ಬೆಂಗಳೂರು: ರಾಮನಗರದ ವರದಿಗಾರ ಹನುಮಂತು ಅವರ ನಿಧನಕ್ಕೆ ಪಬ್ಲಿಕ್ ಟಿವಿಯಲ್ಲಿ ಇಂದು ಸಂತಾಪ ಸೂಚಕ ಸಭೆ ನಡೆಯಿತು.
ಯಶವಂತಪುರದಲ್ಲಿರುವ ಕಚೇರಿಯಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್, ಕಚೇರಿಯಲ್ಲಿ ದೀರ್ಘಕಾಲ ಒಡನಾಟ ಹೊಂದಿದ್ದ ವ್ಯಕ್ತಿ ಹನುಮಂತು ಕೆಲಸದಲ್ಲಿ ಶ್ರದ್ಧೆಯನ್ನು ಇಟ್ಟುಕೊಂಡಿದ್ದರು. ಕುಟುಂಬ ಹನುಮಂತು ಅವರನ್ನೇ ನೆಚ್ಚಿಕೊಂಡಿದೆ. ಕಚೇರಿಯಿಂದ ಅವರ ಕುಟುಂಬಕ್ಕೆ 10 ಲಕ್ಷ ರೂ. ಹಣವನ್ನು ನೀಡಲಾಗುವುದು ಎಂದು ತಿಳಿಸಿದರು. ಇದರ ಜೊತೆಗೆ ಪಬ್ಲಿಕ್ ಟಿವಿ ಸಿಬ್ಬಂದಿಯ ಒಂದು ದಿನದ ವೇತನವನ್ನು ಹನುಮಂತು ಕುಟುಂಬಕ್ಕೆ ನೀಡಲು ನಿರ್ಧರಿಸಲಾಗಿದೆ.
ಈ ವೇಳೆ ಹನುಮಂತು ಅವರ ಕರ್ತವ್ಯವನ್ನು ಸಿಒಒ ಹರೀಶ್ ಕುಮಾರ್, ಸಂಪಾದಕ ದಿವಾಕರ್, ಔಟ್ ಪುಟ್ ಮುಖ್ಯಸ್ಥ ಆನಂದ್, ಜಿಲ್ಲಾ ವಿಭಾಗದ ಮುಖ್ಯಸ್ಥ ಮನೋಹರ್ ನೆನೆದರು. ಸಂತಾಪ ಸೂಚಕ ಸಭೆಯಲ್ಲಿ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಿ ಹನುಮಂತು ಅವರಿಗೆ ಗೌರವ ಸಲ್ಲಿಸಲಾಯಿತು.
ರಸ್ತೆ ಅಪಘಾತದಲ್ಲಿ ಮಂಗಳವಾರ ಸಾವನ್ನಪ್ಪಿದ ರಾಮನಗರ ಜಿಲ್ಲೆ ಪಬ್ಲಿಕ್ ಟಿವಿ ವರದಿಗಾರ ಹನುಮಂತು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದೆ. ಮೃತ ಪತ್ರಕರ್ತ ಹನುಮಂತು ಅವರ ಪತ್ನಿ ಶಶಿಕಲಾ ಅವರಿಗೆ ಐದು ಲಕ್ಷ ರೂಪಾಯಿಗಳ ಚೆಕ್ ನೀಡಿ ಅವರ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದೆ. pic.twitter.com/HWseRSqo4X
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) April 22, 2020
ರಸ್ತೆ ಅಪಘಾತದಲ್ಲಿ ಮಂಗಳವಾರ ಸಾವನ್ನಪ್ಪಿದ ರಾಮನಗರ ಜಿಲ್ಲೆ ಪಬ್ಲಿಕ್ ಟಿವಿ ವರದಿಗಾರ ಹನುಮಂತು ಅವರ ಮನೆಗೆ ಭೇಟಿ ನೀಡಿ ಎಚ್ಡಿ ಕುಮಾರಸ್ವಾಮಿ ಸಾಂತ್ವನ ತಿಳಿಸಿದ್ದಾರೆ. ಮೃತ ಪತ್ರಕರ್ತ ಹನುಮಂತು ಅವರ ಪತ್ನಿ ಶಶಿಕಲಾ ಅವರಿಗೆ ಐದು ಲಕ್ಷ ರೂಪಾಯಿಗಳ ಚೆಕ್ ನೀಡಿ ಅವರ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿರುವುದಾಗಿ ಎಚ್ಡಿಕೆ ಹೇಳಿದ್ದಾರೆ.
ಹನುಮಂತು ಆತ್ಮಕ್ಕೆ ಶಾಂತಿ ಕೋರಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪತ್ರಕರ್ತರು, ಛಾಯಾಗ್ರಾಹಕರು ಭಾಗಿಯಾಗಿ ಒಂದು ನಿಮಿಷ ಮೌನಾಚರಣೆ ಮಾಡಿ ಅಗಲಿದ ವರದಿಗಾರನಿಗೆ ಸಂತಾಪ ಸೂಚಿಸಿದರು. ಹನುಮಂತು ಕುಟುಂಬಕ್ಕೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ 10 ಸಾವಿರ ರೂ. ಧನ ಸಹಾಯ ನೀಡುವುದಾಗಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ತಿಳಿಸಿದರು.