ಸ್ಮಶಾನ, ಮಾನವನ ಜೀವನದ ಕಟ್ಟ ಕಡೆಯ ನಿಲ್ದಾಣ. ಸ್ಮಶಾನ ಎಂದರೆ ಭಯಪಡುವವರೇ ಹೆಚ್ಚು. ಅಂತಹವರ ಮಧ್ಯೆ ಇಲ್ಲೊಬ್ಬ ದಿಟ್ಟ ಮಹಿಳೆ 20 ವರ್ಷಗಳಿಂದ ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾವಿರಾರು ಅನಾಥ ಶವಗಳಿಗೆ ಮುಕ್ತಿ ಕೊಟ್ಟಿದ್ದಾರೆ. ಅನಾಥ ಶವಗಳ ಮುಕ್ತಿದಾತೆ ಎನಿಸಿಕೊಂಡಿದ್ದಾರೆ
ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬರಿಗೂ ಗೌರವಯುತ ಹಾಗೂ ಸಂಪ್ರದಾಯಬದ್ಧ ಅಂತ್ಯಸಂಸ್ಕಾರ ಸಿಗಬೇಕು ಎಂಬ ನಂಬಿಕೆ ಎಲ್ಲ ಧರ್ಮಗಳಲ್ಲೂ ಇದೆ. ಆದರೆ, ಅನಾಥ ಶವಗಳಿಗೆ ಮುಕ್ತಿ ಕರುಣಿಸೋರು ಯಾರು ಈ ಪ್ರಶ್ನೆಗೆ ಉತ್ತರ ಬೆಂಗಳೂರಿನ ನಿಸ್ವಾರ್ಥ ಸೇವಕಿ ಮಹದೇವಮ್ಮ (Mahadevamma). ಇದನ್ನೂ ಓದಿ: ಕ್ರಿಕೆಟ್ ಪಟು ದೀಪಿಕಾಗೆ ‘ನಾರಿ ನಾರಾಯಣಿ’ ಪ್ರಶಸ್ತಿ

ಈವರೆಗೂ ಸಾವಿರಾರು ಅನಾಥ ಶವಗಳಿಗೆ ಮುಕ್ತಿ ಕೊಟ್ಟಿದ್ದಾರೆ ಮಹದೇವಮ್ಮ. ತನ್ನ ಸ್ವಂತ ಖರ್ಚಿನಲ್ಲೇ ಗೌರವಯುತ ಸಂಸ್ಕಾರವನ್ನು ನೀಡುತ್ತಿದ್ದಾರೆ. ಮನೆಯ ಹೊಣೆ ಹೊರಲು 2006 ರಲ್ಲಿ ಪೀಣ್ಯ ವಿದ್ಯುತ್ ಚಿತಾಗಾರದಲ್ಲಿ ಆಪರೇಟರ್ ಅಗಿ ಕೆಲಸಕ್ಕೆ ಸೇರಿಕೊಂಡರು ಮಹದೇವಮ್ಮ. ಸ್ಮಶಾನಕ್ಕೆ ಅನಾಥ ಆಶ್ರಮ, ಪೋಲಿಸ್ ಇಲಾಖೆಯಿಂದ ಸಾಲು ಸಾಲು ಅನಾಥ ಶವಗಳು ಬರುತ್ತಿದ್ದವು. ಹಿಂದು ಮುಂದು ಅಂತಾ ಯಾರು ಇರಲಿಲ್ಲ. ಅಂಥ ಅನಾಥ ಶವಗಳಿಗೆ ತಮ್ಮ ಸ್ವಂತ ಖರ್ಚಿನಲ್ಲೇ ಗೌರವಯುತ ಅಂತ್ಯಸಂಸ್ಕಾರವನ್ನ ನೇರವೇರಿಸಿದ್ದಾರೆ. 20 ವರ್ಷಗಳ ಸೇವೆಯಲ್ಲಿ ಸಾವಿರಾರು ಅನಾಥ ಶವಗಳಿಗೆ ಮುಕ್ತಿ ನೀಡಿದ್ದಾರೆ. ಅನಾಥ ಶವಗಳ ಮುಕ್ತಿದಾತೆಗೆ ಮಹಿಳಾ ದಿನಾಚರಣೆಯ ಈ ವಿಶೇಷ ಸಂದರ್ಭದಲ್ಲಿ ನಾರಿ ನಾರಾಯಣಿ ಪ್ರಶಸ್ತಿ ನೀಡಿ ಗೌರವಿಸಲು ಪಬ್ಲಿಕ್ ಟಿವಿ ಹರ್ಷಿಸುತ್ತದೆ.
ಪಬ್ಲಿಕ್ ಟಿವಿ (Public TV) ಸಹಯೋಗದಲ್ಲಿ ಎಕ್ಸೆಲ್ ಅಕಾಡೆಮಿಕ್ಸ್ ಪ್ರಸ್ತುತ ಪಡಿಸುವ ‘ನಾರಿ ನಾರಾಯಣಿ-2026’ (Nari Narayani 2026 Award) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಲ್ಲಿ ನಡೆಯಿತು. ಸಾಧಕಿಯರಿಗೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (H.R.Ranganath) ಅವರು ಮಾತನಾಡಿ, ‘ನಾರಿ ನಾರಾಯಣಿ’ ರೂಪುಗೊಂಡ ಉದ್ದೇಶವೇ ನಮ್ಮ ಮಹಿಳೆಯರ ಯಶಸ್ಸನ್ನು ಗುರುತಿಸಬೇಕೆಂದು. ಐದು ವರ್ಷದಿಂದ ಬಹಳ ಅದ್ಭುತವಾಗಿ ನಡೆದುಕೊಂಡು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಹಿಳಾ ದಿನಾಚರಣೆ: ಪಬ್ಲಿಕ್ ಟಿವಿಯಿಂದ ಸಾಧಕಿಯರಿಗೆ ‘ನಾರಿ ನಾರಾಯಣಿ’ ಪ್ರಶಸ್ತಿ ಪ್ರದಾನ

