`ಪಬ್ಲಿಕ್ ಟಿವಿ’ ಮುಖ್ಯಸ್ಥ ರಂಗನಾಥ್ ಪ್ರೇರಣೆ – ಇಡೀ ಗ್ರಾಮಕ್ಕೆ 24*7 ನೀರು ಸೌಲಭ್ಯ ಕಲ್ಪಿಸಿದ ಗ್ರಾಪಂ‌ ಅಧ್ಯಕ್ಷ

Public TV
2 Min Read
HR Ranganath

– ಮೋದಿ ಸರ್ಕಾರದಿಂದ ಮೆಚ್ಚುಗೆ; ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ

ಕಲಬುರಗಿ: ಜಿಲ್ಲೆಯ ಯುವಕನೊಬ್ಬ ತನ್ನ ಮನೆ ಆಯ್ತು ಅಂತಾ ಜೀವನ ಸಾಗಿಸುತ್ತಿದ್ದ. ಆದ್ರೆ ಕಳೆದ 5 ವರ್ಷಗಳ ಹಿಂದೆ ಹೆಚ್‌.ಆರ್ ರಂಗನಾಥ್ (HR Ranganath) ಅವರ ಭೇಟಿಗೆ ಬಂದಿದ್ದ ಆ ಯುವಕನನ್ನು `ಏನಾದ್ರು ಸಾಧನೆ ಮಾಡಿ ಬಾ’ ಆಗ ನಿನ್ನ ಜೊತೆ ಮಾತನಾಡ್ತೀನಿ ಅಂತ ಹುರಿದುಂಬಿಸಿದ್ರು. ಇದನ್ನೇ ಪ್ರೇರಣೆಯಾಗಿ ತೆಗೆದುಕೊಂಡ ಆ ಯುವಕ ಗ್ರಾಮಕ್ಕೆ ಹೋಗಿ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷನಾದ. ನಂತರ ಇಡೀ ಗಣಜಲಖೇಡ ಗ್ರಾಮಕ್ಕೆ (Ganjalkhed Village) 24*7 ನೀರಿನ ಸೌಲಭ್ಯ ಕಲ್ಪಿಸಿದ. ಈಗ ಈ ಗ್ರಾಮ ರಾಜ್ಯದ ಮೊದಲ 24*7 ನೀರು ವಿತರಣೆ ಆಗುತ್ತಿರುವ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಲಬುರಗಿಯ (Kalaburagi) ಗ್ರಾಮೀಣ ಕ್ಷೇತ್ರದ ಗಣಜಲಖೇಡದಲ್ಲಿ ಈ ಹಿಂದೆ ಒಂದು ಬಿಂದಿಗೆ ನೀರು ತರಬೇಕು ಅಂದ್ರೂ ಕಿಲೋಮೀಟರ್‌ ದೂರ ಸಾಗಬೇಕಿತ್ತು. ಗ್ರಾಮಸ್ಥರ ಈ‌ ಸಮಸ್ಯೆ ಅರಿತ ಪಂಚಾಯಿತಿ ಅಧ್ಯಕ್ಷ ಶ್ರೀಧರ ಇಡೀ ಗ್ರಾಮಕ್ಕೆ ದಿನದ 24 ಗಂಟೆಯೂ ನೀರಿನ ಸೌಲಭ್ಯ ಕಲ್ಪಿಸಲು ಪ್ಲ್ಯಾನ್‌ ಮಾಡಿದ್ರು. ನೀರು ಸರಬರಾಜು ಮಾಡಲು ಪ್ಲ್ಯಾನ್ ಮಾಡಿ, ಜೆಜೆಎಂ ಸಹಯೋಗದೊಂದಿಗೆ ಇಡೀ ರಾಜ್ಯದಲ್ಲಿಯೇ ಗಣಜಲಖೇಡ ಗ್ರಾಮಕ್ಕೆ 24*7 ನೀರು ಸಪ್ಲೈ ಇರುವ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿಸಿದ್ದಾರೆ.

water

ತನ್ನ ಈ ಸಾಮಾಜಿಕ ಕಾರ್ಯಕ್ಕೆ ʻಪಬ್ಲಿಕ್ ಟಿವಿʼ (Public TV) ಮುಖ್ಯಸ್ಥ ಹೆಚ್.ಆರ್ ರಂಗನಾಥ್ ಅವರೇ ಪ್ರೇರಣೆಯಾಗಿದ್ದಾರೆ ಎಂದು ಸ್ವತಃ ಶ್ರೀಧರ್‌ ಅವರು ಹೇಳಿಕೊಂಡಿದ್ದಾರೆ. 5 ವರ್ಷಗಳ ಹಿಂದೆ ʻಪಬ್ಲಿಕ್ ಟಿವಿʼ ಬೆಂಗಳೂರು ಕಚೇರಿಗೆ ಆಗಮಿಸಿ ರಂಗನಾಥ್ ಅವರನ್ನು ಭೇಟಿಯಾಗಿ ಮಾತನಾಡಲು ಅವಕಾಶ ಕೇಳಿದ್ದರು.

Contaminated Water

ಈ ಸಂದರ್ಭದಲ್ಲಿ ಶ್ರೀಧರ್‌ಗೆ ರಂಗನಾಥ್ ಅವರು ಒಂದು ಸೆಲ್ಫಿ ನೀಡಿ, ಜೀವನದಲ್ಲಿ ಏನಾದ್ರೂ ಸಾಮಾಜಿಕವಾಗಿ ಸಾಧನೆ‌ ಮಾಡಿ ಬಾ, ಆಗ ನಿನ್ನ ಜೊತೆ ಮಾತನಾಡಿಸುತ್ತೇನೆ ಎಂಬುದಾಗಿ ಹೇಳಿದ್ದರು. ಅವರ ಮಾತನ್ನು ಸವಾಲಿನಂತೆ ಸ್ವೀಕರಿಸಿದ ಶ್ರೀಧರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಳಿಕ ಇಡೀ ಗಣಜಲಖೇಡ ಗ್ರಾಮಕ್ಕೆ ಅತ್ಯುತ್ತಮ ನೀರಿನ ಸಂಪರ್ಕ ಕಲ್ಪಿಸಿದ್ದಾರೆ. ಈ ಮೂಲಕ ರಾಜ್ಯದ ಮೊದಲ 24*7 ನೀರು ಸರಬರಾಜಾಗುವ ಗ್ರಾಮ ಎಂಬ ಹೆಗ್ಗಳಿಕೆ ಪಾತ್ರವಾಗುವಂತೆ ಮಾಡಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶ್ರೀಧರ ಮಾಡಿದ ಈ ಕಾರ್ಯಕ್ಕೆ ಕೇಂದ್ರದ‌ ಮೋದಿ ಸರ್ಕಾರ ಸಹ‌ ಮೆಚ್ಚುಗೆ ವ್ಯಕ್ತಪಡಿಸಿದೆ. ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ವಿಶೇಷ ಆಹ್ವಾನ ನೀಡಿದೆ.

ಈ ಹಿಂದೆಯೂ ಗ್ರಾಮದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು 5 ಕಡೆ ಬಾವಿ ತೆಗೆಸಿದ್ರು, ಆದ್ರೆ ಹನಿ ನೀರು ಸಿಕ್ಕಿರಲಿಲ್ಲ. ನಂತರ ಭೂವಿಜ್ಞಾನಿಗಳನ್ನ ಕರೆಸಿ ನೀರಿನ ಮೂಲ ಶೋಧಕ್ಕೆ ಮುಂದಾದರು. ಆಗ ಗ್ರಾಮದ ಚೆನ್ನಣ್ಣ ಎಂಬ ರೈತನ ಜಮೀನಿನಲ್ಲಿ ನೀರು ಇರುವುದು ಪತ್ತೆಯಾಯಿತು. ಆದರೆ ಭೂಮಿ ಖರೀದಿಗೆ ಪಂಚಾಯತ್ ನಲ್ಲಿ ಅವಕಾಶವಿರಲಿಲ್ಲ, ಹೀಗಾಗಿ ಗ್ರಾಮ‌ ಪಂಚಾಯಿತಿ ಅಧ್ಯಕ್ಷ ಶ್ರೀಧರ ಹಾಗೂ ಸ್ಥಳೀಯ ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಢ ಅವರ ವೈಯಕ್ತಿಕ ಹಣದಿಂದ ಆ ಭೂಮಿ‌ ಖರೀದಿಸಿ ಬಾವಿ ತೊಡಿಸಿದರು. ಇದರಿಂದ ನೀರು ಸಿಕ್ಕಿತು. ಆಗ ಜೆಜೆಎಂ ಹಾಗೂ ಸರ್ಕಾರದ ಯೋಜನೆ ಬಳಸಿ ಇಡೀ ಗ್ರಾಮಕ್ಕೆ ಪ್ರತಿ‌ ಮನೆ ಮನೆಗೆ 24*7 ನೀರು ಸರಬರಾಜು ಮಾಡಲಾಗುತ್ತಿದೆ.

Share This Article