ಚಿಕ್ಕೋಡಿ: ಬಹಳಷ್ಟು ಜನ ದೇವರು ನಮಗೆ ಮಕ್ಕಳನ್ನು ಕೊಟ್ಟಿಲ್ಲ ಎಂಬ ಕೊರಗಿನಲ್ಲಿ ಇರುತ್ತಾರೆ. ಆದರೆ ಮಕ್ಕಳನ್ನು ಕೊಟ್ಟು ಅದ್ರರಲ್ಲೂ ನಡೆಯಲು ಅಶಕ್ತರಾದ ಮಕ್ಕಳನ್ನು ಕೊಟ್ಟರೇ ಅಂಥವರ ಪರಿಸ್ಥಿತಿ ಏನಾಗಬಹುದು. ಅದು ಒಂದು ಬಡಕುಟುಂಬದವರಿಗೆ ಇಂಥ ಪರಿಸ್ಥಿತಿ ಬಂದೊದಗಿದರೆ ಆ ದೇವರೇ ಗತಿ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಬಡ ಕುಟುಂಬಕ್ಕೆ ಇದೀಗ ಈ ಪರಿಸ್ಥಿತಿ ಎದುರಾಗಿದೆ. ಕುಟುಂಬದ 11 ವರ್ಷದ ಓಂಕಾರ ಮತ್ತು 09 ವರ್ಷದ ಚೇತನ ಕರಾಳೆ ಎಂಬ ಇಬ್ಬರು ಮಕ್ಕಳು ತಮ್ಮ ಕಾಲಿನ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಹೀಗಾಗಿ ತಾಯಿ ಶಾರದಾ ಕರಾಳೆ ಬೇರೆಯವರ ಮನೆಗೆ ಹೋಗಿ ಮನೆಗೆಲಸ ಮಾಡಿದರೆ ಮಾತ್ರ ಇವರ ಹೊಟ್ಟೆ ತುಂಬುವುದು. ಇಲ್ಲವಾದರೆ ಉಪವಾಸವೇ ಗತಿ. ತಾಯಿ ಇತ್ತ ಮಕ್ಕಳನ್ನು ನೋಡಬೇಕು, ಕೆಲಸಕ್ಕೂ ಹೋಗಬೇಕು. ತಾಯಿ ಪರಿಸ್ಥಿತಿ ಹೀಗಿದ್ದರೇ ತಂದೆ ತೀರಿ ಹೋಗಿ 12 ವರ್ಷಗಳೇ ಕಳೆದಿವೆ. ಇದರಿಂದ ಈ ಕುಟುಂಬದ ಪರಿಸ್ಥಿತಿ ಮತ್ತಷ್ಟು ದುಸ್ಥರವಾಗಿದೆ.
ಈ ಇಬ್ಬರು ಮಕ್ಕಳಿಗೆ ಕಲಿಯಬೇಕೆಂಬ ಆಸಕ್ತಿ ಇದೆ. ಆದ್ರೆ ವ್ಯವಸ್ಥೆ ಮಾಡುವವರು ಯಾರೂ ಇಲ್ಲದ ಕಾರಣ ಮನೆಯಲ್ಲಿಯೇ ಕುಳಿತುಕೊಳ್ಳುವ ಅನಿವಾರ್ಯತೆ. ಸ್ವಂತ ಸೂರು ಇಲ್ಲ. ಪುರಸಭೆಯ ಜಾಗದಲ್ಲಿ ನಿರ್ಮಾಣವಾಗಿರುವ ಮನೆಯಲ್ಲಿ ಇವರ ವಾಸ. ಯಾವಾಗ ಎತ್ತಂಗಡಿ ಆಗಬಹುದು ಎಂಬ ಅತಂತ್ರ ಜೀವನ. ಹೀಗಾಗಿ ನನ್ನ ಮಕ್ಕಳಿಗೆ ಆರ್ಥಿಕ ಸಹಾಯದ ಅವಶ್ಯಕತೆಯಿದೆ ಎನ್ನುತ್ತಾರೆ ತಾಯಿ ಶಾರದಾ.
ಈ ಇಬ್ಬರು ಮಕ್ಕಳಲ್ಲಿ ಚಿಕ್ಕ ಮಗ ಚೇತನ 3 ವರ್ಷಗಳ ಹಿಂದೆ ಚೆನ್ನಾಗಿಯೇ ಓಡಾಡಿಕೊಂಡಿದ್ದ. ಇನ್ನೇನು ಒಬ್ಬ ಮಗನಾದರೂ ನನಗೆ ಆಸರೆಯಾಗುತ್ತಾನೆ, ತಂದೆಯಿಲ್ಲದ ಮನೆಗೆ ಜೀವನ ಕಟ್ಟಿಕೊಡುತ್ತಾನೆ ಎಂದೆಲ್ಲ ಕನಸ್ಸು ಕಂಡಿದ್ದ ತಾಯಿಗೆ ಆ ದೇವರು ದೊಡ್ಡ ಆಘಾತವನ್ನೇ ನೀಡಿದ. ಚೆನ್ನಾಗಿಯೇ ಓಡಾಡಿಕೊಂಡಿದ್ದ ಮಗನ ಕಾಲಿನ ಶಕ್ತಿಯನ್ನೇ ಕಸಿದುಕೊಂಡಿದ್ದಾನೆ. ಈಗ ಎರಡೂ ಮಕ್ಕಳು ಮನೆಯಲ್ಲಿ ಕುಳಿತುಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಕುಟುಂಬದ ಪರಿಸ್ಥಿತಿ ಕಂಡ ಕೆಲವು ಸಾಮಾಜಿಕ ಕಾರ್ಯಕರ್ತರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮವನ್ನು ಕಂಡು ಈ ಕುಟುಂಬಕ್ಕೂ ಪಬ್ಲಿಕ್ ಟಿವಿಯಿಂದಾದರೂ ಸಹಾಯ ದೊರಕಲಿ. ಈ ಕುಟುಂಬಕ್ಕೆ ಸಹಾಯವಾಗಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಜೊತೆಗೆ ವಿದ್ಯಾಭ್ಯಾಸ ಸಿಗಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಕಷ್ಟ ಎಂದು ಕಣ್ಣೀರಿನಲ್ಲಿ ಕೈ ತೊಳಿತಾ ಇರುವ ಈ ಕುಟುಂಬಕ್ಕೆ ದೇವರು ಮಾತ್ರ ಕರುಣೆ ತೋರಿಲ್ಲ. ಹೀಗಾಗಿ ಈ ಕುಟುಂಬಕ್ಕೂ ಆರ್ಥಿಕ ಮತ್ತು ಸೂಕ್ತ ಚಿಕಿತ್ಸೆಯ ಅವಶ್ಯಕತೆಯಿದ್ದು ಆಸಕ್ತರು ಈ ಕುಟುಂಬಕ್ಕೆ ಆಸರೆಯಾಗಬೇಕು ಎಂಬುದೇ ಪಬ್ಲಿಕ್ ಟಿವಿ ಆಶಯ.
https://www.youtube.com/watch?v=dZk-eeTQvT0