ಬೆಂಗಳೂರು : ಪಬ್ಲಿಕ್ ಟಿವಿ ಆಯೋಜನೆಯ ಎರಡನೇ ವರ್ಷದ ಆಹಾರ ಮೇಳಕ್ಕೆ ಅದ್ಧೂರಿಯಾಗಿ ತೆರೆಬಿದ್ದಿದೆ. ನಗರದ ಮಲ್ಲೇಶ್ವರಂ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಈ ಆಹಾರ ಮೇಳದಲ್ಲಿ ಮೂವತ್ತಕ್ಕೂ ಹೆಚ್ಚು ಮಳಿಗೆಗಳು ಮತ್ತು ನೂರಕ್ಕೂ ಹೆಚ್ಚು ಆಹಾರ ಖಾದ್ಯಗಳು ಒಂದೇ ಸೂರಿನಡಿ ಸಿಕ್ಕಿತ್ತು.
ಕಡೆ ದಿನವಾದ ಇಂದು ಆಹಾರ ಮೇಳಕ್ಕೆ ಜನಸಾಗರವೇ ಹರಿದು ಬಂತು. ಸಿಲಿಕಾನ್ ಸಿಟಿಯ ಜನರು ಆಹಾರ ಮೇಳಕ್ಕೆ ಆಗಮಿಸಿ ಇಷ್ಟವಾದ ಆಹಾರ ಖಾದ್ಯಗಳನ್ನ ಸೇವನೆ ಮಾಡಿದ್ದಾರೆ. ಎರಡು ದಿನಗಳ ಕಾಲದ ಆಹಾರ ಮೇಳಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂದು ಪುರುಷರಿಗಾಗಿ ಇಡ್ಲಿ ತಿನ್ನುವ ಸ್ಫರ್ಧೆಯನ್ನ ಏರ್ಪಡಿಸಲಾಗಿತ್ತು. ಒಂದು ನಿಮಿಷದಲ್ಲಿ ಅತಿ ಹೆಚ್ಚು ಇಡ್ಲಿ ತಿಂದವರಿಗೆ ಪ್ರಥಮ, ದ್ವೀತಿಯ ಮತ್ತು ತೃತೀಯ ಬಹುಮಾನವನ್ನ ನೀಡಲಾಯಿತು. ಇದರಲ್ಲಿ ಗೆದ್ದ ಮೂರು ಜನಕ್ಕೆ ಪ್ರಶಸ್ತಿ ನೀಡಲಾಯಿತು. ಈ ಆಹಾರ ಮೇಳದಲ್ಲಿ ಭಾಗವಹಿಸಿದ್ದ ಮೂವತ್ತಕ್ಕೂ ಹೆಚ್ಚು ಸ್ಟಾಲ್ ಮಾಲೀಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯ್ತು.
ಡಿಸಿಪಿ ಶಶಿಕುಮಾರ್ ಆಗಮಿಸಿ ವಿವಿಧ ಖಾದ್ಯಗಳನ್ನ ಸವಿದು, ಪಬ್ಲಿಕ್ ಟಿವಿ ವೇದಿಕೆಯಲ್ಲೇ ಗೊಂಬೆ ಹೇಳುತೈತ್ತೆ ಹಾಡನ್ನು ಹಾಡಿದರು. ಇನ್ನೂ ಅಹಂ ಆತ್ಮ ಸೂಲ್ಕ್ ನ ವಿದ್ಯಾರ್ಥಿಗಳು ಭರತನಾಟ್ಯ ಮಾಡಿ ಎಲ್ಲರ ಹುಬ್ಬೇರಿಸಿದರು.