– ವೃದ್ಧಾಶ್ರಮಕ್ಕಾಗಿ ತಿಂಗಳ ಸಂಬಳ ಮೀಸಲು
ತುಮಕೂರು: ಊರಿಗೊಂದು ಮರ ಇರಬೇಕು. ಮನೆಗೊಬ್ಬರು ಹಿರಿಯರು ಇರಬೇಕು ಅನ್ನೋ ಮಾತಿದೆ. ಇತ್ತೀಚಿಗೆ ಕೆಲವರಿಗೆ ಮನೆಯಲ್ಲಿ ಹಿರಿಯರು ಇರೋದೇ ಕಿರಿಕಿರಿ ಆಗ್ಬಿಟ್ಟಿದೆ. ಆದ್ರೆ, ಇಂತಹ ಅನಾಥ ಹಿರಿ ಜೀವಗಳ ಬಾಳಿಗೆ ಬೆಳಕಾಗಿದ್ದಾರೆ ತುಮಕೂರಿನ ಎಲ್ಐಸಿ ಏಜೆಂಟ್ ಯಶೋಧ.
ಯಶೋಧಾ ಅವರು ಚಿಕ್ಕ ವಯಸ್ಸಿನಲ್ಲೇ ಶ್ರೀಶಾರದಾಂಭ ಎಂಬ ವೃದ್ಧಾಶ್ರಮ ತೆರೆದಿದ್ದಾರೆ. ಈ ಆಶ್ರಮದ ಮೂಲಕ ಅನಾಥ ಹಿರಿ ಜೀವಗಳಿಗೆ ಆಧಾರವಾಗಿದ್ದಾರೆ. ತಮ್ಮ ತಿಂಗಳ 20 ಸಾವಿರ ಸಂಬಳದ ಹಣವನ್ನೂ ಸಹ ವೃದ್ಧ ಜೀವಗಳಿಗಾಗಿ ಖರ್ಚು ಮಾಡುತ್ತಿದ್ದಾರೆ.
ಯಶೋಧ ವೃದ್ಧಾಶ್ರಮ ತೆರೆಯಲು ಸಹ ಒಂದು ಕಾರಣವಿದೆ. 2014ರಲ್ಲಿ ಬೀದಿಯಲ್ಲಿ ಬಿದ್ದಿದ್ದ ವೃದ್ಧರೊಬ್ಬರನ್ನು ಯಾವುದೋ ಒಂದು ಆಶ್ರಮಕ್ಕೆ ಸೇರಿಸಲು ಯಶೋಧ ಹೋದರಂತೆ. ಆದರೆ ಅಲ್ಲಿದ್ದವರು ನಿಮಗೆ ಅಷ್ಟೊಂದು ಆಸಕ್ತಿ ಇದ್ರೆ ನೀವೇ ಒಂದು ಆಶ್ರಮ ತೆರೆಯಿರಿ ಅಂದ್ರಂಥೆ. ಇದನ್ನೇ ಚಾಲೆಂಜಾಗಿ ತೆಗೆದುಕೊಂಡ ಯಶೋಧ, ತುಮಕೂರಿನ ಜಯನಗರದಲ್ಲಿ ಬಾಡಿಗೆ ಮನೆಯೊಂದನ್ನು ಪಡೆದು 30 ವೃದ್ಧರಿಗೆ ದಾರಿಯಾಗಿದ್ದಾರೆ.
2014ರಲ್ಲಿ ವೃದ್ಧಾಶ್ರಮ ಪ್ರಾರಂಭವಾದಾಗ ಹಣಕಾಸಿನ ಸಮಸ್ಯೆ ಜೊತೆಗೆ ಹತ್ತು ಹಲವು ಸಮಸ್ಯೆಗಳು ಎದುರಾದವು. ಆದರೂ ಛಲ ಬಿಡದೇ ಯಶೋಧ ಮುನ್ನುಗ್ಗುತ್ತಿದ್ದಾರೆ. ಇವರ ಸಾಮಾಜಿಕ ಸೇವೆ ಹೀಗೆ ಮುಂದುವರೆಯಲಿ ಎಂಬುವುದು ಪಬ್ಲಿಕ್ ಟಿವಿಯ ಆಶಯ.