿದೆ. ಇದರ ಬೆನ್ನಲ್ಲೇ ಈ ಯೋಜನೆಗೆ ಸ್ಥಳೀಯ ಹಾಗೂ ಪರಿಸರವಾದಿಗಳ ತೀವ್ರ ವಿರೋಧ ವ್ಯಕ್ತವಾಗಿದೆ. ಏನಿದು ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆ? ಇದರದ ಉಪಯೋಗ, ಸಾಧಕ, ಭಾದಕಗಳೇನು? ಸ್ಥಳೀಯ ಹಾಗೂ ಪರಿಸರವಾದಿಗಳ ವಿರೋಧ ಏಕೆ ಎಂಬ ಮಾಹಿತಿ ಇಲ್ಲಿದೆ.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಎಂದರೇನು?
ಶರಾವತಿ ನದಿಗೆ ಲಿಂಗನಮಕ್ಕಿಯಲ್ಲಿ ಅಣೆಕಟ್ಟು ನಿರ್ಮಿಸಲಾಗಿದೆ. ಇಲ್ಲಿ ನಾಲ್ಕು ವಿದ್ಯುತ್ಗಾರದಿಂದ 1469.20 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈ ನೀರು ಗೇರುಸೊಪ್ಪ ಅಣೆಕಟ್ಟೆಗೆ ಹೋಗುತ್ತದೆ. ಅಲ್ಲಿಯೂ 240 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಿ, ನಂತರದಲ್ಲಿ ಶರಾವತಿ ನದಿ ಮುಂದೆ ಸಾಗಿ, ಉತ್ತರ ಕನ್ನಡ ಜಿಲ್ಲೆಯ ಹೂನ್ನಾವರದ ಮೂಲಕ ಅರಬ್ಬಿ ಸಮುದ್ರ ಸೇರುತ್ತದೆ.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಲ್ಲಿ ಗೇರುಸೊಪ್ಪ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರನ್ನು ಮತ್ತೆ ಗುರುತ್ವಾಕರ್ಷಣೆಗೆ ವಿರುದ್ಧವಾಗಿ ವಿದ್ಯುತ್ ಬಳಸಿಕೊಂಡು ತಲಕಳಲೆ ಅಣೆಕಟ್ಟೆಗೆ ಎತ್ತಿ ತರಲಾಗುತ್ತದೆ. ಹಾಗೇ ಎತ್ತಿ ತಂದ ನೀರಿನಿಂದ ಮತ್ತೆ 2000 ಮೆಗಾ ವ್ಯಾಟ್. ವಿದ್ಯುತ್ತನ್ನು ಉತ್ಪಾದಿಸುವುದು ಯೋಜನೆಯ ಉದ್ದೇಶವಾಗಿದೆ.
ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆ ಆಳ -ಅಗಲ
ಯೋಜನಾ ವೆಚ್ಚ- 10,500 ಕೋಟಿ ರೂ. ಮೊತ್ತದ ಯೋಜನೆ
ಯೋಜನೆಗೆ ಒಳಗೊಂಡ ಜಿಲ್ಲೆ – ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆ
ಯೋಜನೆಗೆ ಒಳಗೊಂಡ ಪ್ರದೇಶಗಳು – ಅರಣ್ಯ ಭೂಮಿ – 19.982 ಹೆಕ್ಟೇರ್ (ಭೂಮಿಯ ಒಳಗೆ), 34.173 ಹೆಕ್ಟೇರ್ (ಭೂಮಿಯ ಮೇಲ್ಮೈ) ಒಟ್ಟು ಅರಣ್ಯ ಭೂಮಿ- 54.155 ಹೆಕ್ಟೇರ್
ಯೋಜನೆಗೆ ಒಳಗೊಂಡ ಅರಣ್ಯೇತರ ಭೂಮಿ- 0.1 ಹೆಕ್ಟೇರ್ (ಭೂಮಿಯ ಒಳಗೆ) , 88.508 ಹೆಕ್ಟೇರ್ (ಭೂಮಿಯ ಹೊರಗೆ) .ಒಟ್ಟು- 88.608 ಹೆಕ್ಟೇರ್ ಭೂಮಿ. ಒಟ್ಟು ಭೂಮಿ- 20.082 ಹೆಕ್ಟೇರ್ (ಭೂಮಿಯ ಒಳಗೆ) 122.681 (ಭೂಮಿಯ ಹೊರಗೆ) ಒಟ್ಟು ಭೂಮಿ 142.763 ಹೆಕ್ಟೇರ್
ಜಿಲ್ಲಾವಾರು ಭೂ ಸ್ವಾಧೀನಗೊಳ್ಳುವ ಭೂ ಪ್ರದೇಶಗಳು
ಶಿವಮೊಗ್ಗ ಜಿಲ್ಲೆ – ಸಾಗರ ತಾಲೂಕಿನ ತಳಕಳಲೆ ಗ್ರಾಮ – 3.63 ಹೆಕ್ಟೇರ್ – ಸರ್ಕಾರಿ ಶಾಲೆ-1, ಮನೆಗಳು-8, ದನದ ಕೊಟ್ಟಿಗೆ-7
ಉತ್ತರ ಕನ್ನಡ ಜಿಲ್ಲೆ- ಹೊನ್ನಾವರ ತಾಲೂಕಿನ ಗೇರುಸೊಪ್ಪ, ನಗರಬಸ್ತಿಕೇರಿ, ಬೆಗುಡಿ ಗ್ರಾಮಗಳು
ಗೇರುಸೊಪ್ಪ, ನಗರಬಸ್ತಿಕೇರಿ- 0.404 ಹೆಕ್ಟೇರ್ ಭೂ ಭಾಗ- ಮನೆಗಳು-4, ಮಳಿಗೆ-3, ದೇವಾಲಯ ತಡೆಗೋಡೆ-2
ಬೆಗುಡಿಗ್ರಾಮ- 20.497 ಹೆಕ್ಟೇರ್ – ಸರ್ಕಾರಿ ಅಂಗನವಾಡಿ-01, ಮನೆಗಳು-06, ದನದ ಕೊಟ್ಟಿಗೆ-04, ಬಾವಿ-01, ದೇವಾಲಯ-01
ಒಟ್ಟು ಎರಡು ಜಿಲ್ಲೆಗಳು ಸೇರಿ -24.31 ಹೆಕ್ಟೇರ್ ಭೂ ಭಾಗ
ಎಷ್ಟು ಮರಗಳು ಕಟಾವಾಗಲಿದೆ?
ಶಿವಮೊಗ್ಗ ಜಿಲ್ಲೆಯ ಸಾಗರ ವಿಭಾಗ- 745 ಮರಗಳು
ಶಿವಮೊಗ್ಗ ವನ್ಯಜೀವಿ ವಲಯ – 1518 ಮರಗಳು
ಉತ್ತರ ಕನ್ನಡ ಹೊನ್ನಾವರ ವಿಭಾಗ- 13756
ಒಟ್ಟು ಮರಗಳ ಕಟಾವು- 16,041 ಮರಗಳು
ಯೋಜನೆಗೆ ತಾತ್ಕಾಲಿಕ ಅನುಮತಿ
ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಯನ್ನು ಕಾರ್ಯಗತಗೊಳಿಸಲು ಡಿಸೆಂಬರ್ 2023ರಲ್ಲಿ ನೀಡಲಾದ ಹೊಸ TOR ಪ್ರಕಾರ EIA ಅಧ್ಯಯನಗಳು ಪೂರ್ಣಗೊಂಡಿದೆ. ಇದರ ವರದಿ ಅಂತಿಮ ಗೊಳಿಸಲಾಗಿದೆ. ಪರಿಸರ ಅನುಮತಿಯನ್ನು (EC) MoEF & CC ಯಿಂದಪಡೆಯ ಬೇಕಾಗಿದ್ದು ಬಾಕಿ ಇದೆ. 26/06/2025 ರಂದು ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ (NBWL) ಸ್ಥಾಯಿ ಸಮಿತಿಯ ಸಭೆಯಲ್ಲಿ ಈ ಯೋಜನೆಗೆ ತಾತ್ಕಾಲಿಕ (In-principle) ಅನುಮತಿ ನೀಡಲಾಗಿದೆ.
ಯೋಜನೆಯನ್ನು ಶರಾವತಿ ಕಣಿವೆ ಪ್ರದೇಶದಲ್ಲಿ ಸ್ಥಾಪಿಸಲಾಗಿದ್ದು , ಯೋಜನೆಯ ಕೆಳಮಟ್ಟದಲ್ಲಿ ಗೇರುಸೊಪ್ಪ ಹಾಗೂ ಮೇಲ್ಪಟ್ಟದಲ್ಲಿ ತಳಕಳಲೆ ಜಲಾಶಯಗಳು ಅಸ್ತಿತ್ವದಲ್ಲಿ ಇದ್ದು , ಎರಡೂ ಜಲಾಶಯವನ್ನು ಏಳು ಕಿಲೋಮೀಟರ್ ಸುರಂಗ ಮಾರ್ಗದ ಮೂಲಕ ಜೋಡಿಸಿ ನೀರು ಹರಿಬಿಟ್ಟು ವಿದ್ಯುತ್ ಉತ್ಪಾದನೆಗೆ ಕಾರ್ಯನಿರ್ವಹಿಸಲಾಗುವುದು.
ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಗೆ ವಿರೋಧ ಏಕೆ?
ಈ ಯೋಜನೆ ಪಶ್ಚಿಮ ಘಟ್ಟ ವಲಯದಲ್ಲಿ ಬರುತ್ತದೆ. ಹೆಚ್ಚುವರಿಯಾಗಿ ಅರಣ್ಯ ಭೂಮಿ ಯನ್ನು ಪಡೆಯಲಾಗುತ್ತದೆ. ಪರಿಸರ ಸೂಕ್ಷ್ಮವಲಯವಾಗಿರುವ ಈ ಪ್ರದೇಶ ಅತ್ಯಂತ ಹಳೆಯದಾದ ಮತ್ತು ಇತರೆ ಭಾಗದಲ್ಲಿ ಸಿಗದಂತಹ ಪ್ರಭೇದದ ಸಸ್ಯಗಳು ಇಲ್ಲಿವೆ. ಇದಲ್ಲದೇ ಇದು ಅವನತಿಯಲ್ಲಿ ಇರುವ ಸಿಂಗಳೀಕಗಳ ಆವಾಸ ಸ್ಥಾನ ಕೂಡ. ಇನ್ನು ಈ ಭಾಗದಲ್ಲಿ ಹಲವು ಅಭಿವೃದ್ಧಿ ಕಾರ್ಯದಿಂದ ಭೂಕುಸಿತ ದುರಂತಗಳು ನಡೆದಿದೆ. ಇದಲ್ಲದೇ ಅಭಿವೃದ್ಧಿ ಕಾರ್ಯದಿಂದ ನದಿಯ ದಿಕ್ಕು ಸಹ ಬದಲಾಗಿದೆ. ಹಲವು ಜೀವ ವೈವಿದ್ಯ ಹೊಂದಿರುವ ಈ ಪ್ರದೇಶದಲ್ಲಿ ಅಭಿವೃದ್ಧಿಗೆ ಮುಂದಾದರೇ ಜೀವ ಸಂಕುಲಕ್ಕೆ ಆಪತ್ತು ಎದುರಾಗಲಿದೆ.
ಈಗಾಗಲೇ ಶರಾವತಿ ಜಲವಿದ್ಯುತ್ ಯೋಜನೆಯಿಂದ ಸಾವಿರಾರು ಜನ ತಮ್ಮ ನೆಲ ಕಳೆದುಕೊಂಡು ಸೂಕ್ತ ಪರಿಹಾರ ಸಹ ದೊರಕುವುದಿರಲಿ ,ಉದ್ಯೋಗದ ಭರವಸೆಯೂ ಸಮರ್ಪಕವಾಗಿ ಈಡೇರಿಲ್ಲ. ಇನ್ನೂ ಸುರಂಗ ಮಾರ್ಗ ಮಾಡುವುದರಿಂದ ಭೂಕುಸಿತದ ಆತಂಕವಿದ್ದು ಪರಿಸರಕ್ಕೆ ದೊಡ್ಡ ಹಾನಿಯಾಗುವ ಸಾಧ್ಯತೆಗಳು ಇವೆ. ಹೀಗೆ ಹತ್ತು ಹಲವು ಕಾರಣಗಳು ಈ ಯೋಜನೆ ಗೆ ಪರಿಸರವಾದಿಗಳು ಹಾಗೂ ಸ್ಥಳೀಯ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.
ಸಧ್ಯಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆಯನ್ನು ಅನುಷ್ಟಾನ ಮಾಡಲಾಗಿದ್ದು, ಈ ಯೋಜನೆಗೆ ಮೊದಲ ಹೆಜ್ಜೆಯಾಗಿ ಹಣ ಸಹ ಬಿಡುಗಡೆಯಾಗಿದ್ದು , ಸಾರ್ವಜನಿಕ ಅಹವಾಲು ಸ್ವೀಕಾರದ ನಂತರ ಅನುಷ್ಟಾನಗೊಳ್ಳುವ ಸಾಧ್ಯತೆಗಳಿವೆ.
ಕತ್ತಲೆ ಕಾನು!
ಇನ್ನೂ ಹೊನ್ನಾವರ ತಾಲೂಕಿನ ಸೂರ್ಯನ ಬೆಳಕನ್ನೇ ಕಾಣದ ನೆರಳನ್ನೇ ಹೀರಿ ಬದುಕುವ ಕತ್ತಲೆ ಕಾನು ಎಂದೇ ಕರೆಯಲ್ಪಡುವ ಕಾಡು ಈ ಯೋಜನೆಯಿಂದ ಅಪಾಯಕ್ಕೆ ಸಿಲುಕಲಿದೆ. ಮನುಷ್ಯನ ಉಗಮಕ್ಕೂ ಮೊದಲೇ ಇಲ್ಲಿ ಅಲ್ಗೆಗಳು, ಸಸ್ಯಗಳು ಇಮನ್ನೂ ಇಲ್ಲಿವೆ. ಮನುಷ್ಯ ಕಾಲೇ ಇಡದ ಜಾಗಗಳು ಸಹ ಇಲ್ಲಿವೆ. ಇಂತಹ ಸ್ಥಳಗಳು ಮತ್ತೆ ನಾಶವಾದರೆ ಮತ್ತೆ ಸೃಷ್ಟಿಯಾಗುವುದಿಲ್ಲ. ಇನ್ನೂ ಸಿಂಹದ ಬಾಲದ ಅಪರೂಪದ ಸಿಂಗಳೀಕಗಳು ಇಲ್ಲಿದ್ದು, ಅವುಗಳ ಆವಾಸ ಸ್ಥಾನ ನಾಶದಿಂದ ಅವನತಿಯಾಗುವ ಭೀತಿ ಇದೆ.
10,000 ಪತ್ರದಲ್ಲಿ ಒಂದೇ ಒಂದು ಪತ್ರ ಯೋಜನೆ ಪರವಾಗಿಲ್ಲ!
ಇನ್ನೂ ಈ ಯೋಜನೆಯ ಪರ ವಿರೋಧದ ಬಗ್ಗೆ ಸಲ್ಲಿಸಲು ಅಹವಾಲು ಸಭೆಯಲ್ಲಿ ಸಲ್ಲಿಕೆಯಾದ ಉತ್ತರ ಕನ್ನಡ ಜಿಲ್ಲೆಯ 6000 ಹಾಗೂ ಶಿವಮೊಗ್ಗ ಜಿಲ್ಲೆಯ 4000 ಅರ್ಜಿಗಳಲ್ಲಿ ಯಾವ ಅರ್ಜಿಯೂ ಯೋಜನೆಯ ಪರವಾಗಿಲ್ಲ. ಹೀಗಿದ್ದರೂ ಜನರ ವಿರೋಧದ ನಡುವೆ ಈ ಯೋಜನೆಯ ಸಗತ್ಯವೇನು ಎಂಬುದು ಸಧ್ಯದ ಪ್ರಶ್ನೆ.
ವಿವಾದದ ಬೆನ್ನಲ್ಲೇ ಕೆಪಿಸಿಎಲ್ ಸ್ಪಷ್ಟೀಕರಣ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಪರಿಸರವಾದಿಗಳು ಹಾಗೂ ಸ್ಥಳೀಯರು ಆಂತಕಕ್ಕೆ ಒಳಗಾಗುವುದು ಬೇಡ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಾಗರ ತಾಲೂಕಿನ ತಳಕಳಲೆ ಡ್ಯಾಂ ಹಾಗೂ ಉತ್ತರ ಕನ್ನಡದ ಗೇರುಸೊಪ್ಪ ಜಲಾಶಯಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಹೊಸ ಅಣೆಕಟ್ಟು ನಿರ್ಮಾಣ ಮಾಡುತ್ತಿಲ್ಲ. ಇದರಿಂದ ಯಾವುದೇ ಪ್ರದೇಶ ಮುಳುಗಡೆ ಆಗುವುದಿಲ್ಲ ಎಂದು ಕೆಪಿಸಿಎಲ್ ಸ್ಪಷ್ಟೀಕರಣ ನೀಡಿದೆ.
ಈ ಯೋಜನೆಗೆ ಕೇಂದ್ರ ವಿದ್ಯುತ್ ಪ್ರಾಧಿಕಾರ ಅನುಮತಿ ನೀಡಿದೆ. ಪ್ರಾಧಿಕಾರವು ಅನುಮತಿ ನೀಡುವ ಮೊದಲು 13 ನಿರ್ದೇಶನಾಲಯಗಳಿಂದ ಅಭಿಪ್ರಾಯ ಸಂಗ್ರಹಣೆ ಮಾಡಿದೆ. ಈ ಯೋಜನೆಯಿಂದ ಭೂ ಕುಸಿತ, ಭೂಕಂಪನಗಳು ಉಂಟಾಗುವುದಿಲ್ಲ. ಇಲ್ಲಿನ ಜೀವ ವೈವಿಧ್ಯತೆಗೆ ಸಮಸ್ಯೆ ಉಂಟಾಗುವುದಿಲ್ಲ. ಈ ಯೋಜನೆಗೆ ರಾಜ್ಯದ ವನ್ಯಜೀವಿ ಮಂಡಳಿ ಮತ್ತು ಕೇಂದ್ರದ ವನ್ಯಜೀವಿ ಮಂಡಳಿಗಳು ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿವೆ. ನಿರ್ಮಾಣವಾಗುವ ಸುರಂಗದ ಒಳಗಡೆ, ತಡೆಗೋಡೆ ನಿರ್ಮಾಣ ಮಾಡುವುದರಿಂದ ಭೂಕುಸಿತ ಉಂಟಾಗುವುದಿಲ್ಲ.
ಕೇವಲ 54.155 ಹೆಕ್ಟೇರ್ ವ್ಯಾಪ್ತಿಯ ಅರಣ್ಯ ಪ್ರದೇಶ ಮತ್ತು 24.31 ಹೆಕ್ಟೇರ್ ಖಾಸಗಿ ಭೂಮಿ ಬಳಸಿ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಶೇಖರಣೆ ಮಾಡುವ ಈ ಯೋಜನೆಯಿಂದ ಯಾವುದೇ ರೀತಿಯಲ್ಲಿ ಜನರು, ವನ್ಯಜೀವಿಗಳು ಮತ್ತು ಅರಣ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿಕೊಂಡಿದೆ.