ನೆಲಮಂಗಲ: ಮಹಾಮಾರಿ ಕೊರೊನಾ ವೈರಸ್ ಲಾಕ್ಡೌನ್ ಸಮಯದಲ್ಲಿ ಬಡವರಿಗೆ ಆಧಾರವಾಗಿದ್ದ, ಡಾ.ಎಂ ಲೀಲಾವತಿ ಆಸ್ಪತ್ರೆಗೆ ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಬೀಗ ಹಾಕಲಾಗಿತ್ತು.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಆಸ್ಪತ್ರೆಗೆ ಬೀಗ ಹಾಕಿದ ವಿಚಾರದಲ್ಲಿ ಸಾಮಾಜಿಕ ಕಳಕಳಿಯಿಂದ ಪಬ್ಲಿಕ್ ಟಿವಿಯಲ್ಲಿ ಗುರುವಾರ ಸಂಜೆ ವರದಿ ಪ್ರಸಾರವಾಗಿಸತ್ತು. ಪರಿಣಾಮ ಇಂದು ಆರೋಗ್ಯಾಧಿಕಾರಿಗಳು ಎಚ್ಚೆತ್ತಿದ್ದು, ವೈದ್ಯರನ್ನು ನೇಮಕ ಮಾಡಿದ್ದಾರೆ.
ಗ್ರಾಮೀಣ ಭಾಗದ ಜನರ ಹಾಗೂ ರೋಗಿಗಳ ಪರದಾಟದ ವರದಿ ಮಾಡಿದ್ದ ಪಬ್ಲಿಕ್ ಟಿವಿಗೆ ಹಿರಿಯ ನಟಿ ಲೀಲಾವತಿ, ನಟ ವಿನೋದ್ ರಾಜ್ ಹಾಗೂ ಗ್ರಾಮಸ್ಥರು ಧನ್ಯವಾದ ತಿಳಿಸಿದ್ದಾರೆ. ಇಂದು ಯಾವುದೇ ಸಮಸ್ಯೆ ಇಲ್ಲದೆ ಆಸ್ಪತ್ರೆಯ ಬಾಗಿಲು ಓಪನ್ ಮಾಡಿ ವೈದ್ಯರು ಕೆಲಸ ನಿರ್ವಹಿಸುತ್ತಿದ್ದಾರೆ.
ಆಸ್ಪತ್ರೆಗೆ ಬೀಗ ನೋಡಿ ಆಘಾತಕ್ಕೆ ಒಳಗಾಗಿದ್ದ ಲೀಲಾವತಿ ಹಾಗೂ ವಿನೋದ್ ರಾಜ್, ಯಾಕೆ ನಮ್ಮ ಹಾಗೂ ನಮ್ಮ ಹಳ್ಳಿ ಜನರ ಮೇಲೆ ಈ ರೀತಿಯ ದ್ವೇಷ. ನಾಲ್ಕು ವರ್ಷದ ಹಿಂದೆ ಇದೇ ಸಮಸ್ಯೆಯಾಗಿತ್ತು. ಆಗ ಪಬ್ಲಿಕ್ ಟಿವಿಯ ವರದಿ ಬಳಿಕ ಆಗಿನ ಆರೋಗ್ಯ ಸಚಿವ ಯು.ಟಿ ಖಾದರ್ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದ್ದರು. ಆದರೆ ಈಗ ಇದೆ ಸಮಸ್ಯೆ ಮತ್ತೆ ಮತ್ತೆ ಮರುಕಳಿಸಿರುವುದು ವಿಪರ್ಯಾಸವೇ ಸರಿ ಎಂದು ಹಿರಿಯ ನಟಿ ಲೀಲಾವತಿಯವರು ಕಳವಳ ವ್ಯಕ್ತಪಡಿಸಿದ್ದರು.