ರಾಯಚೂರು: ಒಬ್ಬ ಅನಕ್ಷರಸ್ಥ ಬಡ ವಿಧವೆ ಮಹಿಳೆ ಐವರು ಮಕ್ಕಳೊಂದಿಗೆ ಸುಂದರ ಬದುಕು ಕಟ್ಟಿಕೊಂಡು ಪಬ್ಲಿಕ್ ಹೀರೋ ಆಗಿದ್ದಾರೆ
ರಾಯಚೂರು ತಾಲೂಕಿನ ಚಂದ್ರಬಂಡಾ ಗ್ರಾಮದ ನಿವಾಸಿ ಯಂಕಮ್ಮ ನಮ್ಮ ಪಬ್ಲಿಕ್ ಹೀರೋ. 10 ವರ್ಷಗಳ ಹಿಂದೆ ಗಂಡ ಸಾವನ್ನಪ್ಪಿದಾಗ ಎದೆಗುಂದದ ಯಂಕಮ್ಮ ಅವರು ಐವರು ಮಕ್ಕಳೊಂದಿಗೆ ಬಾಳಿ ಬದುಕಬೇಕು ಎಂಬ ಛಲ ಬೆಳೆಸಿಕೊಂಡವರು. ಇರೋ 8 ಎಕರೆಯ ಜಮೀನಿಗೆ ತಾವೇ ಕಚ್ಚೆ ಕಟ್ಟಿ ಇಳಿದ್ರು. ಎತ್ತುಗಳಿಗೆ ನೊಗ ಕಟ್ಟಿದ್ರು. ಬಿತ್ತಿ ಬೆಳೆದು ಮಾರುಕಟ್ಟೆಗೆ ಬೆಳೆ ಸಾಗಿಸೋ ತನಕ ಎಲ್ಲಾ ಕೆಲಸವನ್ನೂ ಯಂಕಮ್ಮ ನವರೇ ಮಾಡುತ್ತಾರೆ.
ಐವರು ಮಕ್ಕಳಲ್ಲಿ ಓರ್ವ ಮಗಳಿಗೆ ಮದುವೆ ಮಾಡಿದ್ದಾರೆ. ಮೂರು ಜನ ಹೆಣ್ಣು ಮಕ್ಕಳು ಹೈಸ್ಕೂಲ್ ಮೆಟ್ಟಿಲೇರಿದ್ದಾರೆ. ಯಂಕಮ್ಮ ಅವರು ಈಗ ಜಮೀನಿಗೆ ಒಂದು ಬೋರ್ವೆಲ್ ಹಾಕಿಸಿಕೊಂಡಿದ್ದಾರೆ. ಮಗ ಎದೆಯುದ್ದಕ್ಕೆ ಬೆಳೆದು ಅಮ್ಮನಿಗೆ ಸಹಾಯ ಮಾಡ್ತಿದ್ದಾನೆ.
ಕಷ್ಟ ಬಂದಾಗ ಅಬಲೆ ಕೂಡ ಹೇಗೆ ದಿಟ್ಟತನದಿಂದ ತನ್ನ ಬದುಕು ಕಟ್ಟಿಕೊಳ್ಳುತ್ತಾಳೆ ಎಂಬುದಕ್ಕೆ ಈ ಯಂಕಮ್ಮ ಸಾಕ್ಷಿಯಾಗಿದ್ದಾರೆ. ಯಾವ ಪುರುಷನಿಗೂ ಕಮ್ಮಿಯಿಲ್ಲದಂತೆ ಕೃಷಿ ಮಾಡಿ, ಸೈ ಎನಿಸಿಕೊಂಡ ಯಂಕಮ್ಮರಿಗೆ ನಮ್ಮದೊಂದು ನಮಸ್ಕಾರ.