ತುಮಕೂರು: ಕರುನಾಡ ಜನತೆಯ ನೆಚ್ಚಿನ ‘ಪಬ್ಲಿಕ್ ಟಿವಿ’ ದಶಮಾನೋತ್ಸವ ಸಂಭ್ರಮದಲ್ಲಿದೆ. 2012ರ ಫೆಬ್ರವರಿ 12ರಂದು ಲೋಕಾರ್ಪಣೆಗೊಂಡ ಪಬ್ಲಿಕ್ ಟಿವಿಗೆ ಹತ್ತು ವರ್ಷ ಪೂರೈಸಿದ ಸಂಭ್ರಮ. ಈ ಅಮೃತ ಘಳಿಗೆಯನ್ನು ಅರ್ಥಪೂರ್ಣವಾಗಿಸಲು ಸಿದ್ಧಗಂಗೆ ಶ್ರೀಗಳ ದಿವ್ಯ ಸಾನಿಧ್ಯ ಹಾಗೂ ಸಹಸ್ರಾರು ವಿದ್ಯಾರ್ಥಿಗಳ ಸಮಕ್ಷಮದಲ್ಲಿ ಶುಕ್ರವಾರ ಸಂಜೆ `ಪಬ್ಲಿಕ್ ದೀಪಾವಳಿ’ ಆಚರಿಸಲಾಯಿತು.
ಶ್ರೀಮಠದ ಸಿದ್ದಲಿಂಗ ಸ್ವಾಮೀಜಿ, ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ದಂಪತಿ, ಸಂಸ್ಥೆಯ ಸಿಓಓ ಹರೀಶ್ ಕುಮಾರ್ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಹಸ್ರಾರು ಮಕ್ಕಳು ದೀಪ ಬೆಳಗಿ ಪಬ್ಲಿಕ್ ಟಿವಿಗೆ ಶುಭ ಹಾರೈಸಿದರು. ಪಬ್ಲಿಕ್ ದೀಪಾವಳಿಯ ದೃಶ್ಯಗಳು ನಯನಮನೋಹರವಾಗಿದ್ದವು. ಇದನ್ನೂ ಓದಿ: ಭಾರತಕ್ಕೆ ಏಕದಿನ ಸರಣಿ – ವಿಂಡೀಸ್ಗೆ ವೈಟ್ವಾಶ್ ಮುಖಭಂಗ
ಈ ವೇಳೆ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಹೆಚ್.ಆರ್.ರಂಗನಾಥ್ ಅವರ ಸಮರ್ಪಣೆಯ ಕಾರಣದಿಂದ ‘ಪಬ್ಲಿಕ್ ಟಿವಿ’ 10 ವರ್ಷದಲ್ಲಿಯೇ 25 ವರ್ಷದ ಸಾಧನೆ ಮಾಡಿದೆ ಎಂದು ಶ್ಲಾಘಿಸಿದರು. ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್ಗೆ ಜನ ಹೇಗೆ ಕಾಯುತ್ತಾರೆ ಎಂಬುದನ್ನು ನೆನಪಿಸಿಕೊಂಡರು. ಪಬ್ಲಿಕ್ ಟಿವಿ ರಜತ ಮಹೋತ್ಸವ ಆಚರಿಸಲಿ ಎಂದು ಹಾರೈಸಿದರು.
ಸಂಸ್ಥೆಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು ಮಾತನಾಡಿ, ಪಬ್ಲಿಕ್ ಟಿವಿ ಆರಂಭಿಸಿದ ಸಂದರ್ಭದಲ್ಲಿ ಉದ್ಘಾಟನೆ ಕಾರ್ಯಕ್ರಮದಲ್ಲಿ ನಾನೊಬ್ಬನೇ ಇದ್ದೆ. ಆದರೆ ದಶಮಾನೋತ್ಸವ ಸಂದರ್ಭದಲ್ಲಿ ಶ್ರೀಮಠದ ಸಹಸ್ರಾರು ಮಕ್ಕಳೊಂದಿಗೆ ಪಾಲ್ಗೊಂಡಿದ್ದು ನಿಜಕ್ಕೂ ಖುಷಿಯಾಗಿದೆ. ಈ ಎರಡು ಕ್ಷಣಗಳನ್ನು ನನ್ನ ಜೀವನದಲ್ಲಿ ಸ್ಮರಣೀಯ ಎಂದು ತಿಳಿಸಿದರು. ಇದನ್ನೂ ಓದಿ: ಸಂಸ್ಕೃತದಲ್ಲಿ 5 ಚಿನ್ನದ ಪದಕಗಳನ್ನ ಗೆದ್ದ ಮುಸ್ಲಿಂ ದಿನಗೂಲಿ ಕಾರ್ಮಿಕನ ಮಗಳು
ಯಾವುದೇ ಕಾಯಕವನ್ನು ಪ್ರಾರಂಭ ಮಾಡುವುದು ಸುಲಭ. ಆದರೆ ಆ ಕಾಯಕವನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುವುದು ತುಂಬಾ ಕಷ್ಟದ ಕೆಲಸ. ಅಂತಹ ಅದ್ಭುತ ಕಾರ್ಯವನ್ನು ಶ್ರೀಗಳು ಮುಂದುವರಿಸುತ್ತಿದ್ದಾರೆ ಎಂದು ಸಿದ್ದಗಂಗಾ ಶ್ರೀಗಳ ಕಾರ್ಯವನ್ನು ಕೊಂಡಾಡಿದರು.
ಪಬ್ಲಿಕ್ ಟಿವಿ 10 ವರ್ಷದಲ್ಲಿ ಜನತೆಯ ಬೆಂಬಲದೊಂದಿಗೆ ಬೆಳೆದ ಪರಿಯನ್ನು ನೆನಪಿಸಿಕೊಂಡು ಸಂತಸ ವ್ಯಕ್ತಪಡಿಸಿದರು. ಈ ಕಾರ್ಯಕ್ರಮ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲು ಅವಕಾಶ ಮಾಡಿಕೊಟಿದ್ದಕ್ಕೆ ಚಿರಋಣಿ ಎಂದು ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: ಕೊರೊನಾ ಮಾರ್ಗಸೂಚಿ ಹೋದ ಮೇಲೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾಡ್ತೇವೆ: ಜೋಶಿ
ನಿಮ್ಮೆಲ್ಲರ ಪ್ರೀತಿಯಿಂದ ಈ ಹತ್ತು ವರ್ಷದಲ್ಲಿ ಪಬ್ಲಿಕ್ ಟಿವಿ ಸಾಧಿಸಿದ್ದು ಬಹಳಷ್ಟು, ಸಾಧಿಸಬೇಕಿರೋದು ಇನ್ನಷ್ಟು. ಈ ಸಾರ್ಥಕ ದಶಕದ ಹಿಂದೆ ನಮ್ಮೊಡನೆ ನೀವಿದ್ದೀರಿ. ನಮ್ಮನ್ನು ಇಷ್ಟರ ಮಟ್ಟಿಗೆ ಬೆಳೆಸಿದ್ದೀರಿ. ನಿಮಗೆ ನಾವು ಚಿರಋಣಿ. ಜೊತೆಗೆ ಕೇಬಲ್ ಆಪರೇಟರ್ಸ್, ಜಾಹೀರಾತುದಾರರಿಗೂ ಧನ್ಯವಾದ ಎಂದು ಕೃತಜ್ಞತೆ ಸಲ್ಲಿಸಿದರಲ್ಲದೇ, ಈ ಹತ್ತು ವರ್ಷದ ಪಯಣದ ಹಾದಿಯನ್ನು ಸಂಸ್ಥೆಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು ಮೆಲುಕು ಹಾಕಿದರು.