ಬೆಂಗಳೂರು: ಪಬ್ಲಿಕ್ ಟಿವಿಯ ದಶಮಾನೋತ್ಸವ ಸಂಭ್ರಮದಲ್ಲಿ ಜ್ಞಾನ ದೀವಿಗೆ 2ನೇ ಅವೃತ್ತಿಗೆ ಚಾಲನೆ ನೀಡಲಾಯಿತು. ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಚಾನೆಲ್ ಮಾಡುವುದು ಸುಲಭ. ಆದರೆ ಅದನ್ನು ಮುನ್ನಡೆಸುವುದು ಬಹಳ ಕಷ್ಟ. ಪಬ್ಲಿಕ್ ಟಿವಿಗೆ ಎರಡು ಬ್ರ್ಯಾಂಡ್ ನೇಮ್ ಇದೆ. ಒಂದು ಪಬ್ಲಿಕ್ ಟಿವಿ. ಇನ್ನೊಂದು ರಂಗಣ್ಣ. ಚೆನ್ನಾಗಿ ಸುದ್ದಿ ಕೊಟ್ಟರೆ ಜನರ ಬಳಿ ತಲುಪಬಹುದು ಎನ್ನುವುದಕ್ಕೆ ಪಬ್ಲಿಕ್ ಟಿವಿ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
10 ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಸೇವೆಯನ್ನು ಮಾಡುತ್ತಿದೆ. ಮಕ್ಕಳಿಗೆ ಟ್ಯಾಬ್ಲೆಟ್ ನೀಡುವ ಮೂಲಕ ಸಂಭ್ರಮಿಸುತ್ತಿವೆ. ಈ ಜ್ಞಾನದೀವಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿಗೆ ದಶಕದ ಸಂಭ್ರಮ – ಶಾಂತಿಧಾಮಕ್ಕೆ 25 ಲಕ್ಷ ರೂ. ವಿತರಣೆ
ಸಿದ್ದರಾಮಯ್ಯ ಮಾತನಾಡಿ, ಮನುಷ್ಯನಿಗೆ ಸಾಧಿಸಬೇಕಾದ ಛಲ, ಬದ್ಧತೆ ಇರಬೇಕು. ದುರಾಸೆ ಇರಬಾರದು. ಜನಪರವಾಗಿ ಇರಬೇಕು. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಮೂಲಕ ಪಬ್ಲಿಕ್ ಟಿವಿ ಉತ್ತಮ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಸತ್ಯ ಹೇಳುವಾಗ ಕೆಲವೊಮ್ಮೆ ನಿಷ್ಠುರವಾಗಿರಬೇಕಾಗುತ್ತದೆ. ಕಟುವಾಗಿರಬೇಕಾಗುತ್ತದೆ. ನೂರಕ್ಕೆ ನೂರು ಸತ್ಯ ಹೇಳಲಿಕ್ಕೆ ಆಗದಿದ್ದರೂ ಬಹುತೇಕವಾಗಿ ಸತ್ಯ ಹೇಳಬೇಕು. ರಾಜಕರಣ ಕೆಟ್ಟು ಹೋಗಿದೆ ಅಂತಾರೆ. ಆದರೆ ರಾಜಕಾರಣ ಕೆಟ್ಟು ಹೋಗಿಲ್ಲ. ರಾಜಕೀಯ ವ್ಯಕ್ತಿಗಳಿಂದ ಹಾಳಾಗಿದೆ ಎಂದರು.
ಈ ವೇಳೆ ಸಿಎಂ ಬೊಮ್ಮಾಯಿ ಅವರ ಕ್ಷೇತ್ರವಾದ ಶಿಗ್ಗಾಂವಿಯ ಕೋಣನಕೆರೆ ಮತ್ತು ಕುಣಿಮೆರಳ್ಳಿಹಳ್ಳಿ ಶಾಲೆಯ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಲಾಯಿತು. ಮಾಜಿ ಸಿಎಂ ಸಿದ್ದರಾಮಯ್ಯನವರ ಬಾದಾಮಿ ಕ್ಷೇತ್ರದಿಂದ ಆದರ್ಶ ವಿದ್ಯಾಲಯ ಪ್ರೌಢ ಶಾಲೆ, ಮುತ್ತಲಗೇರಿ, ಕೆಪಿಎಸ್ ನೀರಬೂದಿಹಾಳ, ಅನವಾಲ್, ನಂದಿಕೇಶ್ವರ, ಚಿಕ್ಕ ಮುಚ್ಚಳಗುಡ್ಡ, ಬಾದಾಮಿಯ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಲಾಯಿತು.