-ಮಧ್ಯ ವಯಸ್ಕರೆಲ್ಲಾ ಮುದುಕರಾಗಿ ಹಾಸಿಗೆ ಹಿಡಿದ ಗ್ರಾಮದ ಕಥೆ
ರಾಯಚೂರು: ಇದು ರಾಯಚೂರು ತಾಲೂಕಿನ ನಾಗಲಾಪುರ ಗ್ರಾಮ. ಸುಮಾರು 100 ಮನೆಗಳಿರುವ ಗ್ರಾಮದಲ್ಲಿ 500 ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಇದರಲ್ಲಿ 250 ಕ್ಕೂ ಹೆಚ್ಚು ಜನ ಅನಾರೋಗ್ಯದಿಂದ ಬಳಲುತ್ತಿದ್ದು ಇಪ್ಪತ್ತು ಜನ ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದಾರೆ. ಕೆಲವರು ಕೋಲು, ವಾಕಿಂಗ್ ಸ್ಟಿಕ್ ಸಹಾಯದಿಂದ ಓಡಾಡುತ್ತಿದ್ದಾರೆ. ಬಹಳ ಜನ ನಿತ್ಯ ಕೈಕಾಲು ನೋವು ಅನುಭವಿಸುತ್ತಿದ್ದಾರೆ. ಇದೆಕ್ಕೆಲ್ಲಾ ಕಾರಣ ಕುಡಿಯುವ ನೀರು.
ಗ್ರಾಮದಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್, ನೈಟ್ರೇಟ್, ಸಲ್ಫೆಟ್ ಅಂಶ ಅತಿಯಾಗಿ ಇರುವುದರಿಂದ ಇಲ್ಲಿನ ಗ್ರಾಮಸ್ಥರು ಅನಾರೋಗ್ಯಕ್ಕೆ ಪೀಡಿತರಾಗಿದ್ದಾರೆ. ಗ್ರಾಮದಲ್ಲಿ ಹೆಸರಿಗೆ ಕೆರೆಯಿದ್ದರೂ ನೀರಿಲ್ಲ, ಕುಡಿಯುವ ನೀರಿನ ಟ್ಯಾಂಕ್ ಇದ್ದರೂ ನೀರಿನ ಮೂಲವೇ ಇಲ್ಲದ ಕಾರಣ ಪಕ್ಕದ ಗ್ರಾಮ ನಾಗಲಾಪುರ ಕ್ಯಾಂಪ್ನಿಂದ ಕೊಳವೆಬಾವಿ ನೀರನ್ನ ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತಿದೆ. ಸತತ 15 ವರ್ಷಗಳಿಂದ ಇದೇ ನೀರನ್ನು ಕುಡಿಯುತ್ತಿರುವ ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಒಂದು ಲೀಟರ್ ನೀರಿಗೆ 200 ರಿಂದ 400 ಮಿಲಿಗ್ರಾಂ ಇರಬೇಕಾದ ಸಲ್ಫೇಟ್ 700 ಮಿಲಿಗ್ರಾಂ ಇದೆ. 1 ರಿಂದ 1.5 ಮಿಲಿಗ್ರಾಂ ಇರಬೇಕಾದ ಫ್ಲೋರೈಡ್ 2.01 ಮಿಲಿಗ್ರಾಂ ಇದೆ. 45 ಮಿಲಿಗ್ರಾಂ ಇರಬೇಕಾದ ನೈಟ್ರೇಟ್ 61.72 ಮಿಲಿಗ್ರಾಂ ಇದೆ. ಹೀಗಾಗಿ ಇಲ್ಲಿನ ಜನರ ಮೇಲೆ ಬೋರ್ವೆಲ್ ನೀರು ದುಷ್ಪರಿಣಾಮ ಬೀರಿದೆ. ಹಾಸಿಗೆ ಹಿಡಿದವರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಮಧ್ಯವಯಸ್ಕರೆಲ್ಲಾ ಮುದುಕರಾಗಿ ಹಾಸಿಗೆ ಹಿಡಿಯುತ್ತಿದ್ದು, ಎಷ್ಟೇ ಚಿಕಿತ್ಸೆ ಪಡೆದರೂ ಆರೋಗ್ಯದಲ್ಲಿ ಚೇತರಿಕೆ ಆಗುತ್ತಿಲ್ಲ. ಸರ್ಕಾರ ಮಾತ್ರ ಇವರ ವೇದನೆಗೆ ಸ್ಪಂದಿಸುತ್ತಿಲ್ಲ. ಶುದ್ಧ ಕುಡಿಯುವ ನೀರಿಗೆ ವ್ಯವಸ್ಥೆ ಮಾಡುವ ಮೂಲಕ ನಮ್ಮ ಬಾಳಿಗೆ ಬೆಳಕಾಗಿ ಎಂದು ಇಲ್ಲಿನ ಜನ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.
https://www.youtube.com/watch?v=SMvi9I6Uqzw
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv