ಬೆಂಗಳೂರು: ಪಬ್ಲಿಕ್ ಟಿವಿ ಪ್ರಸ್ತುತಪಡಿಸುತ್ತಿರುವ ವಿದ್ಯಾಪೀಠ 5ನೇ ಆವೃತ್ತಿಯ ಶೈಕ್ಷಣಿಕ ಮೇಳಕ್ಕೆ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಚಾಲನೆ ದೊರಕಿದೆ.
ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್ಆರ್ ರಂಗನಾಥ್ ಎಕ್ಸ್ ಪೋವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ್ದು, 80ಕ್ಕೂ ಹೆಚ್ಚಿನ ವಿದ್ಯಾಸಂಸ್ಥೆಗಳು ಭಾಗಿಯಾಗಿವೆ.
ಉದ್ಘಾಟನೆ ಬಳಿಕ ಮಾತನಾಡಿದ ಹೆಚ್ಆರ್ ರಂಗನಾಥ್, ಇತ್ತೀಚಿನ ಶೈಕ್ಷಣಿಕ ವ್ಯವಸ್ಥೆಗೆ ಕೊರೊನಾ ಪಾಠ ಕಲಿಸಿದೆ. ಆನ್ಲೈನ್ ಶಿಕ್ಷಣ ವ್ಯವಸ್ಥೆ ಪ್ರಾರಂಭವಾಗುತ್ತಿದೆ. ವಿದ್ಯಾರ್ಥಿಗಳು ಮುಂದೇನು ಆಗಬಹುದು ಎಂಬ ಪ್ರಶ್ನೆಗೆ ಈ ಎಕ್ಸ್ ಪೋ ಮಾರ್ಗದರ್ಶನ ನೀಡಲಿದೆ. ಈ ಎಕ್ಸ್ ಪೋ 3 ದಿನಗಳ ಕಾಲ ನಡೆಯಲಿದೆ. ಈ 5 ವರ್ಷಗಳ ಸಾಧನೆಗೆ ವಿದ್ಯಾಸಂಸ್ಥೆಗಳೇ ಕಾರಣ, ಈ ಎಲ್ಲಾ ಸಂಸ್ಥೆಗಳಿಗೆ ಧನ್ಯವಾದ ಹೇಳುತ್ತೇನೆ ಎಂದು ನುಡಿದರು.
ನಮ್ಮ ವಿದ್ಯಾಪೀಠ ವಿದ್ಯುತ್ ತಂತಿ ಇದ್ದಂತೆ. ವಿದ್ಯಾರ್ಥಿಗಳನ್ನು ಮತ್ತು ವಿದ್ಯಾ ಸಂಸ್ಥೆಗಳನ್ನು ಜೋಡಿಸುವ ಕೆಲಸ ಮಾಡುತ್ತಿದ್ದೇವೆ. 5 ವರ್ಷಗಳ ಕಾಲ ನಮ್ಮ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.
ಎಕ್ಸ್ ಪೋದಲ್ಲಿ ಏನಿದೆ?
ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಶಿಕ್ಷಣ ಮುಗಿದ ಬಳಿಕ ಮುಂದೇನು ಎಂಬ ಚಿಂತೆ ವಿದ್ಯಾರ್ಥಿಗಳಲ್ಲಿ ಕಾಡುತ್ತಿದ್ದರೆ, ವಿದ್ಯಾಪೀಠ ಪರಿಹಾರ ನೀಡಲಿದೆ. 3 ದಿನಗಳ ಕಾಲ ನಡೆಯಲಿರುವ ಶೈಕ್ಷಣಿಕ ಹಬ್ಬದಲ್ಲಿ ಉಚಿತ ಪ್ರವೇಶವಿದ್ದು, ಎಕ್ಸ್ ಪೋದಲ್ಲಿ ಸೆಮಿನಾರ್, ಪ್ಯಾನಲ್ ಡಿಸ್ಕರ್ಷನ್, ಸೇರಿದಂತೆ ಅನೇಕ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.
ವಿವಿಧ ಕ್ಷೇತ್ರದ ತಜ್ಞರಿಂದ ವಿಶೇಷ ಉಪನ್ಯಾಸ ಇರಲಿದ್ದು, ಸ್ಪರ್ಧೆಗಳಲ್ಲಿ ಗೆಲ್ಲುವವರಿಗೆ ಆಕರ್ಷಕ ಬಹುಮಾನ ಇರಲಿದೆ. ಜೊತೆಗೆ ಎಕ್ಸ್ ಪೋದಲ್ಲಿ ಐಎಎಸ್ ಟಾಪರ್ಗಳು ವಿದ್ಯಾರ್ಥಿಗಳಿಗೆ ಸಲಹೆ ನೀಡಲಿದ್ದಾರೆ.