-ಚನ್ನಗಿರಿಯ ಜಾಕೀರ್ ಇವತ್ತಿನ ಪಬ್ಲಿಕ್ ಹೀರೋ
ದಾವಣಗೆರೆ: ಅಪರಿಚಿತ ಶವ ನೋಡಿದ್ರೆ ಸಾಕು ನಾವೆಲ್ಲ ನಮಗೆ ಯಾಕೇ ಬೇಕು ಅಂತ ಹಾಗೇ ಹೋಗ್ತಿವಿ. ಅಪಘಾತವಾದಾಗ ನಮಗೂ ಅವರಿಗೂ ಸಂಬಂಧವಿಲ್ಲ ಎನ್ನುವಂತೆ ನಿಂತು ನೋಡುತ್ತೇವೆ. ಇಲ್ಲೊಬ್ಬ ವ್ಯಕ್ತಿಯೊಬ್ಬರು ಅಫಘಾತವಾದ, ಅಪರಿಚಿತ ಶವಗಳನ್ನು ತೆಗೆದುಕೊಂಡು ಬಂದು ವಾರಸುದಾರರಿಗೆ ಮುಟ್ಟಿಸುವ ಕೆಲಸ ಮಾಡುವುದರ ಜೊತೆಗೆ ಗಾಯಾಳುಗಳನ್ನು ತಮ್ಮ ಸ್ವಂತ ವಾಹನದಲ್ಲಿ ಕರೆತಂದು ಜೀವವನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ.
21 ವರ್ಷಗಳಿಂದ ವಿಭಿನ್ನ ಸೇವೆಯಲ್ಲಿ ತೊಡಗಿಕೊಂಡಿರುವ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಿವಾಸಿ ಜಾಕೀರ್ ಅಲಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. 21 ವರ್ಷಗಳಿಂದ ಅನಾಥ ಶವಗಳು ಹಾಗೂ ಅಪಘಾತಕ್ಕೀಡಾಗಿ ಮುಟ್ಟೋಕೆ ಆಗದ ಸ್ಥಿತಿಯಲ್ಲಿ ಇರೋ ಹೆಣಗಳನ್ನು ವಾರಸುದಾರರಿಗೆ ತಲುಪಿಸುದ್ದಾರೆ. ಕಟ್ಟಿಗೆ ಕಡಿದು ಮಾರಿ ಕುಟುಂಬ ನಿರ್ವಹಿಸ್ತಿರೋ ಜಾಕೀರ್ ಒಂದು ದಿನ ಕಾಡಿಗೆ ಹೋಗಿದ್ದಾಗ ರಸ್ತೆ ಬದಿಯ ಸಾಲುಮರಕ್ಕೆ ವಾಹನವೊಂದು ಡಿಕ್ಕಿ ಹೊಡೆದಿತ್ತು. ಅದರಲ್ಲಿ 6 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕೆಲವರು ರಕ್ತದ ಮಡುವಿನಲ್ಲಿ ಒದ್ದಾಡ್ತಿದ್ದರೂ ಯಾರೂ ಸಹಾಯಕ್ಕೆ ಹೋಗಿರಲಿಲ್ಲ. ಆದರೆ ಜಾಕೀರ್ ಅರೆಕ್ಷಣ ಯೋಚಿಸದೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.
21 ವರ್ಷದಲ್ಲಿ ಇದುವರೆಗೆ ಅಪಘಾತದಲ್ಲಿ ಗಾಯಗೊಂಡ 1500ಕ್ಕಿಂತ ಹೆಚ್ಚು ಮಂದಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಜೊತೆಗೆ 2,500ಕ್ಕಿಂತ ಹೆಚ್ಚು ಶವಗಳನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ. ವಾರಸುದಾರರ ಮಾಹಿತಿ ಸಿಗದ ಅನಾಥ ಶವಗಳನ್ನು ತಾವೇ ಅಂತ್ಯಕ್ರಿಯೆ ಮಾಡಿದ್ದಾರೆ. ಯಾವುದೇ ಸಮಯದಲ್ಲಿ ಜನರಾಗಲಿ ಹಾಗೂ ಪೊಲೀಸರಾಗಿ ಕರೆ ಮಾಡಿದ್ರೆ ತಕ್ಷಣವೇ ಅಲ್ಲಿ ಹಾಜರಾಗ್ತಾರೆ. ಜಾಕೀರ್ ಕೆಲಸಕ್ಕೆ ರಾಜ್ಯ ಸರ್ಕಾರ ‘ಜೀವ ರಕ್ಷಕ’ ಪ್ರಶಸ್ತಿ ನೀಡಿ ಗೌರವಿಸಿದೆ.
https://www.youtube.com/watch?v=nKDyAOkzG4Q
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv