Public TV Impact | ಕಲಬುರಗಿ ಸೆಂಟ್ರಲ್‌ ಜೈಲ್‌ನ ಇಬ್ಬರು ಅಧಿಕಾರಿಗಳು ಅಮಾನತು

Public TV
1 Min Read
Kalaburagi 1

ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ (Kalaburagi Central Jail) ಕೈದಿಗಳ ಬಿಂದಾಸ್ ಲೈಫ್ ಪ್ರಕರಣವನ್ನು ಸಿಸಿಬಿಗೆ (CCB) ವರ್ಗಾಯಿಸಿದ ಬೆನ್ನಲ್ಲೇ ಜೈಲಿನ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಜೈಲರ್‌ಗಳಾದ ಶೆಹನಾಜ್ ಹಾಗೂ ಪಾಂಡುರಂಗ ಇಬ್ಬರನ್ನು ಅಮಾನತುಗೊಳಿಸಿ ಕಾರಾಗೃಹ ಇಲಾಖೆಯ ಡಿಜಿ ಆದೇಶ ಹೊರಡಿಸಿದ್ದಾರೆ.

allegation of honeytrap and blackmail in kalaburagi jail SP Yashodha visited jail

ಕೇಂದ್ರ ಕಾರಾಗೃಹದ ಕರ್ಮಕಾಂಡದ ಬಗ್ಗೆ ‘ಪಬ್ಲಿಕ್ ಟಿವಿ’ (Public TV) ವಿಸ್ತೃತ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಸಿಸಿಬಿ ವಿಭಾಗದ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿತ್ತು. ಬಳಿಕ ಜೈಲಿನ ಮೇಲೆ ಪೊಲೀಸ್ ಆಯುಕ್ತರು ದಾಳಿ ಮಾಡಿದ್ದರು. ದಾಳಿ ವೇಳೆ ಎರಡು ಮೊಬೈಲ್ ಸೇರಿದಂತೆ ಸಿಗರೇಟ್, ಗುಟ್ಕಾ ಪ್ಯಾಕೆಟ್ ಪತ್ತೆಯಾಗಿತ್ತು. ಹೀಗಾಗಿ ಇಬ್ಬರು ಜೈಲರ್‌ಗಳನ್ನ ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ: ಕಲಬುರಗಿ ಸೆಂಟ್ರಲ್ ಜೈಲಲ್ಲಿ ಉಗ್ರನಿಂದ ಹನಿಟ್ರ್ಯಾಪ್ – ಮಾಹಿತಿ ಕಲೆಹಾಕಿದ ಎಸ್‌ಪಿ ಯಶೋಧಾ

Kalaburagi Central Jail Hifi Life 1

ಸಿಸಿಬಿ ಅಧಿಕಾರಿಗಳಿಂದ ಮುಂದುವರಿದ ಶೋಧ:
ಕಲಬುರಗಿ ಸೆಂಟ್ರಲ್‌ ಜೈಲಲ್ಲಿ ಕೈದಿಗಳ ಬಿಂದಾಸ್ ಲೈಫ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳು 2ನೇ ದಿನವಾದ ಶನಿವಾರವೂ ಜೈಲಿನಲ್ಲಿ ಶೋಧಕಾರ್ಯ ಮುಂದುವರಿಸಿದ್ದಾರೆ. ಕಾರಾಗೃಹ ಇಲಾಖೆ ಡಿಜಿ ಕಚೇರಿಯ ಎಸ್ಪಿ ಯಶೋಧಾ ನೇತೃತ್ವದಲ್ಲಿ ಶೋಧ ನಡೆಯುತ್ತಿದೆ. ಈಗಾಗಲೇ ಜೈಲಿನ ಅಧಿಕಾರಿಗಳ ತನಿಖೆ ನಡೆಸಿರುವ ಎಸ್ಪಿ ಯಶೋಧಾ ಅವರು, ಶನಿವಾರ ಜೈಲಿನ ವಾರ್ಡನ್ ಸೇರಿ ಹಲವರ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ತನಿಖೆ ಸಿಸಿಬಿಗೆ ವರ್ಗಾಯಿಸಿದ್ದೇಕೆ?
ಜೈಲಿನಲ್ಲಿದ್ದುಕೊಂಡೇ ವೀಡಿಯೋ ಕಾಲ್ ಮಾಡಿದ್ದ ಕೈದಿ ಸಾಗರ್, ಸೋನು, ವಿಶಾಲ್ ಸೇರಿದಂತೆ ಏಳು ಜನರ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ತ್ವರಿತ ಹಾಗೂ ಕುಲಂಕಷ ತನಿಖೆಗಾಗಿ ಸಿಸಿಬಿಗೆ ಪ್ರಕರಣವನ್ನು ವರ್ಗಾಯಿಸಲಾಗಿದೆ. ಕೇಂದ್ರ ಕಾರಾಗೃಹದಲ್ಲಿನ ವಿಚಾರಣಾಧೀನ ಕೈದಿಗಳಿಬ್ಬರು ಕೆಲ ಕೈದಿಗಳನ್ನು ವೀಡಿಯೋ ಕಾಲ್ ನೆಪದಲ್ಲಿ ಹನಿಟ್ರ್ಯಾಪ್‌ಗೆ ಕೆಡವಿ, ಅವರಿಗೆ ಹಣದ ಬೆದರಿಕೆ ಒಡ್ಡಿದ ಆರೋಪವೂ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಜೈಲಿನ ಕೈದಿಯೊಬ್ಬರ ಫೋನ್ ಕರೆಯ ಸಂಭಾಷಣೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಬಿಂದಾಸ್ ಲೈಫ್ – ಪ್ರಕರಣ ಸಿಸಿಬಿಗೆ ವರ್ಗಾವಣೆ

Share This Article