ರಾಮನಗರ: ಓಡಾಡಲು ಕೂರಲು ಕಷ್ಟ ಪಡುತ್ತಾ, ಹಾಸಿಗೆ ಹಿಡಿದಿರುವ ಮಗನಿಗೆ ಚಿಕಿತ್ಸೆ ಹಾಗೂ ಮತ್ತೊಬ್ಬ ಮಗನಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಿರುವ ತಾಯಿಗೆ ನೆರವು ಬೇಕಿದೆ.
ಕನಕಪುರ ತಾಲೂಕಿನ ರಾಚಯ್ಯನದೊಡ್ಡಿ ಗ್ರಾಮದ 16 ವರ್ಷದ ವಿಶ್ವನಾಯ್ಕ ಕ್ಯಾನ್ಸರ್ ಮಹಾಮಾರಿಯಿಂದ ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾನೆ. ಆತನ ತಂದೆ ಗೋವಿಂದನಾಯ್ಕ್ 10 ವರ್ಷಗಳ ಹಿಂದೆ ಮೃತಪಟ್ಟಿದ್ದು, ತಾಯಿ ಮಂಗಳಬಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ಗ್ರಾಮದಲ್ಲಿ ವಾಸವಾಗಿದ್ದಾರೆ.
ಓದಿನಲ್ಲಿ ಪ್ರತಿಭಾವಂತ ಬಾಲಕನಾಗಿದ್ದ ವಿಶ್ವನಾಯ್ಕ ಎಸ್ಎಸ್ಎಲ್ಸಿಯಲ್ಲಿ ಶೇ.77.44 ಅಂಕ ಗಳಿಸಿದ್ದು, ಮುಂದೆ ಓದಿ ತಾಯಿ ಮತ್ತು ತಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಬಯಸುತ್ತಿದ್ದ. ಆದರೆ ವಿಶ್ವನಾಯ್ಕನಿಗೆ ಕ್ಯಾನ್ಸರ್ ಕಾಣಿಸಿಕೊಂಡು ನಡೆಯಲು ಸಾಧ್ಯವಾಗದೇ ಹಾಸಿಗೆ ಹಿಡಿದಿದ್ದಾನೆ.
ಅಂದಹಾಗೇ ವಿಶ್ವನಾಯ್ಕ ಮೆಟಲ್ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಮಗನ ಚಿಕಿತ್ಸೆಗಾಗಿ ತಾಯಿ ಮಂಗಳಬಾಯಿ ಕೂಲಿ ಸಾಲ ಮಾಡಿ ಚಿಕಿತ್ಸೆ ನೀಡಿದ್ದಾರೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ವೈದ್ಯರು ಮಗ ಇರುವವರೆಗೆ ಚೆನ್ನಾಗಿ ನೋಡಿಕೊಳ್ಳಿ ಎಂದು ಕೈಚೆಲ್ಲಿದ್ದು, ವಿಶ್ವನಾಯ್ಕ ಜೀವನದ ಅಂತಿಮ ದಿನಗಳನ್ನ ಎಣಿಸುತ್ತಿದ್ದಾನೆ.
ಇತ್ತ ಮಗನ ಸ್ಥಿತಿ ಕಂಡ ಹೆತ್ತ ಕರುಳು ಹೆಣಗಾಟ ನಡೆಸಿದ್ದು, ಮಗನ ಚಿಕಿತ್ಸೆಗೆ ಮಾಡಿದ ಸಾಲ ಹಾಗೂ ಮತ್ತೊಬ್ಬ ಮಗನ ಭವಿಷ್ಯದ ಚಿಂತೆಯಿಂದ ದಿಕ್ಕು ತೋಚದೆ ಮಮ್ಮಲ ಮರುಗುತ್ತಿದ್ದಾರೆ. ಸದ್ಯ ಮಗ ವಿಶ್ವನಾಯ್ಕ ಇರುವಷ್ಟು ದಿನ ಚೆನ್ನಾಗಿ ನೋಡಿಕೊಳ್ಳಬೇಕು, ಮತ್ತೊಬ್ಬ ಮಗನನ್ನು ಓದಿಸಿ ಉತ್ತಮ ಜೀವನ ರೂಪಿಸುವ ಉದ್ದೇಶ ಹೊಂದಿದ್ದಾರೆ. ಇದಕ್ಕಾಗಿ ಸ್ವಾಭಿಮಾನ ಬದುಕು ಕಟ್ಟಿಕೊಳ್ಳಲು ಯಾರಾದ್ರೂ ದಾನಿಗಳು ಸಹಾಯ ಮಾಡಿ ಎಂದು ಬೆಳಕು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
https://www.youtube.com/watch?v=LjUzjvJsMC8
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com